
ವಾಷಿಂಗ್ಟನ್: ಸಂಧಾನ ಮಾತುಕತೆ ಹಿನ್ನೆಲೆಯಲ್ಲಿ ಇರಾನ್ನ ಆಯಕಟ್ಟಿನ ಪ್ರದೇಶಗಳ ಮೇಲಿನ ದಾಳಿಗೆ ತಾತ್ಕಾಲಿಕ ತಡೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾನ್ಡ್ ಟ್ರಂಪ್, ‘ಒಂದು ವೇಳೆ ನಮ್ಮ ಜತೆ ನಡೆಸುತ್ತಿರುವ ಮಾತುಕತೆ ಕೊನೆಗೊಂಡು, ಶೀಘ್ರವೇ ಒಪ್ಪಂದಕ್ಕೆ ಮುಂದಾಗದೇ ಹೋದಲ್ಲಿ ಇರಾನ್ ಮೇಲೆ ಭೀಕರ ದಾಳಿ ನಡೆಸಲಾಗುವುದು. ಈ ಸಲದ ದಾಳಿ ಇರಾನ್ನ ವಿದ್ಯುತ್ ಘಟಕಗಳು, ತೈಲ ಬಾವಿಗಳು, ನೀರು ಶುದ್ಧೀಕರಣ ಘಟಕದ ಮೇಲಾಗಿರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಜೊತೆ ಸಂಧಾನ ಮಾತುಕತೆ ನಡುವೆಯೇ, ಟ್ರುಥ್ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಟ್ರಂಪ್, ‘ಇರಾನ್ ಜತೆಗಿನ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಆದರೆ ಶೀಘ್ರದಲ್ಲೇ ಒಪ್ಪಂದಕ್ಕೆ ಬರದಿದ್ದರೆ ಮತ್ತು ಹೋರ್ಮುಜ್ ಜಲಸಂಧಿಯನ್ನು ತಕ್ಷಣವೇ ವ್ಯವಹಾರಕ್ಕೆ ಮುಕ್ತಗೊಳಿಸದಿದ್ದರೆ, ನಾವು ಉದ್ದೇಶಪೂರ್ವಕವಾಗಿ ಇನ್ನೂ ಸ್ಪರ್ಶಿಸದ ಎಲ್ಲಾ ವಿದ್ಯುತ್ ಸ್ಥಾವರಗಳು, ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪವನ್ನು ಸ್ಫೋಟಿಸಿ ಸಂಪೂರ್ಣವಾಗಿ ನಾಶಮಾಡುತ್ತೇವೆ. ಈ ಮೂಲಕ ಇರಾನ್ನಲ್ಲಿ ನಮ್ಮ ಸುಂದರವಾದ ‘ವಾಸ್ತವ್ಯ’ವನ್ನು ಮುಕ್ತಾಯಗೊಳಿಸುತ್ತೇವೆ. ಇದು 47 ವರ್ಷಗಳ ಇರಾನ್ನ ಉಗ್ರ ಆಳ್ವಿಕೆಯಲ್ಲಿ ಕೊಲ್ಲಲ್ಪಟ್ಟ ನಮ್ಮ ಸೈನಿಕರು ಮತ್ತು ಇತರರಿಗೆ ಪ್ರತೀಕಾರವಾಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ತಮ್ಮ ಸಂದರ್ಶನವೊಂದನ್ನು ನೀಡಿದ್ದ ಟ್ರಂಪ್ ಅದರಲ್ಲಿ, ‘ಮಧ್ಯಪ್ರಾಚ್ಯ ವಲಯಕ್ಕೆ ಈಗಾಗಲೇ ನಮ್ಮ 2500 ನೌಕಾ ಸಿಬ್ಬಂದಿ ಧಾವಿಸಿದ್ದಾರೆ. ಅಷ್ಟೇ ಪ್ರಮಾಣದ ಇನ್ನೊಂದು ತಂಡ ಕೂಡಾ ಅಲ್ಲಿಗೆ ಹೋಗುತ್ತಿದೆ. ನಾವು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಬಹುದು ಅಥವಾ ವಶಪಡಿಸಿಕೊಳ್ಳದೇ ಇರಬಹುದು. ಎಲ್ಲಾ ಆಯ್ಕೆಗಳು ನಮ್ಮ ಮುಂದಿವೆ. ಒಂದು ವೇಳೆ ನಾವು ಅಲ್ಲಿಗೆ ದಾಳಿ ಮಾಡುವುದಾದರೆ ಇನ್ನಷ್ಟು ಕಾಲ ಅಲ್ಲಿಯೇ ಇರಬೇಕಾಗಿ ಬರಬಹುದು’ ಎಂದು ಹೇಳಿದ್ದಾರೆ. ಜೊತೆಗೆ, ‘ನಮ್ಮ ದಾಳಿಯನ್ನು ಅವರು ರೀತಿ ತಡೆಯುತ್ತಾರೋ ಗೊತ್ತಿಲ್ಲ. ಏಕೆಂದರೆ ಅವರ ಬಳಿ ರಕ್ಷಣಾ ವ್ಯವಸ್ಥೆಯೇ ಉಳಿದಿಲ್ಲ. ನಾವು ದ್ವೀಪವನ್ನು ಸುಲಭವಾಗಿ ವಶಪಡಿಸಿಕೊಳ್ಳಬಲ್ಲೆವು’ ಎಂದು ಹೇಳಿದ್ದಾರೆ.
ಇದೇ ವೇಳೆ, ಇರಾನ್ ಸಂಸತ್ನ ಸ್ಪೀಕರ್ ಮೊಹಮ್ಮದ್ ಬಘೇರ್, ಹೋರ್ಮಜ್ ಜಲಸಂಧಿ ಮೂಲಕ ತೈಲ ಟ್ಯಾಂಕರ್ಗಳ ಸಾಗಣೆಗೆ ಅನುಮತಿ ನೀಡಿದ್ದಾರೆ. ಅವರು ನಮಗೆ ಪಾಕಿಸ್ತಾನದ ಧ್ವಜ ಹೊಂದಿದ 10 ಟ್ಯಾಂಕರ್ಗಳನ್ನು ಉಡುಗರೆಯಾಗಿ ನೀಡಿದ್ದರು. ಇದೀಗ ಮತ್ತೆ 20 ಉಡುಗೊರೆ ನೀಡಿದ್ದಾರೆ. ಅವೆಲ್ಲವೂ ಹೋರ್ಮಜ್ ಜಲಸಂಧಿ ನಡುವಿನಲ್ಲಿ ಸಾಗುತ್ತಿವೆ’ ಎಂದು ಟ್ರಂಪ್ ಹೇಳಿದ್ದಾರೆ.
ಈ ನಡುವೆ ಇರಾನ್ ಕೂಡಾ ಅಮೆರಿಕದ ದಾಳಿಗೆ ಸೂಕ್ತ ತಿರುಗೇಟು ನೀಡುವ ಎಚ್ಚರಿಕೆ ನೀಡಿದೆ. ನಮ್ಮ ಮೇಲೆ ಭೂದಾಳಿ ನಡೆಸಿದರೆ ನಾವು ಅಮೆರಿಕದ ದಾಳಿ ಎದುರಿಸುವ ಜೊತೆಗೆ ಕೊಲ್ಲಿ ದೇಶಗಳ ಮೇಲೂ ಭೂದಾಳಿ ಆರಂಭಿಸುತ್ತೇವೆ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ