
ಬೆಂಗಳೂರು (ಮೇ.22): ಎಚ್.ಡಿ.ಕುಮಾರಸ್ವಾಮಿ ಅವರು ನಗರ ಪ್ರದಕ್ಷಿಣೆ ಮಾಡುವ ಮೂಲಕವಾದರೂ ಅವರ ಆರೋಗ್ಯ ಸುಧಾರಿಸಲಿ. ಮನುಷ್ಯ ನಡೆದಷ್ಟೂಒಳ್ಳೆಯದು, ಇನ್ನಷ್ಟುಓಡಾಡಿ ಆರೋಗ್ಯ ಸುಧಾರಿಸಿಕೊಳ್ಳಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ವ್ಯಂಗ್ಯವಾಡಿದ್ದಾರೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಗರ ಪ್ರದಕ್ಷಿಣೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ಬರೂ ನಾಯಕರೂ ಬೆಂಗಳೂರು ಸುತ್ತಾಡಲಿ.
ತನ್ಮೂಲಕ ಬೆಂಗಳೂರಿನ ಜನರ ಭಾವನೆ ಏನೆಂದು ಅರ್ಥ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರ ಆರೋಗ್ಯ ಈ ರೀತಿಯಾದರೂ ಸುಧಾರಿಸಲಿ ಎಂದು ಹೇಳಿದ್ದಾರೆ. ಪ್ರತಿಪಕ್ಷದ ನಾಯಕರು ಬೆಂಗಳೂರು ಪ್ರದಕ್ಷಿಣೆ ಮಾಡುವುದನ್ನು ನಾವು ಬೇಡ ಎನ್ನಲಾಗುವುದಿಲ್ಲ. ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಲು ನಡಿಗೆ ಮುಖ್ಯ. ಈ ರೀತಿಯಾದರೂ ಅವರ ಆರೋಗ್ಯವನ್ನು ಸುಧಾರಿಸುವಂತೆ ಮಾಡಿಕೊಳ್ಳಲಿ, ನಾವು ಬೇಡ ಎನ್ನುವುದಿಲ್ಲ ಎಂದರು.
ಸಿಎಂ ಟ್ರ್ಯಾಕ್ಗೆ ಮರಳಿದ್ದಾರೆ, ಹೈಕ್ಲಾಸಾಗಿ ಬೌಲಿಂಗ್ ಬ್ಯಾಟಿಂಗ್ ಮಾಡ್ತಿದ್ದಾರೆ: ಸಚಿವ ಸೋಮಣ್ಣ
ಸಲಹೆ ಸ್ವೀಕರಿಸುತ್ತೇವೆ: ಪ್ರತಿಪಕ್ಷದ ನಾಯಕರು ಜನರ ಸಮಸ್ಯೆ ಪರಿಹರಿಸಲು ಸಲಹೆ ನೀಡಿದರೆ ಸ್ವೀಕರಿಸುತ್ತೇವೆ. ಬೆಂಗಳೂರಿನಲ್ಲಿನ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಿದ್ದೇವೆ ಎಂಬ ದುರಹಂಕಾರದ ಮಾತು ನಾನು ಹೇಳುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಸಲಹೆ ನೀಡಿದರೂ ಪಡೆಯುತ್ತೇವೆ, ಕುಮಾರಸ್ವಾಮಿ ಸಲಹೆ ನೀಡಿದರೂ ಪಡೆಯುತ್ತೇವೆ. ಜನರ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಬಗ್ಗೆ ಗೊತ್ತಿಲ್ಲ: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಹೀಗಾಗಿ ಅದಕ್ಕೂ ಮೊದಲೇ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿ ಸೋಮಣ್ಣಗೆ ಎಚ್ಡಿಕೆ ತಿರುಗೇಟು: ಮಾಜಿ ಸಿಎಂ ಕುಮಾರಸ್ವಾಮಿ ಸಿಟಿ ರೌಂಡ್ಸ್ ಗೆ ವ್ಯಂಗ್ಯ ವಾಡಿದ್ದ ವಿ ಸೋಮಣ್ಣ ಅವರಿಗೆ ಕುಮಾರಸ್ವಾಮಿ ಸರಿಯಾಗೇ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ನಡೆದಾಡುತ್ತಿರುವುದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದ ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನಮ್ಮ ಆರೋಗ್ಯದ ಬಗ್ಗೆ ನೋಡಿಕೊಳ್ಳೋಕೆ ವೈದ್ಯರುಗಳು ಇದ್ದಾರೆ. ಮೊದಲು ಸಚಿವರುಗಳಾಗಿ ನೀವು ನಿಮ್ಮ ಜವಾಬ್ದಾರಿ ಅರಿಯಿರಿ.
ಸೂರಿಲ್ಲದವರಿಗೆ ರಾಜ್ಯದಲ್ಲಿ 6 ಲಕ್ಷ ಮನೆಗಳ ನಿರ್ಮಾಣದ ಗುರಿ V Somanna
ನಿಮ್ಮ ಹಾಗೇ ನೀರು, ಕರೆಂಟು ಕಟ್ ಮಾಡಿಸಿ ಸಿಟಿ ರೌಂಡ್ಸ್ ನಾಟಕವಾಡಿ, ಜನರ ಮುಂದೆ ಅಧಿಕಾರಿಗಳನ್ನು ಬೈಯುವಂತೆ ಮಾಡಿ, ಮತ್ತೆ ನೀರು, ಕರೆಂಟ್ ಕನೆಕ್ಷನ್ ಕೊಡಿಸುವ ನಾಟಕ ಮಾಡಲು ನಮಗೆ ಬರೋದಿಲ್ಲ, ನೀವು ಸಚಿವರುಗಳಾಗಿ ಏನು ಮಾಡ್ತಿದ್ದೀರಾ ಅಂತಾ ಗೊತ್ತಿದೆ ಎಂದು ಕಿಡಿಕಾರಿದ್ದಾರೆ. ಇನ್ನು ಜೆಡಿಎಸ್ ಕುಡುಕ ರಾಜಕಾರಣದ ಬಗ್ಗೆ ಟೀಕೆ ಮಾಡಿರುವ ಸಚಿವ ಆರ್ ಅಶೋಕ್ಗೂ ತಿರುಗೇಟು ನೀಡಿರುವ ಕುಮಾರಸ್ವಾಮಿ ಮೋದಿ ಹೆಸರು ಹೇಳಿಕೊಂಡು ಮತ ಪಡೆದಿದ್ದು ಸಾಕು, ನಿಮ್ಮ ಪಕ್ಷದಲ್ಲಿ ಕೂಡ ಎಷ್ಟು ಕುಟುಂಬ ರಾಜಕಾರಣ ಇದೆ ಅಂತಾ ಈಗಾಗಲೇ ಸಾಕಷ್ಟು ಸಲ ಹೇಳಿದ್ದೇನೆ. ಪದೇ ಪದೇ ನನ್ನ ಕೆಣಕಬೇಡಿ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ