ಅರ್ಜುನ್‌ ಸರ್ಜಾ ನಿರ್ಮಾಣದ ಹನುಮ ದೇಗುಲಕ್ಕೆ ಮಂಗಳೂರಿನ ಶಿಲ್ಪಿ

By Kannadaprabha NewsFirst Published Oct 25, 2019, 12:48 PM IST
Highlights

ಚೆನ್ನೈನ ಗೇರುಗಂಬಕ್ಕಂ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬಹುದೊಡ್ಡ ಹಾಗೂ ವಿಭಿನ್ನವಾದ ಹನುಮಾನ್‌ ದೇವಸ್ಥಾನಕ್ಕೆ ಬೇಕಾದ ಮರದ ಕೆತ್ತನೆ ಶೈಲಿ ವೀಕ್ಷಣೆಗಾಗಿ ಬಹುಭಾಷಾ ನಟ ಅರ್ಜುನ್‌ ಸರ್ಜಾ ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಕುಸುರಿ ಕೆಲಸಗಳಿಗೆ ಮಂಗಳೂರಿನ ಬೋಳಾರದ ವಾಸ್ತುಶಿಲ್ಪಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮಂಗಳೂರು(ಅ.25): ಚೆನ್ನೈನ ಗೇರುಗಂಬಕ್ಕಂ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬಹುದೊಡ್ಡ ಹಾಗೂ ವಿಭಿನ್ನವಾದ ಹನುಮಾನ್‌ ದೇವಸ್ಥಾನಕ್ಕೆ ಬೇಕಾದ ಮರದ ಕೆತ್ತನೆ ಶೈಲಿ ವೀಕ್ಷಣೆಗಾಗಿ ಬಹುಭಾಷಾ ನಟ ಅರ್ಜುನ್‌ ಸರ್ಜಾ ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ತಮ್ಮ ದೇವಸ್ಥಾನಕ್ಕೆ ಬೇಕಾದ ಆಕರ್ಷಕವಾದ ಕುಸುರಿ ಕೆಲಸಗಳಿಗೆ ಮಂಗಳೂರಿನ ಬೋಳಾರದ ವಾಸ್ತುಶಿಲ್ಪಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅರ್ಜುನ್‌ ಸರ್ಜಾ ಅವರು ತಮ್ಮ ಕನಸಿನ ಹನುಮಾನ್‌ ದೇವಸ್ಥಾನವನ್ನು ಇಡೀ ದೇಶದಲ್ಲೇ ಬಹು ಆಕರ್ಷಣೆಯ ದೇಗುಲವಾಗಿ ನಿರ್ಮಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಅವರು ಮಂಗಳೂರಿಗೆ ಆಗಮಿಸಿದ್ದರು. ಗುರುವಾರ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಆಕರ್ಷಕ ವಾಸ್ತುಶಿಲ್ಪ ಹಾಗೂ ಮರದ ಕೆತ್ತನೆ ವಿನ್ಯಾಸವನ್ನು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಇಲ್ಲಿನ ಕೆಲವು ವಿಭಿನ್ನ ಶೈಲಿಯ ಕೆತ್ತನೆ ವಿನ್ಯಾಸವನ್ನು ತಾವು ನಿರ್ಮಿಸುತ್ತಿರುವ ಹನುಮಾನ್‌ ದೇಗುಲಕ್ಕೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಮುಡಿಪು ಭಾಗದಲ್ಲಿ ಮಣ್ಣು ಅಕ್ರಮ ಗಣಿಗಾರಿಕೆ

ಅರ್ಜುನ್‌ ಸರ್ಜಾ ಅವರು ನಿರ್ಮಿಸುತ್ತಿರುವ ಈ ಹನುಮಂತನ ದೇವಸ್ಥಾನದ ಏಕಶಿಲಾ ಹನುಮನ ವಿಗ್ರಹ ಸುಮಾರು 35 ಅಡಿ ಎತ್ತರವಿರಲಿದೆ. ಇದರ ನಿರ್ಮಾಣಕ್ಕಾಗಿ ಸುಮಾರು 27 ಟನ್‌ ಕಬ್ಬಿಣವನ್ನು ಬಳಸಲಾಗುತ್ತದೆ. ಕರ್ನಾಟಕದ ಶಿಲ್ಪಿ ಅಶೋಕ್‌ ಗುಡಿಗಾರ್‌ ಅವರ ನೇತೃತ್ವದಲ್ಲಿ ಈ ವಿಗ್ರಹನ್ನು ಕೆತ್ತಲಾಗಿದೆ. ಧ್ಯಾನದ ಭಂಗಿಯಲ್ಲಿರುವ ಹನುಮನ ದೊಡ್ಡ ವಿಗ್ರಹ ದೇಶದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ. ಮೊದಲ ಹನುಮನ ವಿಗ್ರಹದ ಕಾಮಗಾರಿ ಶೇ.90ರಷ್ಟುಪೂರ್ಣಗೊಂಡಿದೆ. ಇನ್ನೂ ಮರದ ಕೆತ್ತನೆಯ ಕೆಲಸವಷ್ಟೇ ಬಾಕಿ ಇದೆ. ಮರದ ಕೆತ್ತನೆಯ ಅರ್ಕಿಟೆಕ್ಚರ್‌ನ್ನು ಮಂಗಳೂರು ಬೋಳಾರದ ಸಂತೋಷ್‌ ಶೆಟ್ಟಿಅವರಿಗೆ ವಹಿಸಲಾಗಿದೆ. ಆ ಹಿನ್ನಲೆಯಲ್ಲಿ ನಗರದ ದೇವಸ್ಥಾನದ ಮರದ ಕೆತ್ತನೆಗಳನ್ನು ವೀಕ್ಷಿಸಲು ನಟ ಅರ್ಜುನ್‌ ಸರ್ಜಾ ಅವರು ನಗರಕ್ಕೆ ಆಗಮಿಸಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ಮಂಗಳೂರಿಗೆ ಆಗಮಿಸಿದ ಅರ್ಜುನ್‌ ಸರ್ಜಾ ಅವರು ಸಂತೋಷ್‌ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ. ಅರ್ಜುನ್‌ ಸರ್ಜಾ ಅವರ ಕನಸಿನ ಹನುಮನ ದೇವಸ್ಥಾನದ ಕಾಂಪೌಂಡ್‌, ಗೋಪುರ ಹಾಗೂ ಇತರೆ ಮರದ ಕೆತ್ತನೆಯ ಕಾರ್ಯವನ್ನು ಸಂತೋಷ್‌ ಶೆಟ್ಟಿಅವರಿಗೆ ವಹಿಸಲಾಗಿದೆ.

ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್‌ ಕ್ಯಾರ್‌...?

ಈಗಾಗಲೇ ನಗರದ ಹಲವು ಕಟ್ಟಡಗಳನ್ನು ವಿನ್ಯಾಸ ಮಾಡಿರುವ ಸಂತೋಷ್‌ ಶೆಟ್ಟಿಅವರು ಇದೀಗ ದೇವಸ್ಥಾನದ ಸುಂದರೀಕರಣದ ಕೆಲಸದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮರದ ಕೆತ್ತನೆಯನ್ನು ತೋರಿಸಲು ಸಂತೋಷ್‌ ಅವರು ನಟ ಅರ್ಜುನ್‌ ಅವರನ್ನು ನಗರಕ್ಕೆ ಕರೆಸಿಕೊಂಡಿದ್ದಾರೆ. ಇಲ್ಲಿನ ದೇವಸ್ಥಾನಗಳನ್ನು ವೀಕ್ಷಿಸಿದ ಬಳಿಕ ಅವರಿಗೆ ಅದೇ ರೀತಿಯ ವಿನ್ಯಾಸ ಇಷ್ಟವಾದ್ದಲ್ಲಿ ಅಂತಹ ವಿನ್ಯಾಸ ಮಾಡುವ ಬಗ್ಗೆ ಸಂತೋಷ್‌ ಯೋಜನೆ ರೂಪಿಸಿದ್ದಾರೆ.

ದೇವಸ್ಥಾನದ ಶೇ.90 ಕೆಲಸ ಪೂರ್ಣ:

ಅದರ ವಿನ್ಯಾಸವನ್ನು ನೋಡಲು ಅರ್ಜುನ್‌ ಅವರು ಮಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಮರದ ಕೆತ್ತನೆಯನ್ನು ವೀಕ್ಷಿಸಲಿದ್ದಾರೆ. ಇದನ್ನು ನೋಡಿ ಹನುಮನ ದೇವಸ್ಥಾನದಲ್ಲೂ ಅಳವಡಿಸುವ ಯೋಚನೆಯಿದೆ’ ಎಂದು ಹೇಳಿದ್ದಾರೆ.

ಈ ಏಕಶಿಲಾ ಹನುಮ ವಿಗ್ರಹವುಳ್ಳ ದೇವಸ್ಥಾನದ ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿದ್ದು, ಫೆಬ್ರವರಿಯಲ್ಲಿ ಕುಂಭಾಭಿಷೇಕವನ್ನು ನೆರವೇರಿಸಲಾಗುವುದು. ಆ ಬಳಿಕ ಭಕ್ತರಿಗೆ ಪೂಜೆ ಮಾಡುವ ಅವಕಾಶವನ್ನು ನೀಡುವುದಾಗಿ ಅರ್ಜುನ್‌ ಸರ್ಜಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

click me!