
ಹುಬ್ಬಳ್ಳಿ (ಆ.30): ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಬರುವಾಗ ಮಡಿ ಸೀರೆಯುಟ್ಟು, ಹಣೆಗೆ ಅರಿಶಿಣ, ಕುಂಕುಮ ಹಚ್ಚಿ ಬರಬೇಕು. ಈ ಮೂಲಕ ದಸರಾ ಸಂಪ್ರದಾಯಕ್ಕೆ ಗೌರವ ಕೊಡಬೇಕು. ಹೀಗೆ ಮಾಡಿದರೆ ನಮಗೆ ಅಭ್ಯಂತರವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ರಾಣಿ ಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ವಿಸರ್ಜನೆ ಮೆರವಣಿಗೆ ಸಮಾರಂಭದಲ್ಲಿ ಮಾತನಾಡಿ, ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಿದೆ. ಹಾಗಂತ ಮೈಸೂರು ದಸರಾ ಉದ್ಘಾಟನೆ ಅವಕಾಶ ಕೊಡಬೇಕಿತ್ತಾ? ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಧಿಕಾರದಿಂದ ದೂರವಿಡಲು ಸಿಎಂ ಸಿದ್ದರಾಮಯ್ಯ ಹೂಡಿರುವ ತಂತ್ರಗಾರಿಕೆ ಇದು. ಇದನ್ನು ಡಿಕೆಶಿ ಅರಿತುಕೊಳ್ಳಬೇಕು ಎಂದರು.
ಹಿಂದೂಗಳಲ್ಲಿ ಹೆಣ್ಣನ್ನು ದೇವಿ ಸ್ಪರೂಪವಾಗಿ ನೋಡಲಾಗುತ್ತದೆ. ಹೀಗಾಗಿಯೇ ದೇಶಕ್ಕೆ ಭಾರತ ಮಾತೆ, ಕರ್ನಾಟಕಕ್ಕೆ ಕನ್ನಡಾಂಬೆ ಎಂದು ಕರೆಯುತ್ತೇವೆ. ನಮ್ಮ ಸಂಸ್ಕೃತಿ ಬಗ್ಗೆ ಮುಷ್ತಾಕ್ ಅಸಡ್ಡೆ ಮಾಡುತ್ತಾರೆ. ತಾತ್ಸಾರ ಇಟ್ಟುಕೊಂಡು ನಮ್ಮ ಬೆಟ್ಟಕ್ಕೆ ಹೇಗೆ ಬರುತ್ತಿರಿ? ನೀವು ಹಿಂದೆ ಸಮ್ಮೇಳನದಲ್ಲಿ ಕನ್ನಡದಾಂಬೆಗೆ ಕುಂಕುಮವಿಟ್ಟು, ಸೀರೆ ತೋಡಿಸಿ ಕರ್ನಾಟಕದಿಂದ ಮುಸ್ಲಿಂರನ್ನೇ ಹೊರಗಿಟ್ಟಿದೀರಿ ಎಂದು ಹೇಳಿದ್ದೀರಿ. ಇದೀಗ ಅದೇ ಚಾಮುಂಡೇಶ್ವರಿ ಉತ್ಸವಕ್ಕೆ ಚಾಲನೆ ನೀಡಲು ನಿಮಗೆ ಮನಸ್ಸಾದರೂ ಹೇಗಾಯಿತು? ಎಂದು ಬಾನು ಅವರನ್ನು ಪ್ರಶ್ನಿಸಿದ್ದಾರೆ.
ನದಿಯನ್ನು ಕೂಡ ನಾವು ದೇವಿಯನ್ನಾಗಿ ಮಾಡಿದ್ದು, ನಾವು ಪೂಜಿಸುವ ಕಾವೇರಿ ನೀರು ಕುಡಿಯಬೇಕಾದರೆ ಏನು ಅನಿಸುವುದಿಲ್ಲವೇ? ನೀವೇನು ಸಾಹಿತಿಗಳೋ, ನಾಟಕಕಾರರೋ? ಹಿಂದುಗಳು ಇಫ್ತಾರ್ ಕೂಟಕ್ಕೆ ಹೋಗುವವರಿಗೆ ಟೋಪಿ ಹಾಕುತ್ತೀರಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ತಾಲಿಬಾನಿ ಸರ್ಕಾರ:
ಈ ಹಿಂದೆ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಬಾಲ ಗಂಗಾಧರ ತಿಲಕ ಅವರು ಗಣೇಶೋತ್ಸವ ಆರಂಭಿಸಿದರು. ಭಾರತೀಯರನ್ನು ಇಟ್ಟುಕೊಂಡೇ ಭಾರತೀಯರ ಮೇಲೆ ಬ್ರಿಟಿಷರು ಆಡಳಿತ ಮಾಡಿದರು. ಈಗ ಭಾರತದಲ್ಲಿದ್ದುಕೊಂಡೆ ಭಾರತದ ಗಡಿಯಾಚೆ ನಿಷ್ಠೆ ಹೊಂದಿರುವವರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಯಾವಾಗ ನಾವು ಗೌಡ, ಒಕ್ಕಲಿಗ, ಬ್ರಾಹ್ಮಣ, ಎಸ್ಸಿ, ಎಸ್ಟಿ ಎನ್ನುವ ಬದಲು ನಾವು ಹಿಂದೂಗಳು ಎಂದು ಹೇಳಿಕೊಳ್ಳುತ್ತೇವೆಯೋ ಅಂದು ಯಾರನ್ನೂ ಬೇಡುವ ಪರಿಸ್ಥಿತಿ ಬರಲ್ಲ ಎಂದು ಪ್ರತಾಪ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ