
ಸೂಪರ್ಸ್ಟಾರ್ ರಜನಿಕಾಂತ್ ತಮ್ಮ ಬಿಡುವಿಲ್ಲದ ಚಿತ್ರರಂಗದ ಜೀವನಕ್ಕೆ ವಿರಾಮ ನೀಡಿ, ಋಷಿಕೇಶದ ಹಿಮಾಲಯದ ತಪ್ಪಲಿನಲ್ಲಿ ಆಧ್ಯಾತ್ಮಿಕ ಶಾಂತಿಯನ್ನು ಅರಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ, ರಸ್ತೆಬದಿಯ ಪತ್ರೊಳಿಯಲ್ಲಿ ಆಹಾರ ಸೇವಿಸುತ್ತಿರುವ ರಜನಿಕಾಂತ್ರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ, ಅಭಿಮಾನಿಗಳ ಹೃದಯವನ್ನು ಗೆದ್ದಿವೆ.
ಅಮರ್ ಉಜಾಲಾ ವರದಿಯ ಪ್ರಕಾರ, ಶನಿವಾರ ರಜನಿಕಾಂತ್ ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ದಯಾನಂದರ ಆಶೀರ್ವಾದ ಪಡೆದಿದ್ದಾರೆ. ಬಳಿಕ ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ ಅವರು, ಗಂಗಾ ಆರತಿಯಲ್ಲಿ ಭಾಗವಹಿಸಿದ್ದಾರೆ. ಭಾನುವಾರ ಅವರು ದ್ವಾರಹತ್ಗೆ ತೆರಳಿದ್ದಾರೆ.
ರಜನಿ ಪತ್ರೊಳಿಯಲ್ಲಿ ಆಹಾರ ಸೇವಿಸುತ್ತಿರುವ ಫೋಟೋ ವೈರಲ್:
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ರಜನಿಕಾಂತ್ ಸರಳ ಬಿಳಿ ಬಟ್ಟೆಯಲ್ಲಿ, ರಸ್ತೆಬದಿಯ ಕಲ್ಲಿನ ಮೇಲೆ ಇರಿಸಿದ ಪತ್ರೊಳಿಯಲ್ಲಿ ಊಟ ಮಾಡುತ್ತಿರುವುದು ಕಾಣಬಹುದು. ಹಿಂದೆ ಸುತ್ತಲೂ ಹಿಮಾಲಯದ ರಮಣೀಯ ಬೆಟ್ಟಗಳು, ಪಕ್ಕದಲ್ಲಿ ಕಾರೊಂದು ನಿಂತಿರುವುದು ಗಮನ ಸೆಳೆಯುತ್ತವೆ. ಇನ್ನೊಂದು ಚಿತ್ರದಲ್ಲಿ, ಅವರು ಆಶ್ರಮದಲ್ಲಿ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾರೆ, ಮತ್ತೊಂದರಲ್ಲಿ ಪುರೋಹಿತರಿಗೆ ನಮಸ್ಕರಿಸುತ್ತಿರುವ ದೃಶ್ಯ ಕಂಡುಬಂದಿದೆ.
ರಜನಿ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ
ರಜನಿಕಾಂತ್ರ ಸರಳತೆ ಮತ್ತು ವಿನಮ್ರತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, 'ರಜನಿ ಸರ್ ಅದ್ಭುತ ವ್ಯಕ್ತಿ, ಸರಳತೆಯ ಸಾಕ್ಷಾತ್ಕಾರ! ಎಂದು ಒಬ್ಬರು ಬರೆದರೆ, ಇನ್ನೊಬ್ಬರು, ರಜನಿ ಸರ್ ಇನ್ಸಪಿರೇಶನ್, ಅಪರೂಪದ ವ್ಯಕ್ತಿತ್ವ ಎಂದು ಹಾಡಿಹೊಗಳಿದ್ದಾರೆ. ರಜನಿಕಾಂತ್ರ ಈ ಆಧ್ಯಾತ್ಮಿಕ ಯಾತ್ರೆ ಮತ್ತು ಸರಳ ಜೀವನಶೈಲಿಯ ಚಿತ್ರಗಳು, ಸ್ಟಾರ್ಗಿರಿಯ ಆಚೆಗೂ ಅವರ ಸರಳತೆ, ಮಾನವೀಯ ಗುಣಗಳು ಕಾಣಿಸುತ್ತಿವೆ. ಈ ಚಿತ್ರಗಳು ನಿಮಗೂ ಇಷ್ಟವಾಗಿವೆಯೇ? ಕಾಮೆಂಟ್ನಲ್ಲಿ ತಿಳಿಸಿ!