ಆಫ್ಘಾನಿಸ್ತಾನದ ಮಸೀದಿ ಮೇಲೆ ಬಾಂಬ್ ದಾಳಿ, 30 ಸಾವು 40 ಮಂದಿಗೆ ತೀವ್ರ ಗಾಯ!

By Suvarna NewsFirst Published Aug 18, 2022, 4:19 PM IST
Highlights

ಆಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ಸದ್ದು ಮಾಡಿದೆ. ಉಗ್ರರ ನೆರಳಲ್ಲೇ ದಿನದೂಡುತ್ತಿರುವ ಆಫ್ಘಾನ್ ಜನತೆಗೆ ಇಂದು ಕರಾಳ ದಿನ. ಪ್ರಾರ್ಥನೆಗಾಗಿ ಮಸೀದಿಯಲ್ಲಿ ಸೇರಿದ್ದ ವೇಳೆ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಪರಿಣಾಮ 30 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಬೂಲ್(ಆ.18): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಬಾಂಬ್ ಸ್ಫೋಟ ಕಡಿಮೆಯಾಗಿಲ್ಲ. ಒಂದಲ್ಲಾ ಒಂದು ಕಡೆ ಬಾಂಬ್ ದಾಳಿ ನಡೆಯುತ್ತಲೇ ಇದೆ. ಇದೀಗ ಕಾಬೂಲ್‌ನ ಖೈರ್ ಖನ್ನ ವಲಯಜ ಪಿಡಿ 17ನಲ್ಲಿರುವ ಮಸೀದಿಯಲ್ಲಿ ಬಾಂಬ್ ಸ್ಪೋಟಿಸಲಾಗಿದೆ. ಬುಧವಾರ ಸಂಜೆ ಈ ಸ್ಫೋಟ ಸಂಭವಿಸಿದೆ. ಮಸೀದಿಯಲ್ಲಿ ಸಂಜೆ ಪ್ರಾರ್ಥನೆ ವೇಳೆ ಖೈರಾ ಖನಾ ನಿವಾಸಿಗಳು ಸೇರಿದ್ದರು. ಈ ವೇಳೆ ಬಾಂಬ್ ಸ್ಫೋಟಿಸಲಾಗಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೆ 30 ಮಂದಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಭದ್ರತಾ ಪಡೆ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ. ಖೈರಾ ಖನಾ ವಲಯವನ್ನು ಭದ್ರತಾ ಪಡೆ ಸುತ್ತುವರಿದಿದೆ. ಈ ದಾಳಿಯ ಹಿಂದೆ ಯಾರಿದ್ದಾರೆ ಅನ್ನೋದು ಇನ್ನೂ ಬಹಿರಂಗಗೊಂಡಿಲ್ಲ. ಇದು ಆತ್ಮಾಹುತಿ ದಾಳಿಯಾಗಿತ್ತಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.

ಪ್ರಬಲ ಬಾಂಬ್ ಸ್ಫೋಟಿಸಲಾಗಿದೆ. ಇದರಿಂದ ಮಸೀದಿ ಸಂಪೂರ್ಣ ಧ್ವಂಸವಾಗಿದೆ. ಮಸೀದಿಯ ಹತ್ತಿರದ ಕಟ್ಟಡಗಳು ಬಿರುಕು ಬಿಟ್ಟಿದೆ. ಘಟನೆ ಕುರಿತು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಂಜೆ ಹೊತ್ತಿಗೆ ಪ್ರಾರ್ಥನೆಗಾಗಿ ಮಸೀದಿಯಲ್ಲಿ ಸೇರಿದ್ದರು. ಈ ವೇಳೆ ಭಾರಿ ಶಬ್ದವೊಂದು ಕೇಳಿಬಂದಿತ್ತು. ಮಸೀದಿ ಪಕ್ಕದಲ್ಲಿರುವ ನಮ್ಮ ಕಟ್ಟದ ಗೋಡೆಗಳು ಬಿರುಕು ಬಿಟ್ಟಿತು. ಕಿಟಕಿ ಗಾಜುಗಳು ಪುಡಿಯಾಗಿತ್ತು. ಈ ಸ್ಫೋಟದ ತೀವ್ರತೆಗೆ ಹಲವರ ದೆಹಗಳು ಛಿದ್ರಗೊಂಡಿತ್ತು. ಕೆಲ ದೇಹಗಳು ದೂರಕ್ಕೆ ಚಿಮ್ಮಿತ್ತು. ಭಯಾನಕ ಘಟನೆಯಿಂದ ನಾವೆಲ್ಲಾ ಭಯಭೀತರಾಗಿದ್ದೇವೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಆಫ್ಘಾನ್ ಲೀಗ್ ಪಂದ್ಯದ ನಡುವೆ ಆತ್ಮಾಹುತಿ ಬಾಂಬ್ ದಾಳಿ, ಕ್ರಿಕೆಟಿಗರು ಬಂಕರ್‌ಗೆ ಶಿಫ್ಟ್!

40 ಮಂದಿಗೆ ಗಂಭೀರ ಗಾಯಗಳಾಗಿದೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ. ಇನ್ನುಸಣ್ಣ ಪುಟ್ಟ ಗಾಯಗೊಂಡ 25ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದೇವೆ. ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಬೂಲ್ ಸಿಟಿ ಆಸ್ಪತ್ರೆ ಮುಖ್ಯಸ್ಥ ಸ್ಟೆಫಾನೋ ಸೋಜ್ಜಾ ಹೇಳಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಾರ್ಥನೆ ಆರಂಭಗೊಳ್ಳುತ್ತಿದ್ದಂತೆ ಸ್ಫೋಟ ಸಂಭವಿಸಿದೆ. ಮಸೀದಿ ಬಾಗಿಲ ಬಳಿ ಹೆಚ್ಚು ಜನಸಂದಣಿ ಇದ್ದ ಕಾರಣ ಯಾರು ಬಾಂಬ್ ಮೂಲಕ ಪ್ರವೇಶಿಸಿದ್ದಾರೆ ಅನ್ನೋದು ಪತ್ತೆ ಹಚ್ಚಬೇಕಾಗಿದೆ. ಹೆಚ್ಚಿನವರು ಪಾರ್ಥನಾ ಮಂದಿರದಲ್ಲಿ ಸೇರಿದ್ದರೆ, ಹಲವರು ಬಾಗಿಲ ಬಳಿ ಒಳ ಪ್ರವೇಶಿಸಲು ನಿಂತಿದ್ದರು.  ಈ ವೇಳೆ ಸ್ಫೋಟ ಸಂಭವಿಸಿರುವ ಸಾಧ್ಯತ ಇದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಾಹುತಿ ದಾಳಿಯಾಗಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.

ಕಾಬೂನಿನ ವಾಯುವ್ಯ ಭಾಗದಲ್ಲಿರುವ ಕೋತಾಲ್‌-ಇ-ಖೈರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ಆಗಮಿಸಿವೆ ಎಂದು ಕಾಬೂಲ್‌ ಸುರಕ್ಷತಾ ಪಡೆಯ ವಕ್ತಾರ ಖಲೀದ್‌ ಜರ್ದಾನ್‌ ಹೇಳಿದ್ದಾರೆ. ಸ್ಫೋಟ ಎಷ್ಟುಶಕ್ತಿಶಾಲಿಯಾಗಿತ್ತೆಂದರೆ ಮದರಸಾ ಅಕ್ಕಪಕ್ಕದ ಕಟ್ಟಡಗಳು ಭೂಕಂಪ ಸಂಭವಿಸಿದಾಗ ಆದಂತೆ ಅಲ್ಲಾಡಿವೆ.

 

RSS ಕಚೇರಿ ಮೇಲೆ ಬಾಂಬ್ ಎಸೆದ ದುಷ್ಕರ್ಮಿಗಳು, ಕಟ್ಟಡ ಧ್ವಂಸ!
 

click me!