
ವಿಜಯನಗರ (ಮೇ.2): ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಮೇಲೆ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋ ಕುತೂಹಲ ಎಲ್ಲರಲ್ಲಿದೆ. ಬಹುತೇಕ ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವ ಪ್ರಸಂಗ ಇದ್ದ ಹಾಗೆ ಕಾಣುತ್ತಿಲ್ಲ. ಇದರ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಗಮನಸೆಳೆದಿದೆ.
ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಮೋದಿ, ಅಮಿತ್ ಷಾ, ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಲಿ, ನಾನು ಯುದ್ಧಕ್ಕೆ ಹೋಗಲು ಸಿದ್ಧ ಎಂದು ಎದೆ ತಟ್ಟಿ-ತಟ್ಟಿ ಹೇಳಿಕೆ ನೀಡಿದ್ದಾರೆ.
'ಪಾಕಿಸ್ತಾನ ಎಂದಿಗೂ ನಮಗೆ ಸಂಬಂಧವಿಲ್ಲ. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶವೇ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ. ಮೋದಿ, ಅಮಿತ್ ಷಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ಕೊಡಲಿ. ನಾನು ಯುದ್ಧ ಮಾಡೋದಕ್ಕೆ ಸಿದ್ಧ ಎಂದು ಜಮೀರ್ ಎದೆ ತಟ್ಟಿ ತಟ್ಟಿ ಹೇಳಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಮತ್ತು ಯತ್ನಾಳ್ ರಾಜೀನಾಮೆ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿದ ಅವರು, 'ಯತ್ನಾಳ್ ಅವರು, ಯಾವಾಗಲೂ ದಮ್ಮು, ತಾಕತ್ತು ಅಂತ ಮಾತಾಡ್ತಾರೆ. ಪದೇ, ಪದೇ, ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ. ಸಚಿವ ಶಿವಾನಂದ ಪಾಟೀಲ್, ದಮ್ಮು ತಾಕತ್ತು ತೋರಿಸಿದ್ದಾರೆ. ಅವರಪ್ಪಗೆ ಹುಟ್ಟಿದವರಾದ್ರೆ, ರಾಜೀನಾಮೆ ಕೊಟ್ಟು ಬರಲಿ ಅಂತ ಯತ್ನಾಳ್ ಹೇಳಿದ್ದರು. ಶಿವಾನಂದ್ ಪಾಟೀಲ್ ರಾಜಿನಾಮೆ ಕೊಟ್ಟು ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಿದ್ದಾರೆ. ಅದೇ ಯತ್ನಾಳ್ ರಾಜೀನಾಮೆ ನೀಡಿ, ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಲಿ ಎಂದು ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು. 'ಕೊಲೆಯಾಗಿದೆ, ಕೊಲೆಯಾಗಬಾರದಾಗಿತ್ತು. ಸತ್ತಿರೋರು ಉತ್ತಮ ಚಾರಿತ್ರ್ಯ ವ್ಯಕ್ತಿಯಲ್ಲ, ರೌಡಿ ಶೀಟರ್ ಅಂತೆ. ಹಿಂದೆ ಕೊಲೆ ಕೇಸ್ ನಲ್ಲಿದ್ರಂತೆ, ಪೊಲೀಸರು ತನಿಖೆ ಮಾಡುತ್ತಾರೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವೇ , ಕೊಲೆಯಾಗಬಾರದಾಗಿತ್ತು. ಬಿಜೆಪಿಯವರಿಗೆ ಎಲ್ಲದರಲ್ಲೂ ರಾಜಕಾರಣ. ಅವರು ಜಾತಿ ರಾಜಕಾಣರ ಮನೆಯಲ್ಲಿ ಮಾಡಿಕೊಳ್ಳಲಿ, ರಾಜಕೀಯದಲ್ಲಿ ಬಂದು ಮಾಡಬಾರದು ಎಂದು ಹೇಳಿದ್ದಾರೆ.