
ಬೆಂಗಳೂರು (ಡಿ.24) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ. ಈ ಪ್ರಕರಣವನ್ನು ನೈತಿಕತೆ ಸಮಿತಿಗೆ ನೀಡುವ ಅಗತ್ಯ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದ್ದಾರೆ.
ಅಲ್ಲದೆ, ಸದನದೊಳಗೆ ನಡೆದ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಹೀಗಿದ್ದರೂ ಮಹಜರು ಮಾಡುವುದಾಗಿ ಪೊಲೀಸರು ಕೇಳಿದ್ದರು. ಆದರೆ, ನಾನು ಅನುಮತಿ ನೀಡಿಲ್ಲ. ಒಂದು ವೇಳೆ ಸದನದೊಳಗಿನ ಪ್ರಕ್ರಿಯೆಗೆ ಪೊಲೀಸರು ಹಸ್ತಕ್ಷೇಪ ಮಾಡಲು ಮುಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.
ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸದನದೊಳಗೆ ನಡೆದ ಘಟನೆ ಬಗ್ಗೆ ಹಸ್ತಕ್ಷೇಪ ಮಾಡಲು ಪೊಲೀಸರಿಗೆ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಈ ಘಟನೆ ಬಗ್ಗೆ ಸದನದಲ್ಲಿ ನಾನು ರೂಲಿಂಗ್ ನೀಡಿ, ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದೇನೆ. ಹೀಗಾಗಿ ಇದು ಮುಗಿದ ಅಧ್ಯಾಯ ಎಂದರು.
ವಿಧಾನಸಭೆಯಲ್ಲಿ ನಡೆದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಹಕ್ಕುಚ್ಯುತಿ ಬಗ್ಗೆ ದೂರು ಬಂದರೆ ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಮಹಿಳಾ ಆಯೋಗದಿಂದ ಮಾಹಿತಿ ಕೇಳಿದರೆ ಉತ್ತರ ನೀಡಲಾಗುವುದು. ಆದರೆ, ಅವರು ನನ್ನ ಪ್ರಶ್ನೆ ಮಾಡಲು ಬರುವುದಿಲ್ಲ ಎಂದರು.
ಸಿಟಿ ರವಿ 'ಪ್ರಾಸ್ಟಿಟ್ಯೂಟ್' ಅಂದಿದ್ದು ಸತ್ಯ, ಅದಕ್ಕೆ ನಾನೇ ಸಾಕ್ಷಿ: ಡಾ ಯತೀಂದ್ರ ಸಿದ್ದರಾಮಯ್ಯ
ಸಿ.ಟಿ.ರವಿ ಬಂಧನ-ಮಾಹಿತಿ ನೀಡಿದ್ದರು:
ಸಿ.ಟಿ.ರ ವಿ ಅವರನ್ನು ಬಂಧಿಸುವ ಕುರಿತು ಪೊಲೀಸರು ರಾತ್ರಿ 9 ಗಂಟೆಗೆ ಮಾಹಿತಿ ಕೊಟ್ಟಿದ್ದಾರೆ. ಬಂಧನ ಮಾಡುವಾಗ ನನಗೆ ಮಾಹಿತಿ ಬಂದಿದೆ. ವಿಧಾನಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಮುಂದಾದವರನ್ನು ಬಂಧಿಸಲು ಸೂಚಿಸಲಾಗಿದೆ. ಮೊಗಸಾಲೆಯಲ್ಲಿ ದಾಳಿ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ನಿರ್ದೇಶಿಸಲಾಗಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಸಿ.ಟಿ.ರವಿಯನ್ನು ನಕಲಿ ಎನ್ಕೌಂಟರ್ ಮಾಡುವ ದುರುದ್ದೇಶದಿಂದ ಇಡೀ ರಾತ್ರಿ ಸುತ್ತಿಸಿದರು ಎಂಬ ಆರೋಪದ ವಿಚಾರವಾಗಿ ನನಗೆ ಗೊತ್ತಿಲ್ಲ, ನನ್ನ ಮುಂದೆ ಯಾರೂ ಹೇಳಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇನ್ನು, ಘಟನೆ ನಡೆದ ರಾತ್ರಿ 1 ಗಂಟೆಯವರೆಗೂ ಸಿ.ಟಿ. ರವಿ ಜೊತೆಗೆ ಮಾತುಕತೆ ಮಾಡಿದ್ದೇನೆ. ಮೂರು ಬಾರಿ ಫೋನ್ನಲ್ಲಿ ಸಂಪರ್ಕ ಮಾಡಿದ್ದೇನೆ. ಅಲ್ಲದೇ, ಆಯುಕ್ತರು ಮತ್ತು ಎಸ್ಪಿ ಜೊತೆಗೆ ಮಾತುಕತೆ ಮಾಡಿದ್ದೇನೆ. ಸಿ.ಟಿ.ರವಿ ಅವರಿಗೆ ಏನೇ ಆದರೂ ನೀವೇ ಕಾರಣ ಎಂದು ತಿಳಿಸಿದ್ದೆ. ಯಾವ ಪಕ್ಷದವರೇ ಆದರೂ ಸರಿ, ಅವರ ಜವಾಬ್ದಾರಿ ನನ್ನದು. ಹೀಗಾಗಿ, ಪೊಲೀಸರಿಗೆ ಸೂಚನೆ ನೀಡಿದ್ದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ