
ಇಂಡಿ(ಅ.26): ಪಟ್ಟಣವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಒಂದು ವೇಳೆ ತಾರತಮ್ಯ ಮಾಡಿದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿಬಣ) ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ನೇತೃತ್ವದಲ್ಲಿ ಕಾರ್ಯರ್ತರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ರಾರಯಲಿ ಟಿಪ್ಪುಸುಲ್ತಾನ, ಬಸವೇಶ್ವರ, ಅಂಬೇಡ್ಕರ, ಮಹಾವೀರ ವೃತ್ತದ ಮೂಲಕ ನಡೆದು ಮಿನಿ ವಿಧಾನಸೌಧ ತಲುಪಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ, ಹಿರೇಮಸಳಿ ಗ್ರಾಮದ ಯುವ ಮುಖಂಡ ಶಿವಾನಂದ ಮಲಕಗೊಂಡ ಮಾತನಾಡಿ, ಇಂದಿನ ಹೋರಾಟ ಯಾವುದೇ ರಾಜಕೀಯ ಉದ್ದೇಶವಲ್ಲ. ಕರವೇ ಕನ್ನಡ ನಾಡು, ನುಡಿ, ಜಲ, ನೆಲ, ಉಳಿವಿಗಾಗಿ ದೇಶದ ಅಖಂಡತೆ ಸಾರ್ವಭೌಮತೆ ಎತ್ತಿ ಹಿಡಿಯುವ ಉದ್ದೇಶವಾಗಿದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಇತರೆ ಜಿಲ್ಲೆಗಳನ್ನು ಆಡಳಿತ ಸುಗಮಗೊಳ್ಳಲು ಇಬ್ಭಾಗ ಮಾಡಿ ನೂತನವಾಗಿ ಜಿಲ್ಲೆ ಮಾಡುವ ಉದ್ದೇಶವಿರುವುದರಿಂದ ಇಂಡಿಯೂ ಸಹಿತ ಜಿಲ್ಲೆ ಮಾಡಬೇಕು ಎಂಬುದು ಹೋರಾಟದ ಉದ್ದೇಶವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆಯ ಇಂಡಿ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ. ಇಂಡಿ ಕರ್ನಾಟಕ -ಮಹಾರಾಷ್ಟ್ರ ಗಡಿ ಭಾಗದಲ್ಲಿದ್ದು, 2013 ರಿಂದ ಶಾಸಕ ಯಶವಂತರಾಯಗೌಡ ಪಾಟೀಲ ಆಯ್ಕೆಯಾದ ನಂತರ ಸರ್ವ ರೀತಿಯಿದ ಸುಧಾರಣೆ ಕಂಡಿದೆ. ಸರ್ಕಾರ ನೂತನ ಜಿಲ್ಲೆ ಮಾಡುತ್ತಿರುವುದು ಸ್ವಾಗತಾರ್ಹ. ಒಂದು ಜಿಲ್ಲೆ ಮಾಡಲು ಯಾವ ಮಾನದಂಡಗಳು ಇರಬೇಕು ಎಂಬುದು ಪ್ರಮುಖವಾಗಿದ್ದು, ಆ ಎಲ್ಲ ಅರ್ಹತೆ ಇಂಡಿ ಪಟ್ಟಣ ಒಳಗೊಂಡಿದೆ.
ಕಂದಾಯ ಉಪವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಪೊಲೀಸ್ ಠಾಣೆ, ಗ್ರಾಮೀಣ ಠಾಣೆ, ಸ್ಟೇಡಿಯಂ, ಹೆಲಿಪ್ಯಾಡ್, ರಸ್ತೆಗಳ ಸುಧಾರಣೆ, 6 ಸಕ್ಕರೆ ಕಾರ್ಖಾನೆ, ರಸ್ತೆ ಸಾರಿಗೆ ಡೀಪೋ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬರಲು ಹೋಗಲು ರೈಲ್ವೆಗಳ ಸಂಚಾರ, ರಾಷ್ಟ್ರೀಯ ಹೆದ್ದಾರಿ ಇದ್ದು ಒಂದು ಜಿಲ್ಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳಿದ್ದು ಜಿಲ್ಲೆ ಮಾಡುವಾಗ ಇಂಡಿ ಪ್ರಥಮ ಆದ್ಯತೆ ನೀಡಬೇಕು. ಒಂದು ವೇಳೆ ಜಿಲ್ಲೆ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ಎಸಿ ಲೋಖಂಡೆ ಸ್ನೇಹಲ್ ಸುಧಾಕರ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ಮುಖಂಡ ಬಾಳು ಗಣೊರೆ, ಅಶೋಕ ಭೂಸನೂರ, ಮಲ್ಲನಗೌಡ ಪಟೀಲ, ರಾಜಕುಮಾರ ಗುಂಜಟಗಿ, ಶಿವು ಬಗಲಿ, ಮುತ್ತುರಾಜ ದೇವರ, ದೇವೇಂದ್ರ ಜೋಕಾಲಿ, ಸಂತೋಷ ಉಪ್ಪಾರ, ಸಚೀನ ಜೋರಪೂರ, ಶಂಕರ ಹೂಗಾರ, ಸುಫಯಾನ ಇಂಡಿಕರ, ಮಹಾಂತೇಶ ಮಲಕಗೊಂಡ, ಮಳಸಿದ್ದ ನರಳೆ, ಮಹೇಶ ಆನಂದ, ಶಶಿಕಾಂತ ವಾಲೀಕಾರ, ಚಂದು ಪಾಟೀಲ, ಶಿವಶರಣ ಮಾಮಾ ಅನೇಕರಿದ್ದರು.