'ಕೊರೋನಾ 2ನೇ ಅಲೆಯಲ್ಲಿ ತಲ್ಲಣ : ಕಾಯದೇ ಲಸಿಕೆ ಪಡೆಯಿರಿ'

By Kannadaprabha NewsFirst Published Jan 19, 2021, 7:18 AM IST
Highlights

ದೇಶದಲ್ಲಿ ಕೊರೋನಾ  ಮಹಾಮಾರಿ ತನ್ನ ಅಟ್ಟಹಾಸ ಮೆರೆದು ಇದೀಗ ಕೊಂಚ ತಗ್ಗಿದೆ. ಇದೇ ವೇಳೆ ಎಲ್ಲೆಡೆ ವ್ಯಾಕ್ಸಿನ್ ನೀಡಲಾಗುತ್ತಿದ್ದು ಇದರಿಂದಲೇ ನಾವು ಗೆಲ್ಲಬೇಕು ಎಮದು ಡಾ. ದೇವಿಶೆಟ್ಟಿ ಹೇಳಿದ್ದಾರೆ

ಬೆಂಗಳೂರು (ಜ.19):  ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಿಂದಲೇ ಕೊರೋನಾ ಹೋಗಿಲ್ಲ. ಹೀಗಾಗಿ ಕೊರೋನಾ ಎರಡನೇ ಅಲೆ ಬರುವ ತನಕ ಕಾಯದೆ ಸಾಧ್ಯವಾದಷ್ಟುಬೇಗ ಲಸಿಕೆಯನ್ನು ಪಡೆಯಬೇಕು, ಮುಂದಿನ ಎರಡು ತಿಂಗಳ ಒಳಗಾಗಿ ದೇಶದ ಅರ್ಧದಷ್ಟುಜನರಿಗೆ ಕೊರೋನಾ ಲಸಿಕೆ ನೀಡಿದರೆ ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆದ್ದಂತೆ’ ಎಂದು ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿಹೇಳಿದ್ದಾರೆ.

ಸೋಮವಾರ ನಾರಾಯಣ ಹೆಲ್ತ್‌ ಸಿಟಿಯಲ್ಲಿ ಕೊರೋನಾ ಲಸಿಕೆ ಪಡೆದ ಅವರು, ‘ದೇಶದಲ್ಲಿ ಆದಷ್ಟುಬೇಗ ಹೆಚ್ಚು ಮಂದಿಗೆ ಕೊರೋನಾ ಲಸಿಕೆ ನೀಡಬೇಕು. ಲಸಿಕೆ ಪಡೆದವರು ವಿಜಯದ ಸಂಕೇತ (ವಿಕ್ಟರಿ ಸಿಂಬಲ್‌) ತೋರಿಸಿ ಎಲ್ಲರಿಗೂ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಗುಡ್‌ ನ್ಯೂಸ್: ಜ.18ರಂದು ರಾಜ್ಯದಲ್ಲಿ ಅತೀ ಕಡಿಮೆ ಕೊರೋನಾ ಕೇಸ್ ಪತ್ತೆ .

ದೇಶದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗಿದೆಯೇ ಹೊರತು ಕೊರೋನಾ ಹೋಗಿಲ್ಲ. ಈಗಾಗಲೇ ಯೂರೋಪ್‌, ಅಮೆರಿಕದಲ್ಲಿ ಎರಡನೇ ಅಲೆ ಕಂಡುಬಂದಿದ್ದು, ತೀವ್ರ ಕಾಟ ನೀಡುತ್ತಿದೆ. ದೇವರ ದಯೆಯಿಂದ ನಮಗೆ ಸ್ವಲ್ಪ ಕಾಲಾವಕಾಶ ದೊರೆತಿದೆ. ಹೀಗಾಗಿ ಈ ಕಾಲಾವಕಾಶದಲ್ಲಿ ನಿರ್ಲಕ್ಷ್ಯ ಮಾಡದೆ ಆದಷ್ಟುತ್ವರಿತವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಮೇಲೆ 28ನೇ ದಿನ ಎರಡನೇ ಡೋಸ್‌ ಪಡೆಯಬೇಕು. ಮೊದಲ ಡೋಸ್‌ ಪಡೆದ 45 ದಿನ ಕಳೆದ ಬಳಿಕವಷ್ಟೇ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಹೀಗಾಗಿ ಕೊರೋನಾ ಎರಡನೇ ಅಲೆ ಬಂದಾಗ ಲಸಿಕೆ ಪಡೆಯುತ್ತೇನೆ ಎಂಬ ಸಾಹಸ ಬೇಡ ಎಂದು ಎಚ್ಚರಿಸಿದರು.

ಇಡೀ ವಿಶ್ವದ ಯಾವುದೇ ದೇಶದಲ್ಲಿ ಇಲ್ಲದಷ್ಟುಸೌಲಭ್ಯ ನಮ್ಮ ದೇಶದಲ್ಲಿವೆ. ಒಂದು ದಶಲಕ್ಷ ವೈದ್ಯರು ಹಾಗೂ ಶುಶ್ರೂಷಕರು ದೇಶದಲ್ಲಿದ್ದಾರೆ. ಲಸಿಕೆ ಲಭ್ಯವಿದ್ದರೆ ಎರಡು ತಿಂಗಳಲ್ಲಿ 50 ಕೋಟಿ ಮಂದಿಗೆ ಲಸಿಕೆ ನೀಡುವ ಸಾಮರ್ಥ್ಯ ನಮ್ಮಲ್ಲಿದೆ. ಇದಕ್ಕೆ ಶುಶ್ರೂಷಕರು ನಾಲ್ಕು ಗಂಟೆ ಹೆಚ್ಚುವರಿ ಅವಧಿ ಕೆಲಸ ಮಾಡಿದರೆ ಸಾಕು ಎಂದರು.

ಇದೇ ವೇಳೆ ನಾರಾಯಣ ಹೆಲ್ತ್‌ ಸಿಟಿಯಲ್ಲಿನ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಲಸಿಕೆ ಪಡೆದರು.

click me!