ಸರ್ಕಾರಿ ಗೌರವಗಳೊಂದಿಗೆ ಟಿಜೆಎಸ್‌ ಜಾರ್ಜ್‌ ಅಂತ್ಯಕ್ರಿಯೆ: ಸಿಎಂ ಸೇರಿ ಹಲವು ಗಣ್ಯರಿಂದ ಅಂತಿಮ ನಮನ

Published : Oct 06, 2025, 07:31 AM IST
TJS George

ಸಾರಾಂಶ

ಟಿಜೆಎಸ್‌ ಜಾರ್ಜ್‌ ಅವರ ಪುತ್ರ ಜೀತ್‌ ಥೈಲ್‌, ಪುತ್ರಿ ಶೇಬಾ ಥೈಲ್‌ ಸೇರಿ ಕುಟುಂಬ ಸದಸ್ಯರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತಾಗಾರದಲ್ಲಿ ಅಗ್ನಿಸ್ಪರ್ಶದ ಮೂಲಕ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಿದರು.

ಬೆಂಗಳೂರು (ಅ.06): ಶುಕ್ರವಾರ ನಿಧನರಾದ ಹಿರಿಯ ಪತ್ರಕರ್ತ, ಪದ್ಮಭೂಷಣ ಟಿಜೆಎಸ್‌ ಜಾರ್ಜ್ ಅವರ ಅಂತ್ಯಕ್ರಿಯೆ ಭಾನುವಾರ ನಗರದ ಹೆಬ್ಬಾಳದ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜಕೀಯ, ಪತ್ರಿಕೋದ್ಯಮ, ಸಾಹಿತ್ಯ, ವಿವಿಧ ಕ್ಷೇತ್ರಗಳ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಗಲಿದ ಅಕ್ಷರ ಮಾಂತ್ರಿಕನಿಗೆ ವಿದಾಯ ಹೇಳಿದರು. ನಂತರ ಟಿಜೆಎಸ್‌ ಜಾರ್ಜ್‌ ಅವರ ಪುತ್ರ ಜೀತ್‌ ಥೈಲ್‌, ಪುತ್ರಿ ಶೇಬಾ ಥೈಲ್‌ ಸೇರಿ ಕುಟುಂಬ ಸದಸ್ಯರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತಾಗಾರದಲ್ಲಿ ಅಗ್ನಿಸ್ಪರ್ಶದ ಮೂಲಕ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಿದರು.

ಸರ್ಕಾರಿ ಗೌರವ: ಇದಕ್ಕೂ ಮುನ್ನ ಪೊಲೀಸ್‌ ಬ್ಯಾಂಡ್‌ ಮೂಲಕ ರಾಷ್ಟ್ರಗೀತೆ ನುಡಿಸಿ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಅಧಿಕಾರಿಗಳು ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಜಾರ್ಜ್‌ ಅವರ ಕುಟುಂಬದವರಿಗೆ ಹಸ್ತಾಂತರಿಸಿದರು.

ಗಣ್ಯರಿಂದ ಅಂತಿಮ ದರ್ಶನ

ವಯೋಸಹಜ ಅನಾರೋಗ್ಯದಿಂದ ಟಿಜೆಎಸ್‌ ಜಾರ್ಜ್‌ ಅವರು ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶೈತ್ಯಾಗಾರದಿಂದ ಭಾನುವಾರ ಹೆಬ್ಬಾಳ ಚಿತಾಗಾರಕ್ಕೆ ತಂದು ಮಧ್ಯಾಹ್ನ 1.30ರಿಂದ 2.45ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದೇ ವೇಳೆ ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹಮದ್‌, ಕೆ.ಶಿವಕುಮಾರ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ, ಪುರವಣಿ ಮುಖ್ಯ ಸಂಪಾದಕ ಗಿರೀಶ್‌ ಹತ್ವಾರ್‌(ಜೋಗಿ), ಹಿರಿಯ ಪತ್ರಕರ್ತರಾದ ಎಚ್‌.ಆರ್‌.ರಂಗನಾಥ್‌, ವಿಶ್ವೇಶ್ವರ ಭಟ್‌, ಕೃಷ್ಣ ಪ್ರಸಾದ್‌, ಕೆ.ಆರ್‌.ಬಾಲಸುಬ್ರಹ್ಮಣ್ಯಂ ಸೇರಿ ಮಾಧ್ಯಮ ಕ್ಷೇತ್ರದ ಹಲವು ಪ್ರಮುಖರು, ಸ್ನೇಹಿತರು, ಓದುಗರು, ಬಂಧುಗಳು ನೂರಾರು ಸಂಖ್ಯೆಯಲ್ಲಿ ಅಗಲಿದ ಹಿರಿಯ ಪತ್ರಕರ್ತಗೆ ಅಂತಿಮ ನಮನ ಸಲ್ಲಿಸಿದರು.

ಭಾರತೀಯ ಪತ್ರಿಕೋದ್ಯಮದಲ್ಲಿ ಟಿಜೆಎಸ್‌ ಜಾರ್ಜ್ ಎಂದೇ ಪ್ರಖ್ಯಾತರಾದ ತಯ್ಯಿಲ್‌ ಜೇಕಬ್‌ ಸೋನಿ ಜಾರ್ಜ್‌ ಅವರು ಫ್ರೀ ಪ್ರೆಸ್‌ ಜರ್ನಲ್‌ನಿಂದ ಆರಂಭಗೊಂಡು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರೆಗೆ ಹಲವು ಮಾಧ್ಯಮಗಳಲ್ಲಿ ಏಳು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್