
ಬೆಳಗಾವಿ[ಡಿ.14]: ಅತಿಥಿ ಉಪನ್ಯಾಸಕರಿಗೆ ನೀಡುವ ಮಾಸಿಕ ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಸಂಬಂಧ ಅನುದಾನದ ಲಭ್ಯತೆ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು.
ಪ್ರಶ್ನೋತ್ತರ ವೇಳೆ ಬಿಜೆಪಿಯ ಹನುಮಂತ ನಿರಾಣಿ ಹಾಗೂ ಜೆಡಿಎಸ್ನ ಎಸ್.ಎಲ್. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 12,674 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ನಿಯಮಗಳ ಪ್ರಕಾರ ಸೇವಾ ಭದ್ರತೆ ಒದಗಿಸಲು ಅವಕಾಶವಿಲ್ಲ. ಆದಾಗ್ಯೂ ನೇಮಕಾತಿ ವೇಳೆ ಅತಿಥಿ ಉಪನ್ಯಾಸಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಿಗೆ 25 ಸಾವಿರ ರು. ಗೌರವ ವೇತನ ನೀಡಲಾಗುತ್ತಿದೆ. ಇದೇ ರೀತಿ ಎಲ್ಲ ಕಡೆ ಹೆಚ್ಚಿಸುವ ಬಗ್ಗೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಜಂಟಿ ನಿರ್ದೇಶಕರು ಇಲ್ಲದ ಕಾರಣ ಅತಿಥಿ ಉಪನ್ಯಾಸಕರಿಗೆ ಸರಿಯಾದ ಸಮಯಕ್ಕೆ ಗೌರವ ಧನ ಪಾವತಿಸಲಾಗಲಿಲ್ಲ. ರಾಜ್ಯದ 412 ಸರ್ಕಾರಿ ಕಾಲೇಜುಗಳ ಪೈಕಿ 30 ಕಾಲೇಜುಗಳ ಉಪನ್ಯಾಸಕರಿಗೆ ಮಾತ್ರ ಗೌರವ ಧನವನ್ನು ಬೇರೆ ಬೇರೆ ಕಾರಣಗಳಿಂದ ನೀಡಲಾಗಿಲ್ಲ. 80 ಕೋಟಿ ರು. ಪೈಕಿ 60 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, 20 ಕೋಟಿ ರು.ಗಳನ್ನು ಜನವರಿ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕೆಲವು ಅಧಿಕಾರಿಗಳಿಗೆ ಬೇರೆ ಜಿಲ್ಲೆಯ ಜವಾಬ್ದಾರಿ ನೀಡುವುದರಿಂದ ಗೌರವಧನ ಪಾವತಿ ವಿಳಂಬ ಆಗುವುದನ್ನು ತಪ್ಪಿಸಲು ಜನವರಿ ಒಂದರೊಳಗೆ ಆಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಬಿಜೆಪಿಯ ಮಹಾಂತೇಶ್ ಕವಟಗಿಮಠ, ಆಯನೂರು ಮಂಜುನಾಥ್, ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ, ಕಾಂಗ್ರೆಸ್ನ ಶರಣಪ್ಪ ಮಟ್ಟೂರು ಮುಂತಾದವರು ಅತಿಥಿ ಶಿಕ್ಷಕರ ಸಮಸ್ಯೆ ಬಗೆ ಹರಿಸಬೇಕು, ಸೇವಾ ಭದ್ರತೆ ಇಲ್ಲದೆ ಅವರ ಜೀವನ ಕಷ್ಟಕರವಾಗಿದೆ ಎಂದು ಸಚಿವರ ಗಮನ ಸೆಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ