ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ಬಿಜೆಪಿ ರೀತಿ ಮುಂದೂಡಲ್ಲ: ಸಿದ್ದರಾಮಯ್ಯ

By Kannadaprabha NewsFirst Published Aug 13, 2023, 4:00 AM IST
Highlights

ವಾರ್ಡ್‌ಗಳ ಪುನರ್ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಬಿಬಿಎಂಪಿಗೆ 12 ವಾರ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಗಳಿಗೆ 10 ವಾರಗಳ ಗಡುವು ನೀಡಿದೆ. ಆ ಗಡುವಿನ ಆಧಾರದಲ್ಲಿ ವರದಿಗಳು ಸಿದ್ಧವಾಗುತ್ತಿವೆ. ಅದನ್ನು ನಾವು ನ್ಯಾಯಾಲಯಕ್ಕೆ ನೀಡುತ್ತೇವೆ. ನ್ಯಾಯಾಲಯ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ 

ಮೈಸೂರು(ಆ.13): ಬಿಬಿಎಂಪಿ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳನ್ನು ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ವಾರ್ಡ್‌ಗಳ ಪುನರ್ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಬಿಬಿಎಂಪಿಗೆ 12 ವಾರ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಗಳಿಗೆ 10 ವಾರಗಳ ಗಡುವು ನೀಡಿದೆ. ಆ ಗಡುವಿನ ಆಧಾರದಲ್ಲಿ ವರದಿಗಳು ಸಿದ್ಧವಾಗುತ್ತಿವೆ. ಅದನ್ನು ನಾವು ನ್ಯಾಯಾಲಯಕ್ಕೆ ನೀಡುತ್ತೇವೆ. ನ್ಯಾಯಾಲಯ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ ಎಂದರು.

ಚುನಾವಣೆ ವಿಚಾರದಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುತ್ತಿದ್ದರು. ನಾವು ಆ ರೀತಿ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಿಎಂ, ಡಿಸಿಎಂ ವಿರುದ್ಧ ಹರಿಹಾಯ್ದ ಯತ್ನಾಳ

ಯುವ ನಿಧಿ ಡಿಸೆಂಬರ್‌ ನಂತ್ರ ಜಾರಿ: ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಗೃಹಲಕ್ಷ್ಮಿ  ಯೋಜನೆಗೆ ಚಾಲನೆ ನೀಡಲು ಎಐಸಿಸಿ ನಾಯಕ ರಾಹುಲ್‌ಗಾಂಧಿ ಆ.29-30 ರಂದು ಸಮಯ ನೀಡಬಹುದು. ಮತ್ತೊಂದು ಗ್ಯಾರಂಟಿಯಾದ ಯುವನಿಧಿಯನ್ನು ಡಿಸೆಂಬರ್‌ನಲ್ಲಿ ಜಾರಿ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪದವಿ ಮುಗಿಸಿ ಆರು ತಿಂಗಳು ಕೆಲಸ ಸಿಗದೇ ಇರುವವರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಅಂತ ಹೇಳಿದ್ದೇವೆ. ಡಿಸೆಂಬರ್‌ಗೆ ಆರು ತಿಂಗಳು ಆಗುತ್ತದೆ. ಆದ್ದರಿಂದ ಬಹುಶಃ ಜನವರಿಯಿಂದ ಯುವ ನಿಧಿ ಜಾರಿ ಆಗುತ್ತದೆ. ಬಿಎ, ಬಿಎಸ್ಸಿ, ಬಿಕಾಂ, ಎಂಕಾಂ, ಎಂಎಸ್ಸಿ ಮತ್ತಿರ ಪದವಿ ಮಾಡಿದವರಿಗೆ .3000 ಕೊಡುತ್ತೇವೆ. ಡಿಪ್ಲೊಮಾ ಮಾಡಿದವರಿಗೆ .1500 ಕೊಡುತ್ತೇವೆ ಎಂದರು.

ಗೃಹಲಕ್ಷ್ಮಿ ಯೋಜನೆಗೆ 1.33 ಕೋಟಿ ಜನ ನೋಂದಣಿ ಆಗಬೇಕು. ಈವರೆಗೆ 1.6 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿ ಬಾಕಿ ಇದೆ. ನೋಂದಣಿ ಪ್ರಕ್ರಿಯೆ ಮುಗಿಯಬೇಕು. ಆಗಸ್ಟ್‌ ಅಂತ್ಯದಲ್ಲೇ ಗೃಹ ಲಕ್ಷ್ಮಿಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.

click me!