
ಬೆಂಗಳೂರು/ದಾವಣಗೆರೆ (ಜೂ.01): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಬಾಂಬ್ ಸಿಡಿದಿದೆ. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇದು ಕಾಂಗ್ರೆಸ್ ಪಕ್ಷದ ಒಳಗಿನ ಭಿನ್ನಮತವನ್ನು ಬೀದಿಗೆ ತಂದಿದೆ. ಈ ಆಡಿಯೋ ವಿಚಾರವಾಗಿ ದಾವಣಗೆರೆಯ ನೂತನ ಶಾಸಕ ಸಮರ್ಥ ಶಾಮನೂರು ಅವರು ಜಮೀರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹೈಕಮಾಂಡ್ ತನಿಖೆಗೆ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟ್ಟರ್) ನಲ್ಲಿ ಸುಮಾರು 3 ನಿಮಿಷ 51 ಸೆಕೆಂಡ್ ಅವಧಿಯ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಇದರಲ್ಲಿ ಜಮೀರ್ ಅಹಮದ್ ಅವರು ತಮ್ಮ ಆಪ್ತ ಮೊಹಮ್ಮದ್ ಸಿರಾಜ್ ಎಂಬುವವರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಆಡಿಯೋದಲ್ಲಿ, 'ಬಹಳಷ್ಟು ವಾರ್ಡ್ಗಳಲ್ಲಿ ಎಸ್ಡಿಪಿಐ (ಕುಕ್ಕರ್ ಗುರುತು) ಹವಾ ಇದೆ. ಒತ್ತಾಯಪೂರ್ವಕವಾಗಿ ಯಾರಿಗೂ ಕಾಂಗ್ರೆಸ್ಗೆ ವೋಟ್ ಹಾಕಲು ಕರೆಯಬೇಡಿ. ಸಾದಿಕ್ ಪೈಲ್ವಾನ್ ವಾರ್ಡ್ನಲ್ಲಿ ಕಾಂಗ್ರೆಸ್ಗೆ ಮೈನಸ್ ಆಗಬೇಕು. ಮನೆಯಿಂದ ಹೊರಬಂದವರಿಗೆ ಎಸ್ಡಿಪಿಐ ಅಥವಾ ಪಕ್ಷೇತರರಿಗೆ ಮತ ಹಾಕುವಂತೆ ಹೇಳಿ' ಎಂಬ ಅಂಶಗಳಿವೆ. ಇದು ಸ್ವಪಕ್ಷದ ಅಭ್ಯರ್ಥಿಗಳಿಗೇ ಹಿನ್ನಡೆ ಉಂಟುಮಾಡುವ ಷಡ್ಯಂತ್ರ ಎಂಬ ಆರೋಪಕ್ಕೆ ಕಾರಣವಾಗಿದೆ.
ಈ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಜಮೀರ್ ಅಹಮದ್ ಖಾನ್, 'ವೈರಲ್ ಆಗಿರುವ ಆಡಿಯೋ ಸಂಪೂರ್ಣ ನಕಲಿ. ಇತ್ತೀಚಿನ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಕಿಡಿಗೇಡಿಗಳು ನನ್ನ ಧ್ವನಿಯನ್ನು ಅನುಕರಿಸಿ ಈ ರೀತಿ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದ್ದು, ಗೊಂದಲ ಸೃಷ್ಟಿಸಲು ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ಸೈಬರ್ ಠಾಣೆಗೆ ದೂರು ನೀಡುತ್ತೇನೆ. ಯಾವ ತನಿಖೆಗಾದರೂ ನಾನು ಸಿದ್ಧ' ಎಂದು ಸವಾಲು ಹಾಕಿದ್ದಾರೆ.
ಜಮೀರ್ ಅಹಮದ್ ಅವರ 'ನಕಲಿ ಆಡಿಯೋ' ಹೇಳಿಕೆಗೆ ದಾವಣಗೆರೆಯಲ್ಲಿ ಶಾಸಕ ಸಮರ್ಥ ಶಾಮನೂರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ಚುನಾವಣೆ ಸಮಯದಲ್ಲಿ ಇದೆಲ್ಲವೂ 'ಓಪನ್ ಸೀಕ್ರೆಟ್' ಆಗಿತ್ತು. ಸತ್ಯ ಸಂಗತಿಗಳು ಹೊರಬಂದಾಗ ಅದನ್ನು ಷಡ್ಯಂತ್ರ ಎನ್ನುವುದು ಸರಿಯಲ್ಲ. ಪ್ರತಿ ಚುನಾವಣೆಯಲ್ಲಿ ಎ ಟೀಂ, ಬಿ ಟೀಂ ಎಂಬುದು ಇರುತ್ತದೆ. ಆದರೆ ಆಡಿಯೋದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಾಗೂ ಕಾಂಗ್ರೆಸ್ಗೆ ವಿರುದ್ಧವಾಗಿ ಮಾತನಾಡಿರುವುದು ಸ್ಪಷ್ಟವಾಗಿದೆ. ಇವರು ಷಡ್ಯಂತ್ರದಿಂದಲೇ ಗೆಲ್ಲಲು ಸಾಧ್ಯ' ಎಂದು ಕಿಡಿ ಕಾರಿದ್ದಾರೆ.
ಮುಂದುವರಿದು ಮಾತನಾಡಿದ ಅವರು, 'ನಾನು ರಾಜಕೀಯಕ್ಕೆ ಹೊಸಬನಿರಬಹುದು, ಆರಂಭದಲ್ಲೇ ಈ ರೀತಿ ಬೆನ್ನಿಗೆ ಇರಿಯುವ ಕೆಲಸ ಮಾಡಿದರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಎಸ್ಡಿಪಿಐ ಮತ್ತು ಪಕ್ಷೇತರರನ್ನು ಜಮೀರ್ ಒಗ್ಗೂಡಿಸಿದ್ದಾರಾ? ಎಲ್ಲರೂ ಒಗ್ಗೂಡಿ ಬರಬೇಕಿತ್ತಲ್ಲವೇ? ಈ ಆಡಿಯೋವನ್ನು ಫಾರೆನ್ಸಿಕ್ ಲ್ಯಾಬ್ಗೆ (FSL) ಕಳುಹಿಸಿ ತನಿಖೆ ಮಾಡಲಿ. ಹೈಕಮಾಂಡ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಏನೇ ಷಡ್ಯಂತ್ರ ಮಾಡಿದರೂ ನನ್ನನ್ನು ತಾಯಿ ದುಗ್ಗಮ್ಮನೇ ಕಾಪಾಡಿದಳು' ಎಂದು ಭಾವುಕರಾಗಿ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ