
ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯುವಾಗ ಭದ್ರತಾ ಠೇವಣಿ (Security Deposit) ಹೆಸರಿನಲ್ಲಿ ಆಧಿಕ ಹಣವನ್ನು ಪಾವತಿಸುವುದು ಸಾಮಾನ್ಯ. ಆದರೆ ಮನೆ ಖಾಲಿ ಮಾಡುವಾಗ ಅದೇ ಡೆಪಾಸಿಟ್ ಹಣದಲ್ಲಿ ಭಾರೀ ಮೊತ್ತ ಕಡಿತವಾದರೆ ಬಾಡಿಗೆದಾರರ ಪರಿಸ್ಥಿತಿ ಹೇಗಿರಬಹುದು? ಇದೀಗ ಬೆಂಗಳೂರಿನ ಬಾಡಿಗೆದಾರರೊಬ್ಬರ ಇಂತಹ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ಪೋಸ್ಟ್ ಪ್ರಕಾರ, ಬೆಂಗಳೂರಿನಲ್ಲಿ 2BHK ಅಪಾರ್ಟ್ಮೆಂಟ್ವೊಂದನ್ನು ಬಾಡಿಗೆಗೆ ಪಡೆದ ವ್ಯಕ್ತಿ ಮನೆ ಮಾಲೀಕರಿಗೆ ₹1 ಲಕ್ಷ ಡೆಪಾಸಿಟ್ ನೀಡಿದ್ದರು. ಒಂದು ವರ್ಷಗಳ ಕಾಲ ಅಪಾರ್ಟ್ಮೆಂಟ್ನಲ್ಲಿ ವಾಸಿಸಿದ್ದ ಅವರು ಪ್ರತಿ ತಿಂಗಳು ಬಾಡಿಗೆಯನ್ನು ಯಾವುದೇ ವಿಳಂಬವಿಲ್ಲದೆ ಪಾವತಿಸುತ್ತಿದ್ದರು ಎನ್ನಲಾಗಿದೆ. ಆದರೆ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ₹1 ಲಕ್ಷ ಡೆಪಾಸಿಟ್ನಿಂದ ₹80,396 ಕಡಿತಗೊಳಿಸಲಾಗಿದ್ದು, ಬಾಡಿಗೆದಾರರಿಗೆ ಕೇವಲ ₹20 ಸಾವಿರ ಮಾತ್ರ ವಾಪಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ವೈರಲ್ ಪೋಸ್ಟ್ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಬಾಡಿಗೆದಾರರು ತಮ್ಮ ಕೆಲಸದ ನಿಮಿತ್ತ ಆಗಾಗ್ಗೆ ಪ್ರಯಾಣಿಸುತ್ತಿದ್ದರು. ಹೀಗಾಗಿ ಅವರು ತಿಂಗಳಿಗೆ ಸರಾಸರಿ 6ರಿಂದ 7 ದಿನಗಳಷ್ಟೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಅವರು ಮನೆಯ ನಿಯಮಗಳನ್ನು ಪಾಲಿಸಿದ್ದರು, ಯಾವುದೇ ಪಾರ್ಟಿ ಆಯೋಜಿಸಿರಲಿಲ್ಲ ಮತ್ತು ಮನೆಯೊಳಗೆ ಧೂಮಪಾನ ಮಾಡಿರಲಿಲ್ಲ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಅಲ್ಲದೆ, ಬಾಡಿಗೆ ಅವಧಿಯುದ್ದಕ್ಕೂ ಅಪಾರ್ಟ್ಮೆಂಟ್ ಅನ್ನು ಉತ್ತಮವಾಗಿ ನೋಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಮನೆ ಖಾಲಿ ಮಾಡುವಾಗ ನಿಜವಾದ ಹಾನಿಗಳಿಗೆ ಸಂಬಂಧಿಸಿದ ಸಣ್ಣಪುಟ್ಟ ಕಡಿತಗಳನ್ನು ಹೊರತುಪಡಿಸಿ, ಹೆಚ್ಚಿನ ಭದ್ರತಾ ಠೇವಣಿ ಹಣ ಮರಳಿ ಸಿಗಲಿದೆ ಎಂದು ಬಾಡಿಗೆದಾರರು ನಿರೀಕ್ಷಿಸಿದ್ದರು ಎನ್ನಲಾಗಿದೆ.
ಆದರೆ ಮನೆ ಮಾಲೀಕರಿಂದ ನೀಡಲಾದ ಇತ್ಯರ್ಥ ಬಿಲ್ ನೋಡಿದಾಗ ಬಾಡಿಗೆದಾರರು ಆಘಾತಕ್ಕೊಳಗಾದರು ಎನ್ನಲಾಗಿದೆ. ವೈರಲ್ ಪೋಸ್ಟ್ ಪ್ರಕಾರ, ₹1 ಲಕ್ಷ ಡೆಪಾಸಿಟ್ನಿಂದ ₹80,396 ಕಡಿತ ಮಾಡಲಾಗಿದೆ. ಈ ಕಡಿತದಲ್ಲಿ ಅಪಾರ್ಟ್ಮೆಂಟ್ಗೆ ಬಣ್ಣ ಬಳಿಯುವ ವೆಚ್ಚ, ಡೀಪ್ ಕ್ಲೀನಿಂಗ್, ಸೋಫಾ ಕ್ಲೀನಿಂಗ್, ರೆಫ್ರಿಜರೇಟರ್ ಸರ್ವೀಸ್, ಶವರ್ ಬದಲಾವಣೆ, ಬಾಗಿಲಿನ ಲಾಕ್ ಬದಲಾವಣೆ, ಟವೆಲ್ ರ್ಯಾಕ್ ಅಳವಡಿಕೆ, ಸರ್ವೀಸ್ ಚಾರ್ಜ್, ಕನ್ವೀನಿಯನ್ಸ್ ಶುಲ್ಕ ಸೇರಿದಂತೆ ಹಲವು ವಸ್ತುಗಳು ಸೇರಿವೆ ಎಂದು ಹೇಳಲಾಗಿದೆ. ಇದರಿಂದ ಕೇವಲ ₹20 ಸಾವಿರ ಮಾತ್ರ ಬಾಡಿಗೆದಾರರಿಗೆ ಮರಳಿದೆ ಎನ್ನಲಾಗಿದೆ.
ಈ ಘಟನೆಯನ್ನು ಹಂಚಿಕೊಂಡ ಪೂಜಾ ಎಂಬ X ಬಳಕೆದಾರರು, ಬಾಡಿಗೆದಾರರಿಂದ ಉಂಟಾದ ನಿಜವಾದ ಹಾನಿಗಳನ್ನು ಸರಿಪಡಿಸಲು ಮಾಡುವ ವೆಚ್ಚಕ್ಕಿಂತ, ಮುಂದಿನ ಬಾಡಿಗೆದಾರರಿಗೆ ಮನೆ ಹಸ್ತಾಂತರಿಸುವ ಮೊದಲು ಆಸ್ತಿಯ ಸಂಪೂರ್ಣ ನವೀಕರಣಕ್ಕಾಗಿ ಹಣ ಕಡಿತ ಮಾಡಿದಂತೆ ಕಾಣುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಭದ್ರತಾ ಠೇವಣಿಯನ್ನು ಸಾಮಾನ್ಯ ನಿರ್ವಹಣೆಗೆ ಬಳಸಬೇಕೇ? ಅಥವಾ ಬಾಡಿಗೆದಾರರಿಂದ ಉಂಟಾದ ನಿಜವಾದ ಹಾನಿಗಳಿಗೆ ಮಾತ್ರ ಸೀಮಿತವಾಗಿರಬೇಕೇ? ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.
ಒಂದು ವರ್ಷ ಬಾಡಿಗೆಗೆ ಇದ್ದ ನಂತರ ₹1 ಲಕ್ಷ ಠೇವಣಿಯಿಂದ ಕೇವಲ ₹20 ಸಾವಿರ ಮರಳಿ ನೀಡುವುದು ನ್ಯಾಯವೇ? ಎಂದು ಪೋಸ್ಟ್ನಲ್ಲಿ ಪ್ರಶ್ನಿಸಲಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಬಾಡಿಗೆದಾರರ ಪರವಾಗಿ ಧ್ವನಿ ಎತ್ತಿದ್ದಾರೆ. ಒಬ್ಬ ಬಳಕೆದಾರರು, "ಭದ್ರತಾ ಠೇವಣಿ ನಿಜವಾದ ಹಾನಿಯನ್ನು ಸರಿದೂಗಿಸಲು ಇರಬೇಕು. ಸಾಮಾನ್ಯ ಸವೆತ ಮತ್ತು ಹರಿದುಹೋಗುವಿಕೆಗೆ ಅಲ್ಲ. ಇಲ್ಲದಿದ್ದರೆ ಅದು ಭದ್ರತಾ ಠೇವಣಿ ಅಲ್ಲ, ಬಾಡಿಗೆಗೆ ಹೆಚ್ಚುವರಿ ಗುಪ್ತ ವೆಚ್ಚ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಬ್ಬರು, "ಬಾಡಿಗೆದಾರರು ಮನೆಯನ್ನು ಸರಿಯಾಗಿ ನೋಡಿಕೊಂಡಿದ್ದರೆ ಮನೆ ಮಾಲೀಕರು ಭದ್ರತಾ ಠೇವಣಿಯನ್ನು ನವೀಕರಣ ನಿಧಿಯಂತೆ ಬಳಸಬಾರದು. ಮನೆಗೆ ಪ್ರವೇಶಿಸುವಾಗ ಮತ್ತು ಖಾಲಿ ಮಾಡುವಾಗ ಫೋಟೋ, ವಿಡಿಯೋಗಳನ್ನು ತೆಗೆದುಕೊಳ್ಳಬೇಕು. ಮರುಪಾವತಿ ನಿಯಮಗಳನ್ನು ಬಾಡಿಗೆ ಒಪ್ಪಂದದಲ್ಲೇ ಸ್ಪಷ್ಟವಾಗಿ ನಮೂದಿಸಬೇಕು" ಎಂದು ಸಲಹೆ ನೀಡಿದ್ದಾರೆ.
ಇನ್ನೊಬ್ಬ ನೆಟ್ಟಿಗರು, "ಇದು ಬೆಂಗಳೂರಿನಲ್ಲಿ ಸಾಮಾನ್ಯವಾಗಿಬಿಟ್ಟಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಡಿಗೆದಾರರಿಗೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸಲಹೆ ನೀಡಿದ್ದಾರೆ. "ನ್ಯಾಯಕ್ಕಾಗಿ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸುವುದು ಉತ್ತಮ" ಎಂದು ಒಬ್ಬರು ಹೇಳಿದ್ದಾರೆ.
ಇನ್ನೊಬ್ಬರು, "ಭದ್ರತಾ ಠೇವಣಿ ನಿಜವಾದ ಹಾನಿಗೆ ಮಾತ್ರ. ಸಾಮಾನ್ಯ ಸವೆತಕ್ಕೆ ಅಲ್ಲ. ಬಾಡಿಗೆದಾರರು ಫೋಟೋಗಳು ಮತ್ತು ಬಾಡಿಗೆ ಒಪ್ಪಂದದ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಇದೇ ವೇಳೆ, ಕೆಲವರು ಮನೆ ಮಾಲೀಕರ ಪರವಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮನೆ ಖಾಲಿ ಮಾಡಿದ ನಂತರ ನಿಜವಾದ ಹಾನಿ ಅಥವಾ ನಿರ್ವಹಣಾ ವೆಚ್ಚಗಳಿದ್ದರೆ ಅದನ್ನು ಠೇವಣಿಯಿಂದ ಕಡಿತಗೊಳಿಸುವ ಹಕ್ಕು ಮಾಲೀಕರಿಗೆ ಇದೆ ಎಂದು ಹೇಳಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ₹1 ಲಕ್ಷದ ಪೈಕಿ ₹80 ಸಾವಿರಕ್ಕೂ ಹೆಚ್ಚು ಕಡಿತವಾಗಿರುವುದು ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಮುಖ ಆಕ್ಷೇಪವಾಗಿದೆ.
‘ಕೆಲವು ಒಳ್ಳೆಯ ಮಾಲೀಕರನ್ನು ಹೊರತುಪಡಿಸಿದರೆ...’
ಈ ಚರ್ಚೆಯ ನಡುವೆ ಮತ್ತೊಬ್ಬ ಬಳಕೆದಾರರು, "ಕೆಲವು ಉತ್ತಮ ಭೂಮಾಲೀಕರನ್ನು ಹೊರತುಪಡಿಸಿದರೆ, ಅವರಲ್ಲಿ ಹೆಚ್ಚಿನವರು ಅತ್ಯುತ್ತಮ ಸ್ಕ್ಯಾಮರ್ಗಳು" ಎಂದು ಕಟುವಾಗಿ ಕಾಮೆಂಟ್ ಮಾಡಿದ್ದಾರೆ.
ಈ ಘಟನೆ ಬೆಂಗಳೂರಿನ ಬಾಡಿಗೆ ಮನೆ ವ್ಯವಸ್ಥೆಯಲ್ಲಿ ಡೆಪಾಸಿಟ್ ಹಣ, ಸಾಮಾನ್ಯ ಸವೆತ, ನಿರ್ವಹಣಾ ವೆಚ್ಚ ಮತ್ತು ಮನೆ ಖಾಲಿ ಮಾಡುವಾಗ ಹಣ ಕಡಿತ ಮಾಡುವ ವಿಚಾರದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ಒಟ್ಟಿನಲ್ಲಿ, ಈ ಪ್ರಕರಣದ ಸತ್ಯಾಸತ್ಯತೆ ಮತ್ತು ಕಡಿತ ಮಾಡಲಾದ ಮೊತ್ತಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಸಂಬಂಧಪಟ್ಟವರಿಂದ ಸ್ಪಷ್ಟವಾಗಬೇಕಿದೆ. ಆದರೆ, ₹1 ಲಕ್ಷ ಡೆಪಾಸಿಟ್ ನೀಡಿ, ಒಂದು ವರ್ಷ ಬಾಡಿಗೆ ಪಾವತಿಸಿ, ಕೊನೆಗೆ ಕೇವಲ ₹20 ಸಾವಿರ ವಾಪಸ್ ಪಡೆದ ಕಥೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.