
ಬೆಂಗಳೂರು (ಆ.18): ಹಿಂದಿನ ಬಿಜೆಪಿ ಸರ್ಕಾರವು ಕಲ್ಯಾಣ ಕರ್ನಾಟಕದ ಭಾಗದಲ್ಲಿ 371ಜೆ ಅಡಿ ಖಾಲಿ ಹುದ್ದೆಗಳ ಭರ್ತಿಗೆ ಸಮರ್ಪಕವಾದ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳು, ಬಡ್ತಿ ನೀಡಬೇಕಾದ ಮತ್ತು ಬಡ್ತಿ ಬಳಿಕ ಖಾಲಿಯಾಗುವ ಹುದ್ದೆಗಳ ಸಂಖ್ಯೆಯ ಸಂಪೂರ್ಣವಾದ ವಿವರವನ್ನು ಸೋಮವಾರದೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank kharge) ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು ಬಿಜೆಪಿ ಸರ್ಕಾರ(BJP Government)ವು ಕಲ್ಯಾಣ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುವ ಸಂಬಂಧ ಸಚಿವ ಸಂಪುಟದ ಉಪಸಮಿತಿಯ ಏಳು ಸಭೆಗಳನ್ನು ನಡೆಸಿದೆ. ಆದರೆ, ಸಮರ್ಪಕವಾಗಿ ಹುದ್ದೆಗಳ ಭರ್ತಿ ಮಾಡಿಲ್ಲ. ಖಾಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ನೀಡಿದ ಮಾಹಿತಿಗಳಿಗೂ, ಯೋಜನಾ ಇಲಾಖೆ ನೀಡಿರುವ ಮಾಹಿತಿ ಸಾಕಷ್ಟುವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ಖಾಲಿ ಹುದ್ದೆ, ಬಡ್ತಿ ಹುದ್ದೆಗಳ ಸರಿಯಾದ ಮಾಹಿತಿಗಳನ್ನು ಸೋಮವಾರದೊಳಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪದತ್ಯಾಗ: ಮುನಿಯಪ್ಪ ಹೇಳಿಕೆಗೆ ಪರಂ, ಪ್ರಿಯಾಂಕ್ ವಿರೋಧ
ಸಭೆಯಲ್ಲಿ ಇಲಾಖಾವಾರು ಖಾಲಿ ಹುದ್ದೆಗಳ ಕುರಿತು ಚರ್ಚಿಸಲಾಗಿದೆ. 371ಜೆ ಅಡಿ ನೇಮಕಾತಿ ಮಾಡಿಕೊಳ್ಳುವಾಗ ಹಣಕಾಸು ಇಲಾಖೆಯ ಅನುಮತಿ ಪಡೆಯಬೇಕಾದ ಅಗತ್ಯ ಇಲ್ಲ. ನೇರವಾಗಿಯೇ ನೇಮಕಾತಿಯನ್ನು ಮಾಡಿಕೊಳ್ಳಬಹುದು. ಇದು ನಿಯಮದಲ್ಲಿಯೇ ಇದೆ. ಆದರೆ, ಬಿಜೆಪಿ ಸರ್ಕಾರವು ಈ ನಿಯಮ ಬದಲಿಸಿದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು ಎಂದು ಮಾಡಿದೆ. ಅದನ್ನು ಈ ಮೊದಲಿನಂತೆ ನಿಯಮವನ್ನು ಮಾಡಲು ಸೂಚಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಕಷ್ಟುಅಕ್ರಮ ನಡೆದಿರುವುದು ಈಗ ಗೊತ್ತಾಗುತ್ತಿದೆ. ಅಕ್ರಮ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅನುದಾನ ದುರುಪಯೋಗ, ಮಂಡಳಿಯಲ್ಲಿನ ಕಾಮಗಾರಿ ಸೇರಿದಂತೆ ಹಲವು ವಿಚಾರದಲ್ಲಿ ಅವ್ಯವಹಾರ ನಡೆದಿದೆ. ಈ ಎಲ್ಲದರ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ. ತನಿಖೆ ನಡೆಸಿದರೂ ಅಕ್ರಮಗಳ ಅಳ ಹೆಚ್ಚಾಗುತ್ತಿದೆ. ತನಿಖೆಯ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಮಂಗಳೂರು: ಡಿಸಿ ಕಚೇರಿ ಮೆಟ್ಟಿಲಲ್ಲಿ ಕೂತ ಬಿಜೆಪಿ ಶಾಸಕರು: ಹಕ್ಕುಚ್ಯುತಿ ವಿರುದ್ದ ಧರಣಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ