
ಶಿವಮೊಗ್ಗ/ಹರಿಹರ(ಜು.10): ರಾಜ್ಯದಲ್ಲಿ ಡೆಂಘೀ ಪೀಡಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದ್ದು, ಈ ಮಹಾಮಾರಿಗೆ ಒಂಬತ್ತು ತಿಂಗಳ ಮಗು ಸೇರಿ ರಾಜ್ಯದಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ. ಆದರೆ ಆರೋಗ್ಯ ಇಲಾಖೆ ಮಾತ್ರ ಡೆಂಘೀಯಿಂದಲೇ ಈ ಸಾವು ಸಂಭವಿಸಿದೆ ಎಂಬುದನ್ನು ಈವರೆಗೆ ದೃಢಪಡಿಸಿಲ್ಲ.
ರಿಪ್ಪನ್ಪೇಟೆಯ ರಶ್ಮಿ ಆರ್.ನಾಯಕ್ (42), ಶಿರಾಳಕೊಪ್ಪದಲ್ಲಿ ಒಂಬತ್ತು ತಿಂಗಳ ಮಗು ಹಾಗೂ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಆಟೋ ಚಾಲಕ ಅರುಣ (22) ಮೃತಪಟ್ಟವರು. ಕಳೆದ ಹದಿನೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ರಶ್ಮಿ ಅವರು ಮಂಗಳವಾರ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ ತೀವ್ರ ನಿಗಾ ಘಟಕದಲ್ಲಿದ್ದ ಚಿಕಿತ್ಸೆ ನೀಡಲಾಗುತ್ತಿತ್ತು. ರಶ್ಮಿ ಅವರಿಗೆ ಡೆಂಘೀ ದೃಢಪಟ್ಟಿದ್ದರೂ ಬೇರೆ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.
ಡೆಂಗ್ಯೂ ಟೆಸ್ಟಿಂಗ್ ಬೆಲೆ ಹೆಚ್ಚಳ ಕಂಡುಬಂದರೆ ಲೈಸನ್ಸ್ ರದ್ದು: ಸಚಿವ ದಿನೇಶ್ ಗುಂಡೂರಾವ್
ಇನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಜ್ವರದಿಂದ ಬಳಲುತ್ತಿದ್ದ ಒಂಬತ್ತು ತಿಂಗಳ ಮಗುವೊಂದನ್ನು ಜು.2ರಂದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ.
ಹರಿಹರದ ಆಟೋ ಚಾಲಕ ಅರುಣ ಹತ್ತು ದಿನಗಳ ಹಿಂದೆ ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ