
ಬೆಂಗಳೂರು (ಮಾ.2): ಜಾತಿ ಗಣತಿಗೆ ಸರ್ಕಾರದ ಕೆಲವು ಸಚಿವರು ಆಕ್ಷೇಪಗಳನ್ನು ಎತ್ತಿದ್ದರೆ, ಮತ್ತೆ ಕೆಲವು ಪ್ರಭಾವಿ ಸಚಿವರು ವರದಿಯ ಪರವಾಗಿ ಧ್ವನಿಗೂಡಿಸಿದ್ದಾರೆ.
ವರದಿಯಲ್ಲಿ ತಮ್ಮ ಜನಸಂಖ್ಯೆ ಕಡಿಮೆಯಾಗುತ್ತದೆ ಎಂಬ ಆತಂಕದಿಂದ ಕೆಲವು ಸಚಿವರು ಜಾತಿಗಣತಿಗೆ ಆಕ್ಷೇಪ ವ್ಯಕ್ತಪಡಿಸಿರಬಹುದು ಎಂದು ಗೃಹ ಸಚಿವ ಪರಮೇಶ್ವರ್ ಮಾರ್ಮಿಕವಾಗಿ ನುಡಿದರು.
ಸರ್ಕಾರದ ಕೆಲವು ಸಚಿವರಿಂದ ವರದಿಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಬೇರೆಯವರ ಸಂಖ್ಯೆ ಹೆಚ್ಚಿದ್ದು ತಮ್ಮ ಜನಸಂಖ್ಯೆ ಕಡಿಮೆ ಆಗುವ ಭೀತಿಯಿಂದ ಕೆಲವು ಸಚಿವರು, ಶಾಸಕರು ಆ ರೀತಿಯ ಹೇಳಿಕೆ ನೀಡಿರಬಹುದು. ಆದರೆ, ಆಯೋಗ ಸಲ್ಲಿಸಿರುವ ವರದಿಯಲ್ಲಿನ ಮಾಹಿತಿ, ಶಿಫಾರಸುಗಳು ಅಧಿಕೃತವಾಗಿ ಹೊರಗೆ ಬಂದರೆ ಮಾತ್ರ ಏನಿದೆ ಎಂದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಏನನ್ನು ಹೇಳಲಾಗದು. ಅದನ್ನು ಸಂಪುಟದಲ್ಲಿ ಮಂಡಿಸುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ. ಸಂಪುಟ ಸದಸ್ಯರು ಒಪ್ಪಿದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಮಂಡಿಸಲಾಗುತ್ತದೆ ಎಂದರು.
ಸಚಿವ ಜಮೀರ್ ಖಾನ್ ಮಾತನಾಡಿ, ಜಾತಿಗಣತಿ ವರದಿಯಲ್ಲಿ ಸತ್ಯ ಹೊರ ಬಂದಿದೆ. ಎಸ್ಸಿ ಸಮುದಾಯದವರು ಹೆಚ್ಚು ಇದ್ದಾರೆ. ಮುಸ್ಲಿಂ ಸಮುದಾಯದವರು 70 ಲಕ್ಷ ಜನರಿದ್ದಾರೆ ಎಂಬ ಮಾಹಿತಿ ಬಂದಿದೆ. ಸರ್ಕಾರದಲ್ಲಿ ಜಾತಿಗಣತಿಗೆ ಯಾವುದೇ ವಿರೋಧ ಇಲ್ಲ ಎಂದರು.
ಹಿಂದೂ ಭಾವನೆಯಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವೇ ಜಾತಿ ಗಣತಿ: ಸಿಟಿ ರವಿ
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಜಾತಿಗಣತಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಕೆಲವು ಸಚಿವರು ಇಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲರೂ ವರದಿಯನ್ನು ಒಪ್ಪಿಕೊಂಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ