ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವಿನ ಟೈಟ್ ಫೈಟ್ ವಿವರ ಬಹಿರಂಗವಾಗಿದೆ. ಇಬ್ಬರ ನಡುವಿನ ಜಗಳ ಬಿಡಿಸದಿದ್ದರೆ ಆನಂದ್ ಸಿಂಗ್ ಪ್ರಾಣಕ್ಕೆ ಕುತ್ತು ಬರುವ ಬರುವ ಪರಿಸ್ಥಿತಿ ಇತ್ತು ಎನ್ನುವ ಮಾಹಿತಿ ಹೊರ ಬಿದ್ದಿದೆ.
ದಾವಣಗೆರೆ : ‘ಬಳ್ಳಾರಿ ಶಾಸಕರ ನಡುವಿನ ಜಗಳ, ಹೊಡೆದಾಟವನ್ನು ನಾವು ಬಿಡಿಸದೇ ಇದ್ದಿದ್ದರೆ, ಆನಂದ ಸಿಂಗ್ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಜಗಳ ಬಿಡಿಸಲು ಹೋದಾಗ ನೀವ್ಯಾಕೆ ಬರುತ್ತೀರಿ, ಸುಮ್ಮನೆ ಹೋಗಿ ಅಂತಾ ಶಾಸಕ ಗಣೇಶ್ ನಮಗೇ ಆವಾಜ್ ಹಾಕಿದ್ದ, ನಮ್ಮ ಮೇಲೂ ಹಲ್ಲೆಗೆ ಮುಂದಾಗಿದ್ದ, ಅಕ್ಷರಶಃ ರೌಡಿಯ ರೀತಿ ಹೊಡೆಯುತ್ತಿದ್ದ’ ಎಂದು ಬಿಡದಿಯ ರೆಸಾರ್ಟ್ ಗಲಾಟೆಯನ್ನು ಪ್ರತ್ಯಕ್ಷವಾಗಿ ಕಂಡ ಹರಿಹರದ ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಈಗಲ್ಟನ್ ರೆಸಾಟ್ರ್ನಲ್ಲಿ ಇತ್ತೀಚೆಗೆ ನಡೆದಿದ್ದ ಬಳ್ಳಾರಿ ಕಾಂಗ್ರೆಸ್ ಶಾಸಕರ ಮಾರಾಮಾರಿ ಪ್ರಕರಣದಲ್ಲಿ ಗಣೇಶ್ರಿಂದ ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಅವರ ರಕ್ಷಣೆಗೆ ಧಾವಿಸಿದ ಮೂವರು ಶಾಸಕರ ಪೈಕಿ ಎಸ್.ರಾಮಪ್ಪ ಕೂಡ ಒಬ್ಬರು. ಆ ರಾತ್ರಿಯ ಹೊಡೆದಾಟದ ಘಟನೆಯನ್ನು ನೆನಪು ಮಾಡಿಕೊಂಡ ಅವರು ಗಣೇಶ್ ಆರ್ಭಟವನ್ನು ಬಿಚ್ಚಿಟ್ಟಿದ್ದಾರೆ. ಗಣೇಶ್ ರೌಡಿಯ ರೀತಿ ಹೊಡೆದಿದ್ದರಿಂದ ಆನಂದ್ ಸಿಂಗ್ ಕಣ್ಣುಗಳೆಲ್ಲ ಊದಿಕೊಂಡಿದ್ದವು. ಸುದ್ದಿ ತಿಳಿದು ಸಚಿವ ಡಿ.ಕೆ.ಶಿವಕುಮಾರ್ ಕೂಡ ಅಲ್ಲಿಗೆ ಬಂದರು ಎಂದು ರಾಮಪ್ಪ ತಿಳಿಸಿದರು.
ಜೋರು ಗಲಾಟೆ ಕೇಳಿ ಎದ್ದುಬಂದೆವು:
ಕಾಂಗ್ರೆಸ್ ಶಾಸಕರೆಲ್ಲ ಆ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದೆವು. ಆನಂದ್ಸಿಂಗ್, ಗಣೇಶ್ ಒಂದೇ ರೂಂನಲ್ಲಿ ರಾತ್ರಿ ಊಟ ಮಾಡುತ್ತಾ, ಕಾಲ ಕಳೆಯುತ್ತಿದ್ದರು. ನಾವೆಲ್ಲರೂ ರಾತ್ರಿ 10.30ಕ್ಕೆ ಊಟ ಮುಗಿಸಿ ಮಲಗಿದೆವು. ಆದರೆ, ಆನಂದ್ ಸಿಂಗ್, ಗಣೇಶ ಇದ್ದ ಕೋಣೆಯಲ್ಲಿ ರಾತ್ರಿ 2 ಗಂಟೆಯಿಂದ ಯಾವುದೋ ಕಾರಣಕ್ಕೆ ಜೋರು ದನಿಯ ವಾಗ್ವಾದ ನಡೆಯುತ್ತಿರುವುದು ಕೇಳಿಸುತ್ತಿತ್ತು. ಬೆಳಗಿನ ಜಾವ 4.40ರಿಂದ 5 ಗಂಟೆ ಆಗಿರಬಹುದು. ಮಾತಿನ ಚಕಮತಿ ತೀವ್ರ ಸ್ವರೂಪ ಪಡೆದು, ಜೋರು ಗಲಾಟೆಯೊಂದಿಗೆ ಕಿರುಚಾಟ, ಸದ್ದು ಕೇಳಿ ಬಂತು.
ನಾನು, ಚಳ್ಳಕೆರೆ ಶಾಸಕ ರಘುಮೂರ್ತಿ, ಭೀಮಾನಾಯ್ಕ ಮೂವರೂ ಆನಂದ್ ಸಿಂಗ್, ಗಣೇಶ ಇದ್ದ ಕೊಠಡಿಯತ್ತ ದೌಡಾಯಿಸಿದೆವು. ಗಣೇಶ್ ಅಕ್ಷರಶಃ ರೌಡಿಯ ರೀತಿಯಲ್ಲಿ ಹೊಡೆಯುತ್ತಿದ್ದ. ಗಣೇಶ್ ಕೈಯಲ್ಲಿ ಯಾವುದೇ ಆಯುಧ ಇಲ್ಲದಿದ್ದರೂ ಆತನ ಏಟಿಗೆ ಆನಂದ್ ಸಿಂಗ್ ನುಜ್ಜುಗುಜ್ಜಾಗಿದ್ದರು. ನಾವು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದೆವು. ಆದರೆ, ಕ್ರೀಡಾಳು (ಹಿಂದೆ ಕಬಡ್ಡಿ ಪಟುವಾಗಿದ್ದವರು, ಪ್ರತಿ ದಿನ ದೇಹವನ್ನು ಸಾಮು ಮಾಡುತ್ತಿದ್ದರು ಗಣೇಶ್) ಆಗಿರುವ ಗಣೇಶ್ ಬಿಡಿಸಲು ಹೋದವರ ಮೇಲೂ ರೌಡಿ ರೀತಿಯಲ್ಲೇ ಹಲ್ಲೆಗೆ ಪ್ರಯತ್ನಿಸಿದ. ನೀವ್ಯಾಕೆ ಬರುತ್ತೀರಿ, ನಿಮಗೇನು ಸಂಬಂಧ ಎಂದೆಲ್ಲ ನಮ್ಮ ಮೇಲೆಯೇ ಎರಗಿ ಎತ್ತರಿಸಿದ ಧ್ವನಿಯಲ್ಲಿ ಬೈದ. ನಾವೂ ಜೋರಾಗಿಯೇ ಗಣೇಶನಿಗೆ ಬೈದು ಬುದ್ಧಿ ಹೇಳಿದೆವು. ಅಷ್ಟರಲ್ಲಿ ಸಚಿವ ಡಿ.ಕೆ.ಶಿವಕುಮಾರ ಅಲ್ಲಿಗೆ ಧಾವಿಸಿದರು. ಪರಿಸ್ಥಿತಿ ತಿಳಿಗೊಳಿಸಿದರು.
ಆಕಸ್ಮಾತ್ ನಾನು, ರಘುಮೂರ್ತಿ, ಭೀಮಾನಾಯ್ಕ ಅಲ್ಲಿರದೇ ಇದ್ದಿದ್ದರೆ ಆನಂದ್ ಸಿಂಗ್ ಪರಿಸ್ಥಿತಿ ಏನಾಗುತ್ತಿತ್ತೋ ಹೇಳುವುದೇ ಕಷ್ಟವಾಗುತ್ತಿತ್ತು. ನಮ್ಮ ಕಣ್ಣಿಗೆ ಘಟನೆಯೆಲ್ಲಾ ಬಿದ್ದಿದ್ದರಿಂದ ನಾವೇ ಬೈದ ಮೇಲೆ ಗಣೇಶ ಸುಮ್ಮನಾಗಿದ್ದು ನಿಜ. ಆತ ಬಿಡಿಸಲು ಹೋದವರ ಮೇಲೂ ತಿರುಗಿ ಬಿದ್ದಿದ್ದೂ ನಿಜ. ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡುವ ಮೂಲಕ ಗಣೇಶ್ ದೊಡ್ಡ ತಪ್ಪು ಮಾಡಿದ ಎಂದು ರಾಮಪ್ಪ ಆ ಕರಾಳ ರಾತ್ರಿಯ ಘಟನೆಯನ್ನು ನೆನಪು ಮಾಡಿಕೊಂಡರು.
ಈಗಾಗಲೇ ಪೊಲೀಸ್ ಇಲಾಖೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರೂ ಸಹ ಶಾಸಕ ಗಣೇಶ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನೂ ಸಾಕ್ಷಿಯನ್ನಾಗಿಸಲಾಗಿದೆ. ಅಂದಿನ ಘಟನೆ ಕುರಿತು ನನಗಿರುವ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ, ನ್ಯಾಯಾಲಯದ ಸಮ್ಮುಖದಲ್ಲಿ ಚಾಚೂ ತಪ್ಪದೇ ಹೇಳುತ್ತೇನೆ ಎಂದು ಶಾಸಕ ಎಸ್.ರಾಮಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಯಾವ ವಿಚಾರಕ್ಕೆ ಗಲಾಟೆಯಾಯಿತೆಂಬ ಬಗ್ಗೆ ನಮಗ್ಯಾರಿಗೂ ಮಾಹಿತಿ ಇಲ್ಲ. ಅದು ಯಾಕೆಂಬ ವಿಚಾರವೂ ಆನಂದ್ ಸಿಂಗ್, ಗಣೇಶ್, ಭೀಮಾನಾಯ್ಕಗೆ ಮಾತ್ರ ಗೊತ್ತು. ಆನಂದ್ ಸಿಂಗ್ ಕಣ್ಣು ಬಾತುಕೊಳ್ಳುವಂತೆ ಗಣೇಶ್ ಹೊಡೆದಿದ್ದಾನೆ ಅನ್ನುವುದಷ್ಟೇ ಗೊತ್ತು. ಬಿಡಿಸಿಕೊಳ್ಳಲು ಹೋದವರಿಗೂ ಗಣೇಶ ಹೊಡೆದಿದ್ದ. ಕಣ್ಣಿಂದ ಏನು ನೋಡಿದ್ದೆವೋ ಅದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ಈಗ ಸಾರ್ವಜನಿಕವಾಗಿಯೇ ನಿಮ್ಮ ಮುಂದೆ ಹೇಳುತ್ತಿದ್ದೇನೆ. ಆನಂದ ಸಿಂಗ್ಗೆ ಅನ್ಯಾಯವಾಗಿದೆ. ಶಾಸಕರು ರೌಡಿಗಳು ಹೊಡೆದಾಡಿದಂತೆ ಹೊಡೆದಾಡುತ್ತಾರೆಂದರೆ ಏನರ್ಥ. ನಾವು ಬಿಡಿಸದೇ ಇದ್ದಿದ್ದರೆ ಆನಂದ್ ಸಿಂಗ್ ಸ್ಥಿತಿ ಏನಾಗುತ್ತಿತ್ತೋ ?
- ಎಸ್.ರಾಮಪ್ಪ, ಹರಿಹರ ಶಾಸಕ