ಮೊಗೇರಿಯಲ್ಲಿ ಅಡಿಗರ ಪುರಭವನ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

By Sathish Kumar KHFirst Published Nov 30, 2022, 8:34 PM IST
Highlights

ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ಗೋಪಾಲಕೃಷ್ಣ ಅಡಿಗ ಅವರ ತವರೂರಾದ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮೋಗೇರಿ ಗ್ರಾಮದಲ್ಲಿ ಅವರ ಸ್ಮರಣಾರ್ಥ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಪುರಭವನಕ್ಕೆ ಗ್ರಾಮಸ್ಥರಿಂದಲೇ ವಿರೋಧ ವ್ಯಕ್ತವಾಗಿದೆ. 

ಉಡುಪಿ (ನ.30): ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆ ಗೋಪಾಲಕೃಷ್ಣ ಅಡಿಗರ ತವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮೊಗೇರಿ ಆಗಿದೆ. ಎಂ.ಗೋಪಾಲಕೃಷ್ಣ ಅಡಿಗ ಅಂದರೆ ಮೊಗೇರಿ ಗೋಪಾಲಕೃಷ್ಣ ಅಡಿಗ ಅಂತಾನೆ ಪ್ರಸಿದ್ಧಿ ಪಡೆದವರು. ಈ ಮಹಾ ಸಾಹಿತಿಯ ನೆನಪಿಗಾಗಿ, ಅಡಿಗರ ಹೆಸರಿನ ಪುರಭವನ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಈ ಪ್ರಸ್ತಾವನೆಗೆ ಅವರ ಹುಟ್ಟೂರಲ್ಲೇ ವಿರೋಧ ವ್ಯಕ್ತಗೊಂಡಿರುವುದು ವಿಪರ್ಯಾಸವಾಗಿದೆ.

ಗೋಪಾಲಕೃಷ್ಣ ಅಡಿಗರ ಬಗ್ಗೆ ಇಡೀ ಕರ್ನಾಟಕ ಹೆಮ್ಮೆಪಡುತ್ತೆ. ಆದರೆ ತವರಿನ ಜನ ಮಾತ್ರ ಅಡಿಗರಿಂದ ಅದ್ಯಾಕೋ ದೂರ ಸರಿದಿದ್ದಾರೆ. ಮೊಗೇರಿ ಗೋಪಾಲಕೃಷ್ಣ ಅಡಿಗ ಪುರಭವನ ಬೇಡ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನ ಗಾಂಧಿ ಮೈದಾನದಲ್ಲಿ ಪುರಭವನ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಆದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಬೈಂದೂರಿನ ಗಾಂಧಿ ಮೈದಾನ ಉಳಿಸಿ ಎಂಬ ಹೋರಾಟಕ್ಕೆ ಚಾಲನೆ ದೊರೆತಿದೆ. ಗಾಂಧಿ ಮೈದಾನದ ನಡುವೆ ಪುರಭವನ ನಿರ್ಮಾಣವಾಗುತ್ತದೆ ಅನ್ನೋದು ಸ್ಥಳೀಯ ಜನರಿಗಿರುವ ಸಂಶಯ. ಒಂದು ವೇಳೆ ಮೈದಾನದ ನಡುವೆ ಭವನ ನಿರ್ಮಾಣವಾದರೆ, ಮೈದಾನ ಉಪಯೋಗಕ್ಕೆ ಸಿಗಲ್ಲ ಎನ್ನುವುದು ಗ್ರಾಮಸ್ಥರ ಆತಂಕವಾಗಿದೆ.

Haveri: ಕನ್ನಡದ ಕಟ್ಟಾಳು ಪಾಟೀಲ್‌ ಪುಟ್ಟಪ್ಪ ಸಮಾಧಿ ಕಾಯಕಲ್ಪ ಮರೆತ ಸರ್ಕಾರ

ಸೈನಿಕರ ಯಾವುದೇ ಚಟುವಟಿಕೆ ನಡೆಯಲ್ಲ: ಈ ಮೈದಾನವನ್ನು ಸೈನಿಕರ ಮೀಸಲು ಸ್ಥಳ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಮೈದಾನದ ಬಳಕೆಯಲ್ಲಿ ಇರದ ಜಾಗದಲ್ಲಿ ಪುರಭವನ ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಭವನದಲ್ಲಿ ಒಂದು ಹಾಲ್, ಡೈನಿಂಗ್ ಹಾಲ್, ಸಭಾಂಗಣ, ಒಳಾಂಗಣ ಕ್ರೀಡಾಂಗಣ ಎಲ್ಲದಕ್ಕೂ ಅವಕಾಶವಿದ್ದು, ಇದರಿಂದ ಬೈಂದೂರಿನ ನಾಗರಿಕರಿಗೆ ಪ್ರಯೋಜನವಾಗಲಿದೆ. ಬೈಂದೂರಿನಲ್ಲಿರುವ ಸಭಾಂಗಣದ ಕೊರತೆಯನ್ನು ಈ ಪುರಭವನ ನೀಗಿಸಲಿದೆ ಎಂದು ಆಡಳಿತ ಹೇಳುತ್ತಿದೆ. ಅಡಿಗರು ನಮ್ಮ ಊರಿನವರು ಅನ್ನುವ ಬಗ್ಗೆ ನಮಗೆ ಹೆಮ್ಮೆ ಇದೆ ಎನ್ನುವ ಜನ , ಊರು ಅಭಿವೃದ್ಧಿಯಾಗಬೇಕು ಅನುದಾನ ಬೇಕು ಎಂದು ಕನಸು ಹೊತ್ತವರು ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ ಅನ್ನೋದು ಪ್ರಶ್ನೆಯಾಗಿದೆ.

ಬೈಂದೂರಿನ ಗಾಂಧಿ ಮೈದಾನ ಸೈನಿಕರಿಗೆ ಮೀಸಲಾದ ಸ್ಥಳ, ಪುರಭವನ ಮಾಡುವುದರಿಂದ ಗಾಂಧಿ ಮೈದಾನಕ್ಕೂ ಧಕ್ಕೆ ಆಗುತ್ತದೆ ಅನ್ನೋದು ಹೋರಾಟಗಾರರ ಹೇಳಿಕೆ. ಆದರೆ ಈ ಮೈದಾನದಲ್ಲಿ ಸೈನಿಕರು ಕವಾಯತು ಮಾಡುವುದಾಗಲಿ ಅಥವಾ ಪೊಲೀಸರು ಕವಾಯತು ಮಾಡಿದ ಯಾವುದೇ ಚಟುವಟಿಕೆ ಇಲ್ಲಿ ನಡೆಯುವುದಿಲ್ಲ. 

ಬಾಗಲಕೋಟೆಯಲ್ಲಿ ಹೆತ್ತವರ ಸವಿನೆನಪಿಗೆ ಗುಡಿ ಕಟ್ಟಿ ಪೂಜಿಸುತ್ತಿರುವ ಸಾಹಿತಿ

ಮೈದಾನದ ಅಭಿವೃದ್ಧಿಯೂ ಆಗಲಿದೆ: ಈ ಮೈದಾನ ಒಟ್ಟು ಒಂಬತ್ತು ಎಕರೆ ವಿಸ್ತೀರ್ಣವಿದೆ.  ಅಡಿಗರ ಹುಟ್ಟೂರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಸುಮಾರು 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವ್ಯವಸ್ಥೆ ಒಳಗೊಂಡ ಪುರ ಭವನ ನಿರ್ಮಿಸುತ್ತೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ಭರವಸೆ ನೀಡಿದ್ದಾರೆ. ಈಗ ಗಾಂಧಿ ಮೈದಾನದ ಮೂಲೆಯಲ್ಲಿ ಒಂದು ಮುಕ್ಕಾಲು ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಲಿದ್ದು, ಇದರಿಂದ ಗಾಂಧಿ ಮೈದಾನಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಪುರಭವನದ ಜೊತೆಗೆ ಗಾಂಧಿ ಮೈದಾನದ ಅಭಿವೃದ್ಧಿಗೂ 5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ್ದು ಕ್ರೀಡೆಗೂ ಅವಕಾಶ ಸಿಗಲಿದೆ. ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತದೆ. ಹಾಗಾಗಿ ಜನ ಸಹಕಾರ ಕೊಡುವ ನಿರೀಕ್ಷೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!