
ಬೆಳಗಾವಿ (ಫೆ.25) : ಕನ್ನಡ ಹೋರಾಟಗಾರರ ಮೇಲೆ ಇನ್ನೊಂದು ಸಲ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಪ್ರಯತ್ನವನ್ನು ಸರ್ಕಾರ ಮಾಡಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಠಿಣ ಎಚ್ಚರಿಕೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಕರವೇ ರಾಜ್ಯಮಟ್ಟದ ಕಾರ್ಯಕಾರಿಣಿಯ ಸಭೆ ಉದ್ಘಾಟಿಸಿ ಮಾತನಾಡಿದರು. ನಿಮ್ಮದು ನಾಡು, ನುಡಿ, ಭಾಷೆಗಾಗಿ ಏನು ತ್ಯಾಗ ಇದೆ? ನಿಮ್ಮ (ಸರ್ಕಾರ)ದು, ಅಧಿಕಾರ ಇದ್ದುಕೊಂಡು ಬೇಕಾದನ್ನು ಮಾಡಬಹುದು. ಅಧಿಕಾರ ಇಲ್ಲದೆ, ಯಾವ ಆಮಿಷ ಪಡದೆ 25 ವರ್ಷಗಳ ಕಾಲ ಮನೆ, ಕುಟುಂಬವನ್ನು ಬದಿಗೆ ಇಟ್ಟು, ಜೀವದ ಹಂಗು ತೊರೆದು ಕನ್ನಡಕ್ಕಾಗಿ ಹೋರಾಟ ಮಾಡಿದ್ದೇವೆ. ಅದು ನಮ್ಮ ಕೊಡುಗೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಯಡಿಯೂರಪ್ಪ ಅವರೇ ನಾಡು, ನುಡಿ, ಭಾಷೆಗಾಗಿ ನಿಮ್ಮದೇನಾದರೂ ನಮ್ಮ ಹೋರಾಟದ ತರಹ ಕೊಡುಗೆ ಇದೆಯಾ ಎಂದು ಪ್ರಶ್ನಿಸಿದರೆ, ಅದಕ್ಕೆ ಅವರ ಉತ್ತರ ಶೂನ್ಯ ಎಂದು ಹರಿಹಾಯ್ದರು.
ಬೆಂಗಳೂರಿನಂತೆ ಬೆಳಗಾವಿ ಕನ್ನಡಮಯವಾಗಬೇಕು: ನಾರಾಯಣಗೌಡ
ಬೆಳಗಾವಿ ಯಾರದೈತಿ ಎಂದು ಕೇಳುವವರಿಗೆ ಬೆಳಗಾವಿ ನಮ್ಮದೈತಿ ಎನ್ನುವ ತಾಕತ್ತು ಪ್ರದರ್ಶನ ಮಾಡುತ್ತಿದ್ದೇವೆ. ಕರವೇ ಕಾರ್ಯಕರ್ತರು ನಡೆಸುತ್ತಿರುವ ಕಾರ್ಯಕಾರಣಿ ಸಭೆ ಅಪ್ಪಟ ಕನ್ನಡಿಗರು ನಡೆಸುತ್ತಿರುವ ಸಚಿವ ಸಂಪುಟ ಎಂದರು.
ಸಿಎಂ ಸಿದ್ದರಾಮಯ್ಯ ನಮ್ಮೊಂದಿಗೆ ಚೆನ್ನಾಗಿಯೇ ಇದ್ದರು. ಆದರೆ ಕನ್ನಡ ನಾಮಫಲಕ ಅಳವಡಿಸುವ ಕುರಿತು ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರು ಬೃಹತ್ ಹೋರಾಟ ನಡೆಸಿದ ವೇಳೆ ಪೊಲೀಸರಿಗೆ ನಾರಾಯಣಗೌಡರಿಗೆ ಮೂರು ತಿಂಗಳು ಜೈಲಿನಿಂದ ಹೊರಗಡೆ ಬರದಂತೆ ನೋಡಿಕೊಳ್ಳಬೇಕೆಂದು ಎಂದು ಆದೇಶ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಜರಿದರು.
ಬೆಂಗಳೂರಿನ ಪೊಲೀಸ್ ಆಯುಕ್ತ ದಯಾನಂದ ಸಿಎಂ ಸಿದ್ದರಾಮಯ್ಯನವರಿಗೆ ಇಲ್ಲ, ಸಲ್ಲದ ವಿಷಯ ಹೇಳಿ ಅವರ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ ಅವರ ಕಡೆಯಿಂದ ಆದೇಶ ಮಾಡಿಸಿ ತರಾತುರಿಯಲ್ಲಿ ಡಿಸಿಪಿ ಲಕ್ಷ್ಮೀ ಪ್ರಸಾದ ಅವರನ್ನು ಕರೆದು ಪ್ರಕರಣ ದಾಖಲಿಸಿ ರಾತ್ರೋರಾತ್ರಿ ಬಂಧಿಸಿದ್ದರು. ನಮ್ಮ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹಾಕಿದರು. ಮೂರು ತಿಂಗಳು ಜೈಲಿನಲ್ಲಿಡಬೇಕು ಎಂದು ಷಡ್ಯಂತ್ರ ಮಾಡಿದ ಪೊಲೀಸರಿಗೆ ಪಾಠ ಕಲಿಸಿ 14 ದಿನದಲ್ಲಿಯೇ ನಮಗೆ ಹೊರಗಡೆ ಕರೆದುಕೊಂಡು ಬಂದವರು ನಮ್ಮ ವಕೀಲರು ಎಂದು ಹೇಳಿದರು.
ಈಗ ನಾಡಿನ ಹಲವು ಸಮಸ್ಯೆಗಳು ನಮ್ಮ ಮುಂದಿವೆ. ನಮ್ಮವರೇ ನಮ್ಮ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಹೆದರಿ ಅಂಜಿ ಕುಳಿತುಕೊಂಡಿಲ್ಲ. ಕನ್ನಡ ಹೋರಾಟಕ್ಕೆ ನಾವು ಸದಾ ಸಿದ್ಧರಿದ್ದೇವೆ. ಕಳೆದ ಡಿ.27ರ ಹೋರಾಟವನ್ನು ಎಲ್ಲ ಕನ್ನಡಿಗರು ಮೆಚ್ಚಿಕೊಂಡರು. ಪೊಲೀಸ್ ಆಯುಕ್ತ ದಯಾನಂದ ಇನ್ನು ಇವರನ್ನು ಮುಟ್ಟಲು ಆಗುವುದಿಲ್ಲ ಎಂದು ಬೇರೆ ಇದ್ದರೇ ನೋಡಿ ಎಂದರಂತೆ. ದಯಾನಂದ ಎಲ್ಲಿ ಹೋಗುತ್ತಾರೆ. ಒಂದಲ್ಲ. ಒಂದು ದಿನ ಬರಲೇಬೇಕು ಎಂದು ಹೇಳಿದರು.
ನಾಮಫಲಕಗಳಲ್ಲಿ 60% ಕನ್ನಡ: ನಾರಾಯಣಗೌಡ ಸಂತಸ
ನಾರಯಣಗೌಡರನ್ನು ಜೈಲಲ್ಲಿಟ್ಟು ಬಿಟ್ಟರೆ ಅಲ್ಲಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಥೆ ಮುಗಿಯುತ್ತದೆ ಎಂದುಕೊಂಡಿದ್ದರು. ಅದರ ಬೇರು ಭೂಗರ್ಭದಲ್ಲಿ ಗಟ್ಟಿಯಾಗಿದೆ. ಕರವೇ ಬೇರು ಅಷ್ಟು ಆಳವಾಗಿದೆ ಎಂದು ಗುಡುಗಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ