
ಸಮಾಜದ ಸಾಂಪ್ರದಾಯಿಕ ಕಲ್ಪನೆಗಳನ್ನು ಮೀರಿ, ಒಂಟಿ ತಾಯಿಯಾಗಿ ಮಗಳನ್ನು ದತ್ತು ಪಡೆದು ಬೆಳೆಸುತ್ತಿರುವ ದೇವಾಂಶಿ ಯಾದವ್ ಅವರ ಜೀವನ ಕಥೆ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಆಸಿಡ್ ದಾಳಿಯಿಂದ ಬದುಕುಳಿದಿರುವ ಅವರು, ಇಂದು ತಮ್ಮ ದತ್ತು ಮಗಳು ವನ್ಮಯಿ ದೇವಾಂಶಿ ಯಾದವ್ ಜೊತೆಗೆ ಸಂತೋಷದ ಜೀವನ ಸಾಗಿಸುತ್ತಿದ್ದಾರೆ.
ದೇವಾಂಶಿ ಸೇನಾ ಹುತಾತ್ಮ ಮತ್ತು ಪೊಲೀಸ್ ಅಧಿಕಾರಿಯ ಪುತ್ರಿ. ಕೇವಲ 14ನೇ ವಯಸ್ಸಿನಲ್ಲೇ ಮಗುವನ್ನು ದತ್ತು ಪಡೆಯಬೇಕು ಎಂಬ ಕನಸು ಕಂಡಿದ್ದರು. ಅವರು ತಂದೆಯನ್ನು ಕೇವಲ ಒಂಬತ್ತು ತಿಂಗಳ ಮಗುವಾಗಿದ್ದಾಗಲೇ ಕಳೆದುಕೊಂಡಿದ್ದರಿಂದ, ತಮ್ಮದೇ ಆದ ಕುಟುಂಬ ಕಟ್ಟುವ ಆಸೆ ಬಾಲ್ಯದಲ್ಲೇ ಹುಟ್ಟಿಕೊಂಡಿತ್ತು.
ನಂತರ ದೆಹಲಿಯ ಅನಾಥಾಶ್ರಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವಾಗ ಶ್ರವಣ ಮತ್ತು ಮಾತಿನ ಸಮಸ್ಯೆ ಹೊಂದಿದ್ದ ಪುಟ್ಟ ಬಾಲಕಿಯನ್ನು ಭೇಟಿಯಾದ ಅನುಭವ, ತಾಯಿಯಾಗುವ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿತು.
"ತಾಯ್ತನಕ್ಕೆ ರಕ್ತಸಂಬಂಧವೇ ಮುಖ್ಯವಲ್ಲ. ಮಗುವಿಗೆ ಪ್ರೀತಿ, ಆರೈಕೆ ಮತ್ತು ಸುರಕ್ಷಿತ ಮನೆ ಬೇಕು," ಎಂಬ ನಂಬಿಕೆಯಿಂದ ದೇವಾಂಶಿ ದತ್ತು ಪಡೆಯುವ ನಿರ್ಧಾರ ಕೈಗೊಂಡರು. ಭಾರತದಲ್ಲಿ ಹೆಣ್ಣು ಮಕ್ಕಳ ತ್ಯಜಿಸುವ ಪ್ರಕರಣಗಳು, ಹೆಣ್ಣು ಭ್ರೂಣ ಹತ್ಯೆ ಹಾಗೂ ಮಹಿಳೆಯರ ಮೇಲಿನ ತಾರತಮ್ಯವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ದೇವಾಂಶಿ ಲೈಂಗಿಕ ದೌರ್ಜನ್ಯ ಮತ್ತು ಆಸಿಡ್ ದಾಳಿಯಿಂದ ಬದುಕುಳಿದವರು. ತಮ್ಮ ಜೀವನದ ಕಹಿ ಅನುಭವಗಳೇ ಪ್ರತಿಯೊಬ್ಬ ಹೆಣ್ಣುಮಗುವಿಗೂ ಆತ್ಮವಿಶ್ವಾಸ ಮತ್ತು ಸಮಾನ ಅವಕಾಶ ದೊರಕಬೇಕು ಎಂಬ ಗುರಿಯತ್ತ ಅವರನ್ನು ಕೊಂಡೊಯ್ದವು.
"ನನ್ನ ಮಗಳು ಮೊದಲ ದಿನದಿಂದಲೇ ತನ್ನ ಮೌಲ್ಯವನ್ನು ಅರಿತು ಬೆಳೆಯಬೇಕು ಎಂಬುದು ನನ್ನ ಕನಸು," ಎಂದು ಅವರು ಹೇಳಿದ್ದಾರೆ.
ದತ್ತು ಪ್ರಕ್ರಿಯೆ ಸುಲಭವಾಗಿರಲಿಲ್ಲ
ದತ್ತು ಪಡೆಯುವ ಪ್ರಕ್ರಿಯೆ ಸಾಕಷ್ಟು ದಾಖಲೆಗಳು, ಮನೆ ಪರಿಶೀಲನೆ, ಕಾನೂನು ಕ್ರಮಗಳು ಮತ್ತು ಮೌಲ್ಯಮಾಪನಗಳಿಂದ ಕೂಡಿತ್ತು. ಆದರೆ ಮಕ್ಕಳ ಸುರಕ್ಷತೆಗಾಗಿ ಈ ಕಟ್ಟುನಿಟ್ಟಿನ ನಿಯಮಗಳು ಅಗತ್ಯವೆಂದು ದೇವಾಂಶಿ ಹೇಳಿದ್ದಾರೆ. ಕೊನೆಗೆ ನ್ಯಾಯಾಲಯದಲ್ಲಿ ವನ್ಮಯಿಯನ್ನು ಮೊದಲ ಬಾರಿಗೆ ಕೈಯಲ್ಲಿ ಹಿಡಿದ ಕ್ಷಣದಲ್ಲಿ ಎಲ್ಲಾ ಕಷ್ಟವೂ ಮರೆತುಹೋಯಿತು, ಎಂದು ಅವರು ನೆನಪಿಸಿಕೊಂಡಿದ್ದಾರೆ.
'ಒಬ್ಬಳೇ ಹೇಗೆ ಮಗುವನ್ನು ಬೆಳೆಸುತ್ತೀರಿ?'
ಒಂಟಿ ತಾಯಿಯಾಗಿ ದತ್ತು ಪಡೆಯುವ ನಿರ್ಧಾರಕ್ಕೆ ಸಾಕಷ್ಟು ಟೀಕೆಗಳು ಎದುರಾದವು. "ಒಬ್ಬಳೇ ಹೇಗೆ ಮಗುವನ್ನು ಬೆಳೆಸುತ್ತೀರಿ?" ಎಂಬ ಪ್ರಶ್ನೆಗಳನ್ನು ಹಲವರು ಕೇಳಿದರು. ಆದರೆ ಅವರ ತಾಯಿ ಮತ್ತು ಅಜ್ಜಿ ಬೆಂಬಲವಾಗಿ ನಿಂತರು. ದೇವಾಂಶಿಯ ತಾಯಿ 30 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಒಂಟಿಯಾಗಿಯೇ ಅವರನ್ನು ಬೆಳೆಸಿದ್ದರು. ಅದೇ ಧೈರ್ಯ ಇಂದು ದೇವಾಂಶಿಗೂ ಪ್ರೇರಣೆಯಾಗಿದೆ.
"ನನ್ನ ಮಗಳ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ತಂದೆಯ ಹೆಸರಿನ ಬದಲು ನನ್ನ ಹೆಸರೇ ಏಕೈಕ ಪೋಷಕರಾಗಿ ಇರುವುದು ಮಹಿಳಾ ಸಬಲೀಕರಣದ ಸಂಕೇತ," ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಸಮಾಜ ಸೇವೆಯ ಜೊತೆಗೆ ತಾಯ್ತನ
ದೇವಾಂಶಿ ಶಹೀದ್ ರಾಮಾಶ್ರಯ್ ವೆಲ್ಫೇರ್ ಸೊಸೈಟಿ ಸಂಸ್ಥೆಯ ಸ್ಥಾಪಕಿ. ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ಮಕ್ಕಳ ಕಲ್ಯಾಣ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಬಿಡುವಿಲ್ಲದ ಸಮಾಜಸೇವೆಯ ನಡುವೆಯೂ ಮಗಳ ಆರೈಕೆಗೆ ಆದ್ಯತೆ ನೀಡುವ ಅವರು, ತಮ್ಮ ತಾಯಿಯ ಬೆಂಬಲದಿಂದ ಎರಡನ್ನೂ ಸಮತೋಲನಗೊಳಿಸುತ್ತಿದ್ದಾರೆ.
ಮೊದಲ ದಿನದಿಂದಲೇ ದತ್ತು ಸ್ವೀಕಾರದ ಸತ್ಯ
ದೇವಾಂಶಿ ತಮ್ಮ ಮಗಳು ವನ್ಮಯಿಗೆ ದತ್ತು ಸ್ವೀಕಾರದ ವಿಚಾರವನ್ನು ಎಂದಿಗೂ ಮುಚ್ಚಿಡಲಿಲ್ಲ. ಬಾಲ್ಯದಿಂದಲೇ ದತ್ತು, ಸರೊಗಸಿ ಹಾಗೂ ವಿಭಿನ್ನ ಕುಟುಂಬಗಳ ಕುರಿತು ಮಕ್ಕಳ ಪುಸ್ತಕಗಳನ್ನು ಓದಿಸಿ, ಅದನ್ನು ಸಹಜ ವಿಷಯವಾಗಿ ಪರಿಚಯಿಸಿದರು. ಆದ್ದರಿಂದ "ನೀನು ದತ್ತು ಮಗಳು" ಎಂದು ಪ್ರತ್ಯೇಕವಾಗಿ ಹೇಳುವ ಸಂದರ್ಭವೇ ಬರಲಿಲ್ಲ. ಇಂದು ಏಳೂವರೆ ವರ್ಷದ ವನ್ಮಯಿ ಶಾಲೆಯಲ್ಲಿಯೇ ದತ್ತು ಸ್ವೀಕಾರದ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಾಳೆ. ಜೈವಿಕ ಕುಟುಂಬ ಮತ್ತು ದತ್ತು ಕುಟುಂಬದ ನಡುವಿನ ವ್ಯತ್ಯಾಸವನ್ನು ಸಹ ಸುಲಭವಾಗಿ ಅರ್ಥಮಾಡಿಕೊಂಡಿದ್ದಾಳೆ.