Belagavi: ಸುವರ್ಣಸೌಧದಲ್ಲಿ ಚೆನ್ನಮ್ಮ, ರಾಯಣ್ಣ ಪ್ರತಿಮೆ ಸ್ಥಾಪನೆ, ಸಿಎಂ ಘೋಷಣೆ

By Suvarna NewsFirst Published Dec 20, 2021, 7:51 PM IST
Highlights

* ಬೆಳಗಾವಿಯಲ್ಲಿ ಎಂಇಎಸ್ ಪುಂಡಾಕ್ಕೆ ಬ್ರೇಕ್ ಹಾಕಲು ಮುಂದಾದ ಸರ್ಕಾರ
* ಸುವರ್ಣಸೌಧ ಆವರಣದಲ್ಲಿ ರಾಯಣ್ಣ, ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
 

ಬೆಳಗಾವಿ, (ಡಿ.20): ಬೆಳಗಾವಿಯಲ್ಲಿ(Belagavi) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ(Sangolli Rayanna statue) ವಿರೂಪಗೊಳಿಸಿದ್ದು, ಎಂಇಎಸ್ ಪುಂಡರ ವಿರುದ್ಧ ಕನ್ನಡಿಗರ ಆಕ್ರೋಶದ ಕಿಚ್ಚು ಹೆಚ್ಚಾಗಿದೆ. ಅಲ್ಲದೇ ರಾಜ್ಯದಲ್ಲಿ ಎಂಇಎಸ್(MES) ಬ್ಯಾನ್ ಮಾಡಬೇಕೆನ್ನುವ ಆಗ್ರಹಗಳು ಕೇಳಿಬಂದಿವೆ.

ಇದರ ಮಧ್ಯೆ ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ(Kittur Chennamma) ಮತ್ತು ಸಂಗೊಳ್ಳಿ ರಾಯಣ್ಣನ(Sangolli Rayanna) ಪ್ರತಿಮೆ(statue) ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

Sangolli Rayanna Statue ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಮರುಸ್ಥಾಪನೆ, ಕನ್ನಡಿಗರ ಹೋರಾಟಕ್ಕೆ ಜಯ

ಇಂದು (ಸೋಮವಾರ) ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು  ಘೋಷಿಸಿದರು. 

MES ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರವಾಗಿದೆ. ಅವಿರೋಧವಾಗಿ ಖಂಡನಾ ನಿರ್ಣಯ ಅಂಗೀಕಾರವಾಗಿದ್ದು, ಕೇಂದ್ರ ಗೃಹ ಇಲಾಖೆಗೆ ರವಾನೆಯಾಗುತ್ತದೆ. ಇದರೊಂದಿಗೆ ಇನ್ಮುಂದೆ ಇಂತಹ ಕೃತ್ಯ ಎಸಗಿದರೇ ದೇಶದ್ರೋಹ ಕೇಸ್ ದಾಖಲಿಸಲಾಗುತ್ತದೆ.

ಇನ್ನು ಈ ಬಗ್ಗೆ ಸಿಎಂ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದ ಮತ್ತು ಶಿವಾಜಿ ಪ್ರತಿಮೆ ಮಸಿ ಬಳಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ ಎಂದರು.

ಕಾನೂನಿನಲ್ಲಿ ಅವಕಾಶವಿದ್ದರೆ ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಲಾಗುವುದು. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದವರು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಂತ ಬಂಧಿತರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ದಾಖಲಿಸಿ, ತನಿಖೆಯ ಮೂಲಕ ಅವರ ಹಿಂದೆ ಯಾರ್ ಇದ್ದಾರೆ ಎನ್ನುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಜೊಲ್ಲೆ ಒಡೆತನದ ಕಟ್ಟಡದ ಮೇಲೆ ಶಿವಸೇನೆ ಪುಂಡಾಟ
 ನಿಪ್ಪಾಣಿ ಶಾಸಕಿ ಮತ್ತು ಮುಜರಾಯಿ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ನಿರ್ಮಾಣ ಹಂತದ ಕಟ್ಟಡದ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ಕೊಲ್ಲಾಪುರ ನಗರದ ಶಾಹುನಾಕಾ ಬಳಿ ನಿರ್ಮಾಣ ಹಂತದ ಕಟ್ಟಡದ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ವೇಳೆ ಕಾಮಗಾರಿ ತಡೆಹಿಡಿದು ಗಲಾಟೆ ಮಾಡಿ ಕಾರ್ಮಿಕರಿಗೆ ಬೆದರಿಕೆ ಹಾಕಿ ಕೆಲಸ ಆರಂಭಿಸದಂತೆ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ನಮ್ಮವರನ್ನು ಬಂಧನದಿಂದ ಬಿಡಿಸುವವರೆಗೂ ನಾವು ನಿಮ್ಮ ಕಟ್ಟಡಕ್ಕೆ ಅವಕಾಶ ನೀಡೋದಿಲ್ಲ. ಯಾವ ಸಚಿವರಿದ್ದರೆ ನಮಗೇನು? ನಮ್ಮಲ್ಲಿ ಬಂದು ಕ್ಷಮೆ ಕೇಳಬೇಕು ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಕಾಮಗಾರಿ ಆರಂಭಿಸಬಾರದು ಎಂದು ಪುಂಡರು ವಾರ್ನ್​ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

click me!