
ಬೆಂಗಳೂರು (ನ.24): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ವೇಳೆ ಕೆಲಕಾಲ ಅಕಾಲಿಕ ಮಳೆಯಾಗಿದೆ. ವಾಯುಭಾರ ಕುಸಿತ ಹಿನ್ನೆಲೆ ಚೆನ್ನೈ, ಪುದುಚೇರಿ, ಆಂಧ್ರ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಪರಿಣಾಮ ರಾಜ್ಯಾದ್ಯಂತ ಎರಡು ದಿನ ಹಗುರ ಮಳೆಯಾಗಲಿದ್ದು, ಇದರ ಎಫೆಕ್ಟ್ ಬೆಂಗಳೂರಿಗೂ ಕೂಡ ತಟ್ಟಲಿದೆ. ಮೋಡ ಮುಸುಕಿದ ವಾತಾವರಣದ ಜೊತೆಯಲ್ಲಿ ನಿರಂತರವಾಗಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ನ.23 ರ ಬುಧವಾರ ಮಧ್ಯಾಹ್ನದಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಗುರುವಾರ ಬೆಳಗ್ಗೆಯಿಂದಲೇ ತುಂತುರು ಮಳೆ ಸುರಿದು ಬೆಂಗಳೂರಿನ ಜನರು ದಿನನಿತ್ಯದ ಕೆಲಸಗಳಿಗೆ ಪರದಾಡಿದರು. ಕಚೇರಿಗೆ ತೆರಳುವವರು ಟ್ರಾಫಿಕ್ ಜಾಮ್ ನಿಂದ ಸಂಕಷ್ಟ ಅನುಭವಿಸಿದರು. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರ ಮತ್ತು ಸಾಮಾನ್ಯ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆ ಜೊತೆಗೆ ಕೆಲವು ಕಡೆಗಳಲ್ಲಿ ಮಂಜು ಕವಿದ ವಾತಾವರಣ ಇರಲಿದೆ. ಇನ್ನು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯ ಜೊತೆಗೆ ಚಳಿ ಕೂಡ ಹೆಚ್ಚಾಗಿದೆ. ವಾತಾವರಣದಲ್ಲಿ ಚಳಿ-ಮಳೆ-ಬಿಸಿಲಿನ ಏರಿಳಿತ ಮುಂದುವರಿದಿದೆ. ಸಂಜೆ ನಂತ್ರ ನಗರದ ಕೆಲವು ಕಡೆಗಳಲ್ಲಿ ಜಿಟಿ ಜಿಟಿ ಇಲ್ಲವೇ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತೀವ್ರ ಚಳಿ: ಡಿಸೆಂಬರಲ್ಲಿ ಸರ್ಕಾರದ ಕಾಶಿಯಾತ್ರೆ ರೈಲು ಸೇವೆ ಸ್ಥಗಿತ
ಬೆಂಗಳೂರು ಅಷ್ಟೇ ಅಲ್ಲ ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು. ಬೆಂಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ವಿಜಯಪುರ ಹಾಗೂ ಹಾವೇರಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ ಎಂದು ಇಲಾಖೆ ವರದಿ ತಿಳಿಸಿದೆ.
ಮೈಕೊರೆಯುವ ಚಳಿ ಮಧ್ಯೆ ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ..!
ಆತಂಕದಲ್ಲಿ ರೈತರು: ರಾಜ್ಯದ ಹಲವೆಡೆ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣವಿದೆ. ಈ ಬಾರಿ ಮೊದಲೇ ವಿಪರೀತ ಮಳೆ ಸುರಿದು ಗದ್ದೆಗಳು, ಕೃಷಿ ಬೆಳೆಗಳಿಗೆ ಹಾನಿಯಾಗಿದೆ ಪರಿಣಾಮ ಮುಂಗಾರು ಫಸಲು ಕೈಕೊಟ್ಟಿದೆ. ಹಿಂಗಾರು ಬೆಳೆ ಬೆಳೆಯೋಣ ಅನ್ನುವ ಹೊತ್ತಿಗೆ ರಾಜ್ಯದಲ್ಲಿ ಅಕಾಲಿಕ ಮಳೆ ಶುರುವಾಗಿದೆ. ಹೀಗಾಗಿ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ. ಬತ್ತದ ಗೆದ್ದೆಗಳಲ್ಲಿ ಫಸಲು ಕಟಾವಿಗೆ ಸಿದ್ದವಾಗುತ್ತಿದ್ದು, ಮಳೆಯಿಂದ ಮತ್ತೆ ಹಾನಿಯುಂಟಾಗುತ್ತಿದೆ. ಅತಿವೃಷ್ಠಿಯಿಂದ ಹಾನಿಗೊಳಗಾದ ಅಡಕೆ, ಬತ್ತ, ಕಾಫಿ, ಶೇಂಗಾ ಹೀಗೆ ನಾನಾ ಬೆಳೆಗಳು ಈಗ ಮತ್ತೆ ಅಕಾಲಿಕ ಮಳೆಗೆ ತುತ್ತಾಗಿ ಹಾನಿಗೆ ಒಳಗಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ