
ಬೆಂಗಳೂರು: ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿಗೆ ಕಳೆದ ಕೆಲವು ದಿನಗಳಿಂದ ವರುಣ ದೇವ ತಂಪು ಎರೆದಿದ್ದಾನೆ. ಮಾರ್ಚ್ ತಿಂಗಳಲ್ಲೇ ಸುರಿಯುತ್ತಿರುವ ಈ ಅಕಾಲಿಕ ಆಲಿಕಲ್ಲು ಮಳೆ ಕಂಡು ಜನ ಖುಷಿಪಟ್ಟಿದ್ದಾರೆ ನಿಜ. ಆದರೆ, ಈ ಮಳೆಯ ಹಿಂದೆ ಅಮೆರಿಕದ ಕುಬೇರ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೈವಾಡವಿದೆ ಎಂಬ ವಿಚಿತ್ರ ಸುದ್ದಿಯೊಂದು ಈಗ ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಬಿಸಿಬಿಸಿಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಬಿಲ್ ಗೇಟ್ಸ್ಗೂ ಬೆಂಗಳೂರಿನ ಮಳೆಗೂ ಎತ್ತಣ ಸಂಬಂಧ? ಇಲ್ಲಿದೆ ಇಂಟರೆಸ್ಟಿಂಗ್ ಡಿಟೇಲ್ಸ್.
ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮತ್ತು ಪೋಸ್ಟ್ಗಳ ಸುರಿಮಳೆಯೇ ಆಗುತ್ತಿದೆ. 'ಬಿಲ್ ಗೇಟ್ಸ್ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಸುರಿಸುತ್ತಿದ್ದಾರೆ', 'ಭಾರತದ ಮಾನ್ಸೂನ್ ಈಗ ಬಿಲ್ ಗೇಟ್ಸ್ ನಿಯಂತ್ರಣದಲ್ಲಿದೆ' ಎಂಬ ಶೀರ್ಷಿಕೆಗಳ ಅಡಿಯಲ್ಲಿ ವಿಡಿಯೋಗಳು ಹರಿದಾಡುತ್ತಿವೆ. 2007ರಿಂದಲೂ ಬಿಲ್ ಗೇಟ್ಸ್ ಅವರು ವಿಜ್ಞಾನದ ಅಸಾಂಪ್ರದಾಯಿಕ ಸಂಶೋಧನೆಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿರುವುದು ಈ ವದಂತಿಗೆ ಮುಖ್ಯ ಕಾರಣವಾಗಿದೆ.
ಬಿಲ್ ಗೇಟ್ಸ್ ಅವರು ಬೆಂಬಲಿಸುತ್ತಿರುವ ಒಂದು ವಿಶಿಷ್ಟ ಸಂಶೋಧನೆಯ ಹೆಸರು 'ಸ್ಟ್ರಾಟೋಸ್ಫಿಯರಿಕ್ ಏರೋಸಾಲ್ ಇಂಜೆಕ್ಷನ್' (SAI). ಸರಳವಾಗಿ ಹೇಳುವುದಾದರೆ, ಇದನ್ನು 'ಸನ್-ಡಿಮ್ಮಿಂಗ್' ಅಥವಾ ಸೂರ್ಯನ ಪ್ರಖರತೆಯನ್ನು ಕಡಿಮೆ ಮಾಡುವ ತಂತ್ರ ಎನ್ನಲಾಗುತ್ತದೆ. ವಾತಾವರಣಕ್ಕೆ ಕೆಲವು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುವ ಮೂಲಕ ಸೂರ್ಯನ ಬೆಳಕು ಭೂಮಿಯನ್ನು ತಲುಪದಂತೆ ತಡೆದು, ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವುದು ಈ ಸಂಶೋಧನೆಯ ಉದ್ದೇಶ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಜನರು, ಗೇಟ್ಸ್ ರಾಸಾಯನಿಕ ಸಿಂಪಡಿಸಿ ಬೆಂಗಳೂರಿನಲ್ಲಿ ಮಳೆ ತರಿಸುತ್ತಿದ್ದಾರೆ ಎಂದು ನಂಬುತ್ತಿದ್ದಾರೆ.
ವಾಸ್ತವವಾಗಿ, ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯದ 'SCoPEx' ಎಂಬ ಯೋಜನೆಯನ್ನು ಆರ್ಥಿಕವಾಗಿ ಬೆಂಬಲಿಸಿದ್ದರು. ಇದರಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಕಣಗಳನ್ನು ವಾತಾವರಣಕ್ಕೆ ಬಿಟ್ಟು ಪರೀಕ್ಷಿಸುವ ಉದ್ದೇಶವಿತ್ತು. ಆದರೆ, ಈ ಯೋಜನೆಗೆ ಜಾಗತಿಕವಾಗಿ ಭಾರಿ ವಿರೋಧ ವ್ಯಕ್ತವಾದ ಕಾರಣ, ಸದ್ಯಕ್ಕೆ ಇದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ವಿಶೇಷವೆಂದರೆ, ಈ ಪ್ರಯೋಗದ ಯಾವುದೇ ಹಂತವೂ ಭಾರತದಲ್ಲಿ ನಡೆದಿಲ್ಲ. ಹಾಗಾಗಿ, ಕರ್ನಾಟಕದ ಹವಾಮಾನಕ್ಕೂ ಈ ಸಂಶೋಧನೆಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ವಿಜ್ಞಾನಿಗಳ ಸ್ಪಷ್ಟನೆ.
ಬಿಲ್ ಗೇಟ್ಸ್ ಅವರು ಭಾರತದಲ್ಲಿ ಕೃಷಿ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳುವ ಬೆಳೆಗಳ ಬಗ್ಗೆ ಸಂಶೋಧನೆ ನಡೆಸಲು ಧನಸಹಾಯ ನೀಡುತ್ತಿರುವುದು ನಿಜ. ಆದರೆ, ಕೃಷಿ ಉಪಕರಣಗಳ ಸಂಶೋಧನೆಗೆ ನೀಡಿದ ಹಣವನ್ನು 'ಮಾನ್ಸೂನ್ ನಿಯಂತ್ರಣಕ್ಕೆ ಬಳಸುತ್ತಿದ್ದಾರೆ' ಎಂದು ಕೆಲವು ಕಿಡಿಗೇಡಿಗಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಕಟ್ಟುಕಥೆಯಾಗಿದ್ದು, ಹವಾಮಾನ ಬದಲಾವಣೆಯ ನೈಸರ್ಗಿಕ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬರು ನಿಯಂತ್ರಿಸಲು ಸಾಧ್ಯವಿಲ್ಲ.
ಒಂದು ವೇಳೆ ದೆಹಲಿ ಅಥವಾ ಬೆಂಗಳೂರಿನಲ್ಲಿ ಕೃತಕ ಮಳೆಯ ಪ್ರಯತ್ನ ನಡೆದರೆ, ಅದು ಭಾರತ ಸರ್ಕಾರ ಮತ್ತು ಐಐಟಿ ಕಾನ್ಪುರದಂತಹ ನಮ್ಮದೇ ಸಂಸ್ಥೆಗಳ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಮಾಲಿನ್ಯ ನಿಯಂತ್ರಿಸಲು 'ಮೋಡ ಬಿತ್ತನೆ' (Cloud Seeding) ಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಇದು ಬಿಲ್ ಗೇಟ್ಸ್ ಅವರ 'ಸನ್-ಡಿಮ್ಮಿಂಗ್' ಸಂಶೋಧನೆಗಿಂತ ಸಂಪೂರ್ಣ ಭಿನ್ನವಾದುದು. ಆದ್ದರಿಂದ, ಅಮೆರಿಕದಲ್ಲಿ ಕುಳಿತು ಯಾರೋ ಒಬ್ಬರು ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಸುರಿಸುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ನಂಬಬೇಡಿ.