
ಈಗ ಬಿರು ಬಿಸಿಲಿನಿಂದಾಗಿ ಎಲ್ಲೆಡೆ ಹಾವುಗಳ ಕಾಟ ಹೆಚ್ಚಾಗಿದೆ. ಬೆಚ್ಚಗಿನ ಜಾಗ ಹುಡುಕಿ ಬಂದು ಎಲ್ಲೆಂದರಲ್ಲಿ ಹಾವುಗಳು ಮಲಗಿಕೊಳ್ಳುತ್ತಿವೆ. ಶೂಸ್ಗಳಲ್ಲಿ, ಮನೆಯ ಒಳಗಡೆ, ಕಪಾಟಿನಲ್ಲಿ ಹೀಗೆ ಎಲ್ಲೆಡೆಗಳಲ್ಲಿ ಇವುಗಳು ಕಾಣಿಸುತ್ತವೆ. ಆದ್ದರಿಂದ ಜನರು ಎಷ್ಟೇ ಜಾಗೃತರಾಗಿದ್ದರೂ ಅದು ಕಡಿಮೆಯೇ ಎನ್ನುವ ಸ್ಥಿತಿ ಪ್ರತಿ ಬೇಸಿಗೆಯಲ್ಲಿಯೂ ಆಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾವುಗಳು ಎಲ್ಲಾ ಕಾಲಗಳಲ್ಲಿಯೂ ಕಾಣಿಸುವುದು ಮಾಮೂಲೆ. ಅದರಲ್ಲಿಯೂ ತೋಟ, ಗದ್ದೆಗಳಿಗೆ ಹೋಗುವ ಜನರಿಗೆ ಇದು ಹೊಸ ವಿಷಯವೇ ಅಲ್ಲ. ಆದರೆ ಹಾವುಗಳು ಕಾಣದೇ ಇರುವ ಕಡೆಗಳಲ್ಲಿಯೂ ಬೇಸಿಗೆಯಲ್ಲಿ ಇದು ಮಾಮೂಲಾಗಿ ಬಿಟ್ಟಿದೆ.
ಅಂಥದ್ದೇ ಒಂದು ಆತಂಕಕಾರಿ ಘಟನೆ ಮಸೀದಿಯೊಂದರಲ್ಲಿ ನಡೆದಿದೆ. ನಮಾಜ್ ಮಾಡುವ ಸಮಯದಲ್ಲಿ ವಿಷಸರ್ಪವೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕವನ್ನು ಸೃಷ್ಟಿಸಿದೆ. ಇದರ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ನಂದೂರ್ಬಾರ್ನ ಕಿಂಗ್ ನಗರದಲ್ಲಿರುವ ಪೀರ್ಗೈಬ್ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ಹಾವು ಒಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದೆ.
ನಮಾಜ್ ವೇಳೆ ಅಲ್ಲಿಯವರು ಅದನ್ನು ಗಮನಿಸಿರಲಿಲ್ಲ. ಕೊನೆಗೆ ಸರ್ಪವು ಹತ್ತಿರ ಹೋದಾಗ ಅದರ ಸ್ಪರ್ಶದಿಂದ ಒಬ್ಬರಿಗೆ ತಿಳಿದು ನಮಾಜ್ ಮಾಡುವಾಗಲೇ ಹೌಹಾರಿ ಕೂಗಿಕೊಂಡಿದ್ದರಿಂದ ಎಲ್ಲರೂ ನಮಾಜ್ ಮಧ್ಯದಲ್ಲಿಯೇ ಬಿಟ್ಟು ಎದ್ದರು. ಹಾವಿನಿಂದಾಗಿ ಪ್ರಾರ್ಥನೆಗೆ ಅಡ್ಡಿಯಾದ ಕ್ಷಣವನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಮಸೀದಿಯ ಇಮಾಮ್ ಧೈರ್ಯತನವನ್ನು ಪ್ರದರ್ಶಿಸಿ ಹಾವಿನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಕೈಗಳಿಂದ ಎತ್ತಿದರು. ಅದನ್ನ ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ಇಮಾಮ್ ಅವರ ಧೈರ್ಯ ಮತ್ತು ತ್ವರಿತ ಕ್ರಮಕ್ಕೆ ಎಲ್ಲರೂ ಬೆರಗಾದರು. ಹಾವಿಗೆ ಯಾವುದೇ ಹಾನಿ ಮಾಡದ ಕಾರಣ, ನೆಟ್ಟಿಗರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ಕನ್ನಡಿಗರು ಕಮೆಂಟ್ಸ್ನಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ನೆನಪಿಸುತ್ತಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಮುಗಿಸಬೇಕು ಎಂದು ಹೇಳಲು ಮುಸ್ಲಿಮರಿಗೆ ನಮಾಜ್ ಮಾಡುವಾಗ ವಿಷ ಸರ್ಪ ಬಂದರೆ, ಅದನ್ನು ಕೊಲ್ಲಬೇಕು ಎಂದು ಕುರಾನ್ನಲ್ಲಿ ಇದೆ. ಹಾಗೆಯೇ ಇವರನ್ನೂ ಮುಗಿಸಿ ಎಂದಿದ್ದರು. ಆದರೆ ಇಲ್ಲಿ, ಹಾವನ್ನು ಜೀವಂತವಾಗಿ ಹಿಡಿಯಲಾಗಿದೆ ಎಂದೂ ಕೆಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ.