ಬಸವನಬಾಗೇವಾಡಿಯಲ್ಲಿ ಕುಡಿಯಲು ಶುದ್ಧ ನೀರೇ ಸಿಗ್ತಿಲ್ಲ!

By Web DeskFirst Published Nov 4, 2019, 1:22 PM IST
Highlights

ಜನ​ರಿಗೆ ಶುದ್ಧ ಕುಡಿ​ಯುವ ನೀರು ಮರೀ​ಚಿಕೆ| ದುರ​ಸ್ತಿಗೆ ಬಂದರೂ ಅಧಿ​ಕಾರಿಗಳ ನಿರ್ಲಕ್ಷ್ಯ| ಸರ್ಕಾರ ಲಕ್ಷಾಂತರ ದುಡ್ಡು ವ್ಯರ್ಥ| ಬಸವನಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದಲ್ಲಿ ಇದ್ದು ಇಲ್ಲದಂತಾದ ಶುದ್ಧ ನೀರಿನ ಘಟಕ|

ಬಸವರಾಜ ನಂದಿಹಾಳ 

ಬಸವನಬಾಗೇವಾಡಿ[ನ.4]: ಶುದ್ಧ ಕುಡಿಯುವ ನೀರು ಘಟಕಗಳು ಉದ್ಘಾಟನೆಯಾದ ನಂತರ ಕೆಲವೇ ದಿನಗಳಲ್ಲಿ ಕೆಟ್ಟು ಜನರಿಗೆ ಶುದ್ಧ ನೀರು ಸಿಗುವುದು ಮರೀಚಿಕೆಯಾಗಿದೆ.

ಕೇಂದ್ರ, ರಾಜ್ಯ ಸರ್ಕಾರಗಳು ಜನರ ಆರೋಗ್ಯ ದೃಷ್ಟಿಯಿಂದ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಸಾಕಷ್ಟು ಅನುದಾನ ನೀಡಿ ಶುದ್ಧ ನೀರಿನ ಘಟಕಗಳನ್ನು ಪ್ರತಿ ಗ್ರಾಮದಲ್ಲಿ ನಿರ್ಮಿ​ಸಲು ಮುಂದಾಗುತ್ತಿದ್ದರೂ ಕೆಲ ಗ್ರಾಮಗಳಲ್ಲಿರುವ ಶುದ್ಧ ನೀರಿನ ಘಟಕಗಳು ಕೆಟ್ಟರೂ ಅವು ದುರಸ್ತಿಯಾಗದೇ ಇರುವುದರಿಂದಾಗಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಲ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳ ಬಾಗಿಲು ಮುರಿದು ಹೋಗಿವೆ. ಕೆಲವಂತು ಬಂದ್‌ ಮಾಡಲಾಗಿದೆ. ಇದರ ಕಡೆಗೆ ಸಂಬಂಧಿಸಿದ ಅಧಿಕಾರಿಗಳು ಯಾರೂ ಗಮನ ನೀಡುತ್ತಿಲ್ಲ. ಸರ್ಕಾರದ ಉತ್ತಮ ಯೋಜನೆಯೊಂದು ಹಳ್ಳ ಹಿಡಿಯುತ್ತದೆ ಎಂದು ಜನರು ಹೇಳುತ್ತಾರೆ. ಸರ್ಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಘಟಕ ತೆರೆದಿದ್ದು, ಶುದ್ಧ ನೀರಿನ ಘಟಕ ಇದ್ದರೂ ಇಲ್ಲದಂತಾಗಿದೆ. ಹೇಗೋ ಶುದ್ಧ ನೀರು ಸಿಗುತ್ತದೆ ಎಂದುಕೊಂಡಿದ್ದೇವು. ಇದೀಗ ಘಟಕಗಳು ಕೆಟ್ಟು ನಿಲ್ಲುವುದರಿಂದಾಗಿ ನಮಗೆ ಶುದ್ಧ ನೀರು ಸಿಗುತ್ತಿಲ್ಲ ಎಂದು ಕೆಲ ಗ್ರಾಮಸ್ಥರ ದೂರು.

ತಾಲೂಕಿನ ಜಯವಾಡಗಿ ಗ್ರಾಮದ ಐತಿಹಾಸಿಕ ಸೋಮನಾಥ ದೇವಾಲಯಕ್ಕೆ ಸಾವಿರಾರು ಭಕ್ತರು ಬರುವುದರಿಂದ ಗ್ರಾಮಸ್ಥರು ತಮಗೆ ದೂರವಾದರೂ ಭಕ್ತರಿಗೆ ಶುದ್ಧ ನೀರು ಸಿಗಲಿ ಅನ್ನುವ ಉದ್ದೇಶದಿಂದ ದೇವಸ್ಥಾನ ಸಮೀಪ ಶುದ್ಧ ನೀರಿನ ಘಟಕ ಸ್ಥಾಪನೆಗೆ ಅವಕಾಶ ನೀಡಿದ್ದಾರೆ. ಶುದ್ಧ ನೀರಿನ ಘಟಕ ಅವರಿಗೆ ಸುಮಾರು 1 ಕಿಮೀ ದೂರವಾದರೂ ಇಲ್ಲಿಂದಲೇ ಶುದ್ಧ ನೀರು ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಶುದ್ಧ ನೀರಿನ ಘಟಕದಲ್ಲಿ ನೀರು ಬಂದ್‌ ಆಗಿ ಬಹಳ ದಿನಗಳಾದರೂ ಅಧಿಕಾರಿಗಳು ಇದರ ಕಡೆಗೆ ಗಮನ ಹರಿಸುತ್ತಿಲ್ಲ.

ದೇವಸ್ಥಾನದ ಸಮೀಪವಿರುವ ಶುದ್ಧ ನೀರಿನ ಘಟಕದ ಬಾಗಿಲು ಮುರಿದು ಹೋದ ಪರಿಣಾಮ ನಾಯಿಗಳು ಸಲೀಸಲಾಗಿ ಒಳಗೆ ಹೋಗಿ ಬರುತ್ತಿವೆ. ಇಲ್ಲಿ ಶುದ್ಧ ನೀರು ಸಹ ಸಿಗುತ್ತಿಲ್ಲ. ನೀರು ಬಂದ್‌ ಆಗಿ ಬಹಳ ದಿನಗಳು ಸಂದಿವೆ.

ಸರ್ಕಾರ ಸಾಕಷ್ಟುಅನುದಾನ ಖರ್ಚು ಮಾಡಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ​ದರೂ ಪ್ರಯೋಜನವಾಗುತ್ತಿಲ್ಲ. ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ ರಿಪೇರಿ ಮಾಡಿದರೆ ಸೋಮನಾಥ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೇರಿದಂತೆ ಗ್ರಾಮಸ್ಥರಿಗೆ ಶುದ್ಧ ನೀರು ಸಿಗುವುದರಿಂದಾಗಿ ಆರೋಗ್ಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ನಮ್ಮ ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದೆ. ಇದರ ಬಾಗಿಲು ಮುರಿದು ಬಹಳ ದಿನಗಳಾದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸರ್ಕಾರ ಜನರಿಗೆ ಶುದ್ಧ ನೀರು ಕುಡಿಯಲಿ ಅನ್ನುವ ಉದ್ದೇಶದಿಂದ ಶುದ್ಧ ನೀರಿನ ಘಟಕಗಳ ಸ್ಥಾಪನೆ ಮಾಡುತ್ತಿದೆ. ಈಗ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ ರಿಪೇರಿ ಮಾಡಿ ನಮಗೆ ಅಧಿಕಾರಿಗಳು ಶುದ್ಧ ನೀರು ಒದಗಿಸಬೇಕು ಎಂದು ಜಯವಾಡಗಿ ಗ್ರಾಮ​ಸ್ಥ ಸಂಗು ಇಂಗಳೇಶ್ವರ ಅವರು ಹೇಳಿದ್ದಾರೆ. 

ತಾಲೂಕಿನ ಹುಲಿಬೆಂಚಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆಯಾದ ನಂತರ ಎರಡು ತಿಂಗಳು ಮಾತ್ರ ಚಾಲೂ ಇತ್ತು. ಕಳೆದ ಒಂದೂವರೆ ವರ್ಷದಿಂದ ಶುದ್ಧ ನೀರು ಬಂದ್‌ ಆಗಿದೆ. ಮೋಟಾರ್‌ ಸುಟ್ಟಿದೆ ಎಂದು ಹೇಳಿದ ಅಧಿಕಾರಿಗಳು ಇದುವರೆಗೂ ರಿಪೇರಿ ಮಾಡಿಲ್ಲ. ಕೆಲ ಸಾಮಾನುಗಳನ್ನು ತೆಗೆದುಕೊಂಡು ಹೋಗಲಾಗಿದೆ. ಇದನ್ನು ರಿಪೇರಿ ಮಾಡಿಸಿದರೆ ಜನರು ಶುದ್ಧ ನೀರು ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹುಲಿ​ಬೆಂಚಿ ಗ್ರಾಮಸ್ಥ ಸಿದ್ದಪ್ಪ ವಂದಾಲ ಅವರು ತಿಳಿಸಿದ್ದಾರೆ. 

ಅಖಂಡ ಬಸವನಬಾಗೇವಾಡಿಯಲ್ಲಿ 162 ಶುದ್ಧ ನೀರಿನ ಘಟಕಗಳಿವೆ. ಇದರಲ್ಲಿ 19 ಮಾತ್ರ ಬಂದ್‌ ಇದ್ದು. ಇವುಗಳ ರಿಪೇರಿಗಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಎಲ್ಲ ಶುದ್ಧ ನೀರಿನ ಘಟಕಗಳ ಕಾರ್ಯನಿರ್ವಹಣೆ ಮಾಡಲು ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೂ ಇವುಗಳ ಕಾರ್ಯನಿರ್ವಹಣೆಗಾಗಿ ಅನುದಾನಕ್ಕಾಗಿ ಜಿಪಂ ಸಿಇ​ಒಗೆ ಪತ್ರ ಬರೆಯಲಾಗಿದೆ. ಶುದ್ಧ ನೀರಿನ ಘಟಕಗಳ ದುರಸ್ತಿಗಾಗಿ ಗಮನ ಹರಿಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ  ಎಸ್‌.ಕುಮಾರ ಅವರು ತಿಳಿಸಿದ್ದಾರೆ. 
 

click me!