Viral News: ಗಾಂಜಾ ವಿಚಾರದಲ್ಲಿ ನಮ್ಮದು ಸೌಮ್ಯ ನೀತಿ; ಎನ್‌ಡಿಪಿಎಸ್‌ ಬೇಲ್ ವಿಚಾರಣೆಯಲ್ಲಿ ಸುಪ್ರೀಂ ಹೇಳಿಕೆ!

Published : Sep 16, 2026, 10:24 PM IST
supreme court

ಸಾರಾಂಶ

ಎನ್‌ಡಿಪಿಎಸ್ ಕಾಯ್ದೆಯಡಿ ಬರುವ ಗಾಂಜಾ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ತಾವು ತುಂಬಾ ಉದಾರ ಧೋರಣೆ ತಳೆಯುವುದಾಗಿ ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ಗಾಂಜಾ ವಶಪಡಿಸಿಕೊಂಡ ಪ್ರಕರಣವೊಂದರಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದರೂ, ಕೆಳ ನ್ಯಾಯಾಲಯಕ್ಕೆ ಶರಣಾಗಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.

ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ (NDPS ಕಾಯ್ದೆ) ಅಡಿಯಲ್ಲಿ ಬರುವ ಗಾಂಜಾ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ತಾನು "ತುಂಬಾ ಉದಾರ" ಧೋರಣೆಯನ್ನು ತಳೆಯುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಎಂದು 'ಬಾರ್ ಅಂಡ್ ಬೆಂಚ್' ವರದಿ ಮಾಡಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ದ್ವಿಪೀಠವು ಪ್ರಕರಣ ಒಂದರ ವಿಚಾರಣೆ ವೇಳೆ ಈ ಆಸಕ್ತಿಕರ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಅಗಾಧ ಪ್ರಮಾಣದ (Commercial Quantity) ಗಾಂಜಾ ವಶಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬಿಸ್ವಾನಾಥ್ ಮಂಡಲ್ ಎಂಬ ಆರೋಪಿಯು ಎನ್‌ಡಿಪಿಎಸ್ (NDPS) ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಪೀಠವು, ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತಾದರೂ, ಕೆಳ ನ್ಯಾಯಾಲಯಕ್ಕೆ ಶರಣಾಗಿ ನಿಯಮಿತ (Regular) ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತು.

ಸುಪ್ರೀಂ ಕೋರ್ಟ್ ಪೀಠ ಹೇಳಿದ್ದೇನು?

ವಿಚಾರಣೆ ವೇಳೆ ಪೀಠವು, "ನೀವು ಕೆಳ ನ್ಯಾಯಾಲಯದಲ್ಲಿ ಶರಣಾಗಿ ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಿ. ಒಂದು ವೇಳೆ ವಿಚಾರಣಾ ನ್ಯಾಯಾಲಯವು ನಿಮ್ಮ ಜಾಮೀನು ಅರ್ಜಿಯನ್ನು ವಜಾಗೊಳಿಸಿದರೆ, ನೀವು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು" ಎಂದು ತಿಳಿಸಿತು. ಮುಂದುವರಿದು ಮಾತನಾಡಿದ ನ್ಯಾಯಮೂರ್ತಿಗಳು, ಜಾಮೀನಿಗಾಗಿ ಇಲ್ಲಿಗೆ ಬನ್ನಿ, ನಾವು ನಿಮಗೆ ಕೊಡುತ್ತೇವೆ. ನೋಡಿ, ಗಾಂಜಾ ವಿಷಯಕ್ಕೆ ಬಂದಾಗ ನಾವಂತೂ ತುಂಬಾ ಉದಾರವಾದಿಗಳು. ಪ್ರಕರಣ ನಮ್ಮ ಬಳಿಗೆ ಬಂದಾಗಲೆಲ್ಲಾ ನಾವು ಜಾಮೀನು ನೀಡುತ್ತೇವೆ. ವಿಚಾರಣಾ ನ್ಯಾಯಾಲಯದಿಂದ ನಿಮ್ಮ ಅರ್ಜಿ ವಜಾಗೊಂಡರೆ ಇಲ್ಲಿಗೆ ಬನ್ನಿ, ನಾವು ಜಾಮೀನು ನೀಡುತ್ತೇವೆ, ಯಾವುದೇ ಸಮಸ್ಯೆ ಇಲ್ಲ" ಎಂದು ಮಾರ್ಮಿಕವಾಗಿ ಹೇಳಿದರು.

ಕಲ್ಕತ್ತಾ ಹೈಕೋರ್ಟ್ ಆದೇಶ ಹಾಗೂ ವಾದ-ಪ್ರತಿವಾದ!

ಆರೋಪಿ ಬಿಸ್ವಾನಾಥ್ ಮಂಡಲ್ ಅವರು ಕಲ್ಕತ್ತಾ ಹೈಕೋರ್ಟ್ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮಂಡಲ್ ಅವರ ಪತ್ನಿ ವಾಸಿಸುತ್ತಿದ್ದ ಮನೆಯ ಮೇಲೆ ಪೊಲೀಸರು ನಡೆಸಿದ ದಾಳಿಯ ಸಂದರ್ಭದಲ್ಲಿ ಭಾರಿ ಪ್ರಮಾಣದ ಕಳ್ಳಸಾಗಣೆ ಗಾಂಜಾ ಪತ್ತೆಯಾಗಿತ್ತು. ದಾಳಿಯ ಸಮಯದಲ್ಲಿ ಮಂಡಲ್ ಸ್ಥಳದಲ್ಲಿ ಹಾಜರಿಲ್ಲದಿದ್ದರೂ, ಮನೆಯ ಮಾಲೀಕರಾಗಿ ಅವರು ಈ ಅಪರಾಧದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೆ, NDPS ಕಾಯ್ದೆಯ ಸೆಕ್ಷನ್ 37 ರ ಅಡಿಯಲ್ಲಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡುವುದನ್ನು ತಡೆಯುತ್ತದೆ ಎಂದು ಸ್ಪಷ್ಟಪಡಿಸಿತ್ತು.

ವಕೀಲರ ವಾದವೇನು?

ಸುಪ್ರೀಂ ಕೋರ್ಟ್‌ನಲ್ಲಿ ಮಂಡಲ್ ಪರ ವಾದ ಮಂಡಿಸಿದ ವಕೀಲರು, ಜಾಮೀನು ನೀಡಲು ಸಮಂಜಸವಾದ ಆಧಾರಗಳಿದ್ದಾಗ ಸೆಕ್ಷನ್ 37 ವಿನಾಯಿತಿ ನೀಡುತ್ತದೆ ಮತ್ತು ದಾಳಿ ನಡೆದ ಮನೆ ಮಂಡಲ್‌ಗೆ ಸೇರಿದ್ದಲ್ಲ ಎಂದು ವಾದಿಸಿದರು. ಪೀಠವು, ಅವರು ನಿಮ್ಮನ್ನು ಸರಿಪಡಿಸಲು ಬಯಸುತ್ತಾರೆ, ಅಲ್ಲವೇ?" ಎಂದು ಪ್ರಶ್ನಿಸಿತು. ನಂತರ ವಕೀಲರು ಇದು ತನಿಖೆಯ ವಿಷಯ ಎಂದು ಹೇಳಿ, ಶರಣಾಗಲು ಕಾಲಾವಕಾಶ ಕೋರಿದಾಗ ಪೀಠವು ಕೆಳ ನ್ಯಾಯಾಲಯಕ್ಕೆ ಶರಣಾಗಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಸೂಚಿಸಿತು. ವಕೀಲರು ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪೊಂದನ್ನು ಉಲ್ಲೇಖಿಸಿದಾಗ, "ಅದು ಆ ಪ್ರಕರಣದ ನಿರ್ದಿಷ್ಟ ಸಂಗತಿಗಳಿಗೆ ಸಂಬಂಧಿಸಿದ್ದು" ಎಂದು ಪೀಠ ಸ್ಪಷ್ಟಪಡಿಸಿತು.

ಗಮನಿಸಬೇಕಾದ ಅಂಶವೇನು?

ಅಂತಿಮವಾಗಿ ಸುಪ್ರೀಂ ಕೋರ್ಟ್ ಮಂಡಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಂಪೂರ್ಣವಾಗಿ ವಜಾಗೊಳಿಸಿತು. ಆದರೆ, ಮಂಡಲ್ ಶರಣಾದ ನಂತರ ನಿಯಮಿತ ಜಾಮೀನು ಪಡೆಯಬಹುದು ಮತ್ತು ಕೆಳ ನ್ಯಾಯಾಲಯವು ಅದನ್ನು ನಿರಾಕರಿಸಿದರೆ ಮೇಲ್ಮನವಿ ಸಲ್ಲಿಸಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಸುಳಿವು ನೀಡಿತು. NDPS ಪ್ರಕರಣಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಈ "ಉದಾರ" ಮೌಖಿಕ ಹೇಳಿಕೆಯು ಈಗ ದೇಶಾದ್ಯಂತ ಕಾನೂನು ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

PREV
Read more Articles on
click me!

Recommended Stories

Viral News: ಚೀನಾಗಾಗಿ ಪಾಕಿಸ್ತಾನದಲ್ಲಿ ಪ್ರತಿದಿನ ನೂರಾರು ಕತ್ತೆಗಳ ಮಾರಣಹೋಮ! ಅಸಲಿ ಕಾರಣ ಏನು?
ಒಂದೇ ದಿನ ಎರಡು ವಿಚಿತ್ರ ಪ್ರಕರಣ: ಪತ್ನಿಯರಿಂದ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದ ಇಬ್ಬರು ಪತಿರಾಯರು!