ಈಶ್ವರಪ್ಪನಿಗೆ ಬುದ್ಧಿ ಕಮ್ಮಿ: ಏಕವಚನದಲ್ಲೇ ಸಿದ್ದು ಟೀಕೆ

By Web DeskFirst Published Dec 28, 2018, 11:04 AM IST
Highlights

ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ಹರಿಹಾಯ್ದಿದ್ದಾರೆ.

ಬಾಗಲಕೋಟೆ[ಡಿ.28]: ‘ನಾನೇಕೆ ಅತೃಪ್ತಿಗೊಳ್ಳಲಿ. ನಾನೇಕೆ ಅತೃಪ್ತರ ನಾಯಕನಾಗಲಿ. ಈಶ್ವರಪ್ಪನಿಗೆ ಬುದ್ಧಿ ಕಮ್ಮಿ. ಹೀಗಾಗಿ ಏನೇನೋ ಮಾತನಾಡುತ್ತಾನೆ’ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ಹರಿಹಾಯ್ದರು. ಬಾದಾಮಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನಿಗೆ ಪೂರ್ತಿ ಅತೃಪ್ತಿ ಇರಬಹುದು. ಅತೃಪ್ತಿ ಅಧಿಕಾರದಲ್ಲಿ ಇರದವರಿಗೆ ಇರುತ್ತೆ. ಹೀಗಾಗಿ ಈಶ್ವರಪ್ಪನಿಗೆ ಇರಬಹುದು ಎಂದು ಲೇವಡಿ ಮಾಡಿದ ಅವರು, ಮೆದುಳು ಇಲ್ಲದ ಈಶ್ವರಪ್ಪನಿಗೆ ಸಹಜವಾಗಿ ಬುದ್ಧಿ ಕಮ್ಮಿ ಇದೆ ಎಂದರು.

ನನಗೆ ಅಧಿಕಾರ ಬಂದಾಗಿದೆ. ರಾಜ್ಯದಲ್ಲಿ ಸಿಎಂ ಹುದ್ದೆಗಿಂತ ದೊಡ್ಡದು ಯಾವುದಾದರೂ ಇದೆಯಾ? ನನಗೆ ಸಿಎಂ ಹುದ್ದೆ ಸಿಕ್ಕಾಗಿದೆ. ನನ್ನ ಜೀವನದಲ್ಲಿ ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ಐದು ವರ್ಷ ಮುಖ್ಯಮಂತ್ರಿಯಾಗಿದ್ದೇನೆ. ಅಂತಹದರಲ್ಲಿ ಯಾವ ಅತೃಪ್ತಿ ಬರಬೇಕು. ರಾಜ್ಯದಲ್ಲಿಯೂ ಈಗ ನಮ್ಮದೆ ಸರ್ಕಾರವಿದೆ ಎಂದರು. ಈ ಮೂಲಕ ತಾವು ಅಧಿಕಾರದಲ್ಲಿ ಇದ್ದಂತೆ ಎಂದು ಪರೋಕ್ಷವಾಗಿ ಟಾಂಗ್‌ ಕೊಟ್ಟರು.

ಖಾತೆ ಹಂಚಿಕೆಯಲ್ಲಿನ ಜಟಾಪಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ಹಂಚಿಕೆಯನ್ನು ಹೈ-ಕಮಾಂಡನವರು ತೀರ್ಮಾನಿಸುತ್ತಾರೆ ಎಂದಷ್ಟೇ ಹೇಳಿದರು.

click me!