
ಬಳ್ಳಾರಿ(ಜ.04): ಬಿಜೆಪಿಯ ಭಿನ್ನರ ಗುಂಪು ಆರಂಭಿಸಿರುವ ಪಕ್ಷ ವಿರೋಧಿ ಹೋರಾಟದ ಎರಡನೇ ಹಂತ ಶನಿವಾರ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಆರಂಭವಾಗಲಿದ್ದು, 'ವಕ್ಫ್ ಹಠಾವೋ ಜನ ಜಾಗೃತಿ ಸಮಾವೇಶ' ನಡೆಸಲು ವೇದಿಕೆ ಸಿದ್ದಗೊಂಡಿದೆ. ಹೋರಾಟ ನಡೆಸ ದಂತೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎನ್ನಲಾಗುತ್ತಿದೆಯಾದರೂ, ಇದನ್ನು ಧಿಕ್ಕರಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮತ್ತವರ ತಂಡ 2ನೇ ಹಂತದ ವಕ್ಫ್ ಹೋರಾಟಕ್ಕೆ ಮುಂದಾಗಿದೆ.
ಮೊದಲ ಹಂತದ ಹೋರಾಟ ಬೆಳಗಾವಿಯಲ್ಲಿ ಅಂತ್ಯಗೊಂಡಿತ್ತು. ಯತ್ನಾಳ್ ಅಲ್ಲದೆ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್, ಮಾಜಿ ಸಂಸದರಾದ ಬಿ.ವಿ.ನಾಯಕ್, ಪ್ರತಾಪ್ ಸಿಂಹ ಸೇರಿ ಅನೇಕ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ಹೇಳಲಾಗಿದೆ.
ಕಂಪ್ಲಿ ಪಟ್ಟಣದ ಶಾರದಾ ವಿದ್ಯಾಶಾಲೆ ಮೈದಾನದಲ್ಲಿ ಕಂಪ್ಲಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಸಮಾವೇಶ ಆಯೋಜನೆಗೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೊಸ ವರ್ಷದ ಮೊದಲ ದಿನವೇ ಹಠಾತ್ ದೆಹಲಿಗೆ ಭೇಟಿ ನೀಡಿ ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಭಿನ್ನರ ವಿರುದ್ದ ದೂರು ನೀಡಿದ್ದಾರೆನ್ನಲಾಗುತ್ತಿದ್ದು, ಹೀಗಿದ್ದರೂ ಭಿನ್ನರ ಗುಂಪು ಪೂರ್ವ ನಿಗದಿಯಂತೆ ಸಮಾವೇಶಕ್ಕೆ ಮುಂದಾಗಿರುವುದು ಗಮನಾರ್ಹ ಅಂಶವಾಗಿದೆ.
ಬಜೆಟ್ ಸೆಷನ್ನಲ್ಲೂ ವಕ್ಫ್ ಜೆಪಿಸಿ ವರದಿ ಸಲ್ಲಿಕೆ ಅನುಮಾನ
ನವದೆಹಲಿ: ವಕ್ಫ್ ಕಾಯ್ದೆ ತಿದ್ದು ಪಡಿಗೆ ರಚಿಸಿರುವ ಸಂಸತ್ತಿನ ಜಂಟಿ ಸದನ ಸಮಿತಿ, ಇನ್ನೂ ತನ್ನ ಕೆಲಸ ಪೂರ್ಣಗೊಳಿಸದ ಕಾರಣ ಮುಂಬರುವ ಬಜೆಟ್ ಅಧಿವೇಶ ನದಲ್ಲಿ ವಕ್ಫ್ ಕಾಯ್ದೆ ಮಂಡನೆ ಆಗುವುದು ಬಹುತೇಕ ಅನುಮಾನ ಎನ್ನಲಾಗಿದೆ.
ವಕ್ಫ್ ಆಸ್ತಿ ವಿವಾದ: ನಾಡಿದ್ದು ಯತ್ನಾಳ ಬಣ ದೆಹಲಿಗೆ ಭೇಟಿ
ಬೆಂಗಳೂರು: ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿ ಮಾಡುವ ಸಂಬಂಧ ರಾಜ್ಯ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದ ಬಣ ಸೋಮವಾರ ದೆಹಲಿಗೆ ತೆರಳಲಿದೆ.
ಕಳೆದ ತಿಂಗಳು ದೆಹಲಿಗೆ ತೆರಳಿ ಪಾಲ್ ನೇತೃತ್ವದ ಸಮಿತಿಗೆ ಮಾಹಿತಿ ನೀಡಿದ್ದ ಈ ಬಣದ ಮುಖಂಡರು ಇದೀಗ ಇನ್ನಷ್ಟು ಮಾಹಿತಿಯನ್ನು ದಾಖಲೆಗಳ ಸಮೇತ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯತ್ನಾಳ ಅವರೊಂದಿಗೆ ಮುಖಂಡರಾದ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಎನ್. ಆರ್.ಸಂತೋಷ್ ಮತ್ತಿತರರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ