
ನವದೆಹಲಿ: ದೆಹಲಿಯ ಸತ್ಯ ನಿಕೇತನದಲ್ಲಿ ಸಂಭವಿಸಿದ ಆ ಭೀಕರ ಕಟ್ಟಡ ಕುಸಿತ ಕೇವಲ ಇಟ್ಟಿಗೆ, ಕಾಂಕ್ರೀಟ್ ರಾಶಿಯನ್ನಷ್ಟೇ ಸೃಷ್ಟಿಸಿಲ್ಲ; ಬದಲಿಗೆ ಹತ್ತಾರು ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಂಡು, ಅಂತ್ಯವಿಲ್ಲದ ಕಣ್ಣೀರು ಮತ್ತು ನರಕಯಾತನೆಯ ಕಾಯುವಿಕೆಯನ್ನು ತಂದೊಡ್ಡಿದೆ. ಭೀಕರ ಅಪಘಾತ ಸಂಭವಿಸಿ ಬರೋಬ್ಬರಿ 30 ಗಂಟೆಗಳು ಕಳೆದರೂ, ತನ್ನ ಅಣ್ಣನ ಸುಳಿವು ಸಿಗದೆ ಸಹೋದರಿಯೊಬ್ಬಳು ನವದೆಹಲಿಯ ಬೀದಿಗಳು, ಆಸ್ಪತ್ರೆಯ ಕಾರಿಡಾರ್ಗಳು ಹಾಗೂ ಸರ್ಕಾರಿ ಕಚೇರಿಗಳ ಬಾಗಿಲು ತಟ್ಟುತ್ತಾ ಅಲೆದಾಡುತ್ತಿರುವ ಹೃದಯವಿದ್ರಾವಕ ದೃಶ್ಯ ಕಣ್ಣೀರು ತರಿಸುವಂತಿದೆ.
ಉತ್ತರ ಪ್ರದೇಶದ ಔರೈಯಾ ಮೂಲದ ಪವನ್ ಎಂಬ ವಿದ್ಯಾರ್ಥಿ ದಕ್ಷಿಣ ಕ್ಯಾಂಪಸ್ನ ಸತ್ಯ ನಿಕೇತನದಲ್ಲಿರುವ ಪಿಜಿಗೆ ಬಂದು ನೆಲೆಸಿದ್ದು ಕೇವಲ ಒಂದು ತಿಂಗಳ ಹಿಂದೆಯಷ್ಟೇ. ಘಟನೆ ನಡೆದ ಹಿಂದಿನ ರಾತ್ರಿ ಕೂಡ ಆತ ತನ್ನ ತಂಗಿ ಪ್ರಿಯಾಂಶಿ ಜೊತೆ ಹರ್ಷಚಿತ್ತದಿಂದ ಮಾತನಾಡಿದ್ದ. ಆದರೆ ಮರುದಿನ ಬೆಳಿಗ್ಗೆಯೇ ಇಡೀ ಕಟ್ಟಡ ಕುಸಿದುಬಿದ್ದು, ಸಹೋದರ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾನೆ ಎಂಬ ಸುದ್ದಿ ಪ್ರಿಯಾಂಶಿಗೆ ಸಿಕ್ಕಿದ್ದು ಯಾವುದೇ ಆಡಳಿತ ಮಂಡಳಿ ಅಥವಾ ಪೊಲೀಸರಿಂದಲ್ಲ, ಬದಲಾಗಿ ಸೋಶಿಯಲ್ ಮೀಡಿಯಾ ಮೂಲಕ!
ದಕ್ಷಿಣ ಕ್ಯಾಂಪಸ್ನಲ್ಲಿ ಕಟ್ಟಡ ಕುಸಿದಿದೆ, ನನ್ನ ಅಣ್ಣ ಅದರ ಒಳಗಡೆಯೇ ಇದ್ದಾನೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ತಕ್ಷಣವೇ ಎದೆ ಜಲ್ ಎಂದಿತು. ಗಾಬರಿಯಿಂದ ಇಲ್ಲಿಗೆ ಓಡಿ ಬಂದೆ. ಆದರೆ ಘಟನೆ ನಡೆದು ಇಷ್ಟೊತ್ತಾದರೂ ಆಡಳಿತ ಯಂತ್ರದಿಂದ ನನಗೆ ಯಾವುದೇ ಅಧಿಕೃತ ಮಾಹಿತಿ ಸಿಗುತ್ತಿಲ್ಲ. ನನ್ನ ಅಣ್ಣ ಬದುಕಿದ್ದಾನೋ? ರಕ್ಷಣೆ ಮಾಡಲಾಗಿದೆಯೋ? ಯಾವ ಆಸ್ಪತ್ರೆಯಲ್ಲಿದ್ದಾನೆ? ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ" ಎಂದು ಪ್ರಿಯಾಂಶಿ ಕಣ್ಣೀರು ಹಾಕುತ್ತಾ ತನ್ನ ಅಸಹಾಯಕತೆ ತೋಡಿಕೊಂಡಿದ್ದಾಳೆ.
ಅಪಘಾತದ ಸುದ್ದಿ ತಿಳಿದ ತಕ್ಷಣವೇ ಪ್ರಿಯಾಂಶಿ ಮೊದಲು ಧಾವಿಸಿದ್ದು ಏಮ್ಸ್ (AIIMS) ಟ್ರಾಮಾ ಸೆಂಟರ್ಗೆ. ಅಣ್ಣ ಸಿಗಬಹುದು ಎಂಬ ಸಣ್ಣ ಭರವಸೆಯಿಂದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ವಾರ್ಡ್ಗಳಿಗೆ ಅಲೆದಾಡಿದಳು. ಅಲ್ಲಿದ್ದ ಪ್ರತಿಯೊಬ್ಬ ಗಾಯಾಳುವಿನ ಮುಖದ ಮೇಲಿದ್ದ ಬ್ಯಾಂಡೇಜ್ಗಳನ್ನು ಸರಿಸಿ ತನ್ನ ಅಣ್ಣನ ಮುಖ ಹುಡುಕಿದಳು. ಆದರೆ ಎಲ್ಲೂ ಪವನ್ ಸುಳಿವು ಸಿಗಲಿಲ್ಲ. 30 ಗಂಟೆಗೂ ಹೆಚ್ಚು ಸಮಯದಿಂದ ನಿರಂತರವಾಗಿ ಹುಡುಕಾಡುತ್ತಿರುವ ಪ್ರಿಯಾಂಶಿಯ ಕಣ್ಣುಗಳು ಈಗ ಕಲ್ಲಿನಂತಾಗಿವೆ. ಪವನ್ ಇನ್ನು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾನೋ ಅಥವಾ ಬೇರೆ ಯಾವುದಾದರೂ ಆಸ್ಪತ್ರೆಗೆ ಸೇರಿಸಲಾಗಿದೆಯೋ ಎಂದು ಹೇಳಲು ಅಧಿಕಾರಿಗಳು ವಿಫಲರಾಗಿದ್ದಾರೆ.
ಈ ನಡುವೆ, ಕಾಣೆಯಾದ ಪವನ್ ಹುಡುಕಾಟಕ್ಕೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸಾಥ್ ನೀಡಿವೆ. NSUI ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಖರ್ ಮಾತನಾಡಿ, "ಪವನ್ ಅವರ ಭಾವಚಿತ್ರವನ್ನು ಪ್ರಮುಖ ವಾಟ್ಸಾಪ್ ಗ್ರೂಪ್ಗಳು ಮತ್ತು ವಿದ್ಯಾರ್ಥಿ ಒಕ್ಕೂಟಗಳಿಗೆ ರವಾನಿಸಲಾಗಿದೆ. ಪ್ರತಿಯೊಂದು ಆಸ್ಪತ್ರೆಯಲ್ಲೂ ಪರಿಶೀಲನೆ ನಡೆಸಲಾಗುತ್ತಿದ್ದು, ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಪವನ್ ಸುರಕ್ಷಿತವಾಗಿ ಹಿಂತಿರುಗಲಿ ಎಂದು ಪ್ರಾರ್ಥಿಸುತ್ತೇವೆ" ಎಂದಿದ್ದಾರೆ.
ಒಂದೆಡೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ತನಿಖಾ ಸಮಿತಿಗಳನ್ನು ರಚಿಸಿ, ಪತ್ರಿಕಾ ಹೇಳಿಕೆಗಳನ್ನು ನೀಡುವಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇನ್ನೊಂದೆಡೆ, ಅಸಹಾಯಕ ತಂಗಿಯೊಬ್ಬಳು ತನ್ನ ಸಹೋದರನ ಹೆಸರನ್ನು ಜಪಿಸುತ್ತಾ ಆಸ್ಪತ್ರೆಯ ಕಾರಿಡಾರ್ಗಳಲ್ಲಿ ಗೋಳಾಡುತ್ತಿದ್ದಾಳೆ. 'ಕಟ್ಟಡ ನಿರ್ಮಾಣದ ಅಕ್ರಮ ಮತ್ತು ನಿರ್ಲಕ್ಷ್ಯದ ಪರ್ವತ ಕುಸಿದಾಗ, ಅದರ ಅಡಿಯಲ್ಲಿ ಹೂತುಹೋಗುವುದು ಕೇವಲ ಕಾಂಕ್ರೀಟ್ ಕಟ್ಟಡಗಳಲ್ಲ, ಬದಲಿಗೆ ಮುಗ್ಧರ ಜೀವ ಮತ್ತು ಅವರ ಕುಟುಂಬದ ಕನಸುಗಳು' ಎಂಬುದಕ್ಕೆ ಈ ಸತ್ಯ ನಿಕೇತನ ದುರಂತ ಕಹಿ ಸಾಕ್ಷಿಯಾಗಿದೆ.