ಹೊಸ ವರ್ಷಾಚರಣೆಗೆ ಬ್ರೇಕ್: ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ!

By Kannadaprabha NewsFirst Published Dec 6, 2020, 7:21 AM IST
Highlights

ಹೊಸ ವರ್ಷಾಚರಣೆಗೆ ಬ್ರೇಕ್‌!| ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ| ಹೋಟೆಲ್‌ಗಳಲ್ಲಿ ಸರಳ ಆಚರಣೆ ಓಕೆ| ಸರ್ಕಾರದಿಂದ ಶೀಘ್ರ ಈ ಕುರಿತು ಮಾರ್ಗಸೂಚಿ: ಸಚಿವ ಆರ್‌.ಅಶೋಕ್‌

 ಬೆಳಗಾವಿ(ಡಿ.06): ಕೋವಿಡ್‌​​-19 ಎರಡನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ವಿಚಾರವನ್ನು ಸ್ವತಃ ಕಂದಾಯ ಸಚಿವ ಆರ್‌.ಅಶೋಕ್‌ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ತಾವು ಚರ್ಚಿಸಿದ್ದು, ಸರ್ಕಾರ ಶೀಘ್ರ ಆದೇಶ ಹಾಗೂ ಮಾರ್ಗಸೂಚಿ ಹೊರಡಿಸಲಿದೆ ಎಂದೂ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ವರ್ಷದ ಸಂಭ್ರಮಾಚರಣೆಗೆ ಸಂಪೂರ್ಣ ಕಡಿವಾಣ ಹಾಕುವುದಿಲ್ಲ. ಆದರೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶ ಇಲ್ಲ. ಡಿ.31ರಂದು ಹೋಟೆಲ್‌ಗಳು ತೆರೆದಿರಲಿದ್ದು, ಅಲ್ಲಿ ಸರಳವಾಗಿ ಪಾರ್ಟಿ ಮಾಡುವುದಕ್ಕೆ ಅಭ್ಯಂತರ ಇಲ್ಲ. ಆದರೆ, ಈ ವೇಳೆ ಕೋವಿಡ್‌ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಾಹಿತಿ ನೀಡಿದರು.

ಹೋಟೆಲ್‌ಗಳಲ್ಲಿ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಆಸನಗಳಲ್ಲಷ್ಟೇ ಗ್ರಾಹಕರಿಗೆ ಸೇವೆ ಒದಗಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದ ಅವರು, ಈ ಹಿಂದಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಅದ್ಧೂರಿಯಾಗಿ ಹೊಸ ವರ್ಚಾರಣೆ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕಾರ ಕೊಡಬೇಕು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಹೊಸ ವರ್ಷದ ಸಂಭ್ರಮ ಆಚರಿಸಬೇಕು ಎಂದು ಮನವಿ ಮಾಡಿದರು.

click me!