ಟಿಪ್ಪು ಜಯಂತಿ : ಜಮೀರ್ ಅಹಮದ್ ಕೊಟ್ಟ ಸೂಚನೆ ಇದು

By Web DeskFirst Published Nov 9, 2018, 10:26 AM IST
Highlights

ಟಿಪ್ಪು ಜಯಂತಿ ಸಂಬಂಧ ಜಮೀರ್ ಅಹಮದ್ ಸೂಚನೆಯೊಂದನ್ನು ನೀಡಿದ್ದಾರೆ. ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಟಿಪ್ಪು ಜಯಂತಿಗೆ ಕೇವಲ 2000 ಜನರಿಗೆ ಮಾತ್ರ ಅವಕಾಶ ನೀಡುವುದಾಗಿ ಜಮೀರ್ ಅಹಮದ್ ಹೇಳಿದ್ದಾರೆ. 

ಬೆಂಗಳೂರು :  ‘ನವೆಂಬರ್‌ 10ರಂದು ಟಿಪ್ಪು ಜಯಂತಿಯ ಮುಖ್ಯ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿಯೇ ಮಾಡಲಾಗುವುದು. ಕಾರ್ಯಕ್ರಮ ಪ್ರವೇಶಕ್ಕೆ 2 ಸಾವಿರ ಟಿಕೆಟ್‌ ಮುದ್ರಿಸಿದ್ದು, ಟಿಕೆಟ್‌ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು’ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಾತನಾಡಿದ ಅವರು, ‘ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರಿಗೆ ಉಂಟಾಗಿದ್ದ ಗೊಂದಲದಿಂದಾಗಿ ಸ್ಥಳ ವಿವಾದ ಉಂಟಾಗಿತ್ತು. ಇದೀಗ ಅವರಿಗೂ ಮನವೊಲಿಸಿದ್ದು ವಿಧಾನಸೌಧದಲ್ಲಿಯೇ ಆಚರಣೆ ನಡೆಸಲಾಗುವುದು. 

ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗದಂತೆ ಭಾಗವಹಿಸುವವರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಎರಡು ಸಾವಿರ ಟಿಕೆಟ್‌ ಮಾತ್ರ ಮುದ್ರಿಸುತ್ತಿದ್ದು, ಟಿಕೆಟ್‌ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ನಮ್ಮ ನಿರೀಕ್ಷೆ ಪ್ರಕಾರ 2 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹೆಚ್ಚುವರಿಯಾಗಿ ಆಗಮಿಸುವವರಿಗೆ ಯಾವ ರೀತಿ ವ್ಯವಸ್ಥೆ ಮಾಡಬೇಕು ಎಂಬುದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಯಾರಿಗೂ ಸಮಸ್ಯೆಯಾಗದಂತೆ ಯಾವುದೇ ಗೊಂದಲ ಉಂಟಾಗದಂತೆ ಕಾರ್ಯಕ್ರಮ ನಡೆಸಲಾಗುವುದು’ ಎಂದು ಹೇಳಿದರು.

ಬಿಜೆಪಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ:  ಬಿಜೆಪಿ ಅವರು ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರೇ ಹಿಂದೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದರು. ಈಗ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆ. 3 ವರ್ಷದಿಂದ ಬಿಜೆಪಿ ವಿರೋಧ ಮಾಡುತ್ತಲೇ ಇದೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ . ಇನ್ನು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಬೇಡ ಎಂದು ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.

click me!