ಮಹದಾಯಿ ವಿಷಯದಲ್ಲಿ ಕೇಂದ್ರದಿಂದ ಮತ್ತೆ ಅನ್ಯಾಯ

By Suvarna NewsFirst Published Dec 19, 2019, 7:36 AM IST
Highlights

ಕರ್ನಾಟಕ ಭಾಗದ ರೈತರು ಮಹದಾಯಿ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅಡ್ಡಿಪಡಿಸಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. 

ನರಗುಂದ [ಡಿ.19]:  ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯಕ್ಕೆ ಮಹದಾಯಿ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅಡ್ಡಿಪಡಿಸಿದೆ ಎಂದು ರೈತ ಸೇನಾ ಮುಖಂಡ ವೀರಬಸಪ್ಪ ಹೂಗಾರ ಆರೋಪಿಸಿದರು.

ಅವರು ಬುಧವಾರ 1616ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಮಹದಾಯಿ ಹೋರಾಟ ವೇದಿಕೆಯಲ್ಲಿ ಮಾತನಾಡಿದರು.

ಬಂಡಾಯ ನೆಲದಲ್ಲಿ 4 ಜಿಲ್ಲೆ, 11 ತಾಲೂಕಿನ ರೈತ ಸಮುದಾಯ ಕಳೆದ 4 ವರ್ಷಗಳಿಂದ ನಿರಂತರ ಹೋರಾಟ ಮಾಡಿದ ನಂತರ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ ಈ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು 2018ರಲ್ಲಿ ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿತ್ತು. ಮೇಲಾಗಿ ಈ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಪರಿಸರ ಅರಣ್ಯ ಇಲಾಖೆಯೂ ಪರವಾನಗಿ ನೀಡಿದೆ. ಇನ್ನೇನು ಈ ಭಾಗದ ರೈತರ ಬಹುದಿನಗಳ ಕನಸ್ಸು ನನಸಾಗುತ್ತದೆ ಎಂದು ಕನಸು ಕಾಣುತ್ತಿದ್ದ ರೈತರಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. ಗೋವಾ ರಾಜ್ಯದ ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಕೇಂದ್ರ ಅರಣ್ಯ ಮತ್ತ ಪರಿಸರ ಇಲಾಖೆ ಮೇಲೆ ಒತ್ತಡ ಹಾಕಿ ಕರ್ನಾಟಕ ರಾಜ್ಯಕ್ಕೆ ನೀರು ಬಳಕೆ ಮಾಡಿಕೊಳ್ಳಲು ನೀಡಿರುವ ಅನುಮತಿಯನ್ನು ಹಿಂಪಡೆದು ರಾಜ್ಯದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮಹದಾಯಿಗಾಗಿ ಪ್ರಾಣ ಕಳೆದುಕೊಂಡ ಅನ್ನದಾತ: ಸರ್ಕಾರಕ್ಕೆ ಎಚ್ಚರಿಕೆ

ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಯೂರಪ್ಪ ಅವರು ಈ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆಗೆ ಮಾಡಿರುವ ಅಡ್ಡಿಯನ್ನು ಸರಿಪಡಿಸದಿದ್ದರೆ ಈ ಭಾಗದ ರೈತರ ಸಮನ್ವಯ ಸಭೆ ಕರೆದು ಮುಂದಿನ ಹೋರಾಟ ಬಗ್ಗೆ ತೀರ್ಮಾನ ತಗೆದುಕೊಳ್ಳಲಿದ್ದು, ಮುಂದಾಗುವ ಅನಾಹುತಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ನೇರ ಕಾರಣ ಎಂದು ಎಚ್ಚರಿಕೆ ನೀಡಿದರು.

ಎಸ್‌.ಬಿ. ಜೋಗಣ್ಣವರ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ಎಲ್‌.ಬಿ. ಮನನೇಕೊಪ್ಪ, ಯಲ್ಲಪ್ಪ ಚಲವಣ್ಣವರ, ಅರ್ಜುನ ಮಾನೆ, ಚನ್ನಬಸಪ್ಪ ಆಯಿಟ್ಟಿ, ಜಗನ್ನಾಥ ಮುಧೋಳೆ, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಗುಡದೇರಿ, ಮಲ್ಲೇಶಪ್ಪ ಅಣ್ಣಿಗೇರಿ, ನಾಗರತ್ನ ಸವಳಬಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಚನ್ನಬಸವ್ವ ಆಯಿಟ್ಟಿ, ರಾಮಚಂದ್ರ ಸಾಬಳೆ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ಈರಣ್ಣ ಗಡಗಿ, ವಾಸು ಚವಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

click me!