
ಬೆಂಗಳೂರು / ಹಾವೇರಿ (ಮೇ 1): ಹುಬ್ಬಳ್ಳಿ-ಹಾವೇರಿ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯ ಚಾಲಕ-ಕಂ-ನಿರ್ವಾಹಕ ಎ.ಆರ್. ಮುಲ್ಲಾ ಎನ್ನುವವರು ರಸ್ತೆಯ ಪಕ್ಕದಲ್ಲಿ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಸಚಿವರು ತನಿಖೆಗೆ ಆದೇಶಿಸಿ, ಸೇವಾ ನಿಯಮ ಉಲ್ಲಂಘನೆ ಮಾಡಿದ ಸಾರಿಗೆ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹಾನಗಲ್ ದಿಂದ ವಿಶಾಲಗಡ ಮಾರ್ಗದ ಮೇಲೆ ವಾಹನ ಸಂಖ್ಯೆ ಕೆಎ-27, ಎಫ್-0914, ರಲ್ಲಿ ಎ.ಆರ್. ಮುಲ್ಲಾ ಅವರನ್ನು ಚಾಲಕರಾಗಿ ಕರ್ತವ್ಯಕ್ಕೆ ನಿಯೋಜಿಸಿದ್ದು, ಏ.29ರಂದು ವಿಶಾಲಗಡ ದಿಂದ ಹಾನಗಲ್ ಮಾರ್ಗವಾಗಿ ವಾಹನವನ್ನು ಕಾರ್ಯಾಚರಣೆ ಮಾಡುತ್ತಿದ್ದರು. ಈ ಸಮಯದಲ್ಲಿ ನೀವು ಸಮಯ ಸಂಜೆ 5:30ರ ವೇಳೆ ವಾಹನವನ್ನು ಹುಬ್ಬಳ್ಳಿಯ ಹೊರ ಭಾಗದಲ್ಲಿನ ಗಟ್ಟೂರು ಕ್ರಾಸ್ನಿಂದ ಸ್ವಲ್ಪ ಮುಂದೆ ರಸ್ತೆಯ ಎಡಬದಿಗೆ ಹಾಕಿ ಬಂದ್ ಮಾಡಲಾಗಿದೆ. ನಂತರ, ಬಸ್ಸಿಗೆ ಹ್ಯಾಂಡ್ ಬ್ರೇಕ್ ಹಾಕಿ, ಚಾಲಕರ ಸೀಟಿನಿಂದ ಎದ್ದು, ಚಾಲಕರ ಸೀಟಿನ ಹಿಂದೆ ಇರುವ ಮೂರರ (1,2,3) ಆಸನದಲ್ಲಿ 'ನಮಾಜ'(ಪ್ರಾರ್ಥನೆ) ಮಾಡಿರುತ್ತೀರಿ. ನೀವು ಈ ರೀತಿ ಸಂಸ್ಥೆಯ ಸಾರ್ವಜನಿಕ ಸೇವೆಯಲ್ಲಿರುವಾಗ ಮಾರ್ಗ ಮದ್ಯದಲ್ಲಿ ಬಸ್ ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಕರು ಇದ್ದಾಗಲೂ ಸಹ ಧಾರ್ಮಿಕ ಆಚರಣೆ ಮಾಡಿ ಕರ್ತವ್ಯ ಲೋಪ ಎಸಗಿರುತ್ತೀರಿ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವಿಷಯ ಭಿತ್ತರವಾಗಿ ಸಾರ್ವಜನಿಕರ ವಯಲದಲ್ಲಿ ಚರ್ಚೆಗೆ ಗ್ರಾಸವಾಗಲು ಮತ್ತು ಸಂಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣರಾಗಿರುತ್ತೀರಿ ಎಂದು ಮುಲ್ಲಾ ಮೇಲೆ ಗಂಭೀರ ಆರೋಪ ಮಾಡಲಾಗಿದೆ.
ಜೊತೆಗೆ, ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತು ಮತ್ತು ನಡತೆಗಳ ನಿಯಮಾವಳಿ 1971ರ ಭಾಗ-2 ಖಂಡಿಕೆ 3 ರಲ್ಲಿನ ಉಪ ಕಂಡಿಕೆ 1 ರಲ್ಲಿನ (ಎ) (ಬಿ) ಮತ್ತು (ಸಿ) ರಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಮೇಲೆ ನಮೂದಿಸಿದ ವರದಿಯಿಂದ ತಿಳಿಯುತ್ತದೆ. ಜೊತೆಗೆ ಕೆಲಸದ ಮೇಲೆ ಇರುವುದರಿಂದ ಈ ಪ್ರಕರಣದ ತನಿಖೆಗೆ ಭಾದಕವಾಗಬಹುದೆಂದು ಎ. ಆರ್. ಮುಲ್ಲಾ ಇವರನ್ನು ಅಮಾನತ್ತಗೊಳಿಸಬೇಕೆಂದು ಅಭಿಪ್ರಾಯಪಟ್ಟು ಈ ಕೆಳಗಿನಂತೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಶಿಸ್ತುಪಾಲನಾಧಿಕಾರಿ ವರದಿ ನೀಡಿದ್ದಾರೆ.
ಈ ವರದಿ ಅನುಸಾರ ಕ.ರಾ.ರ.ಸಾ.ಸಂಸ್ಥೆ ನೌಕರರ ನಡತೆ ಮತ್ತು ಶಿಸ್ತು ನಿಯಮಾವಳಿ-1971 ರ ನಿಯಮ 21(1) ಮತ್ತು ಕ.ರಾ.ರ.ಸಾ.ಸಂಸ್ಥೆಯ ಸುತ್ತೋಲೆ ಸಂ:ಕರಾಸಾ/ಕೇಕ/ಶಿಸ್ತು/959 ದಿನಾಂಕ:22/10/1999 ರ ಮೇರೆಗೆ ಪ್ರದತ್ತವಾದ ಅಧಿಕಾರದನ್ವಯ ನಡತೆ ಮತ್ತು ಶಿಸ್ತು ನಿಯಮ 21(1) ರಡಿಯಲ್ಲಿ ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ರವರನ್ನು ಈ ಕೂಡಲೇ ಜಾರಿಗೆ ಬರುವಂತೆ ವಿಚಾರಣೆ ಬಾಕಿ ಇಟ್ಟು ಅಮಾನತ್ತಿನಲ್ಲಿ ಇಡಲಾಗಿದೆ.
ಈ ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ವಹಿಸಿದ ಕೆಲಸ ಮಾಡಿದ ಪೂರ್ಣಾವಧಿಗೆ (ದಿನದ ಭತ್ಯೆ ಹಾಗೂ ಇತರ ಭತ್ಯೆ ಬಿಟ್ಟು) ಪಡೆಯಬಹುದಾದ ಒಟ್ಟು ವೇತನದ ಶೇ.50ಕ್ಕೆ ಸರಿಯಾಗುವಷ್ಟು ಮೊತ್ತವನ್ನು ನೀಡಲಾಗುವುದು. ಸದರಿಯವರು ತಮ್ಮ ಅಮಾನತ್ತಿನ ಅವಧಿಯಲ್ಲಿ ಯಾವುದೇ ತರಹದ ನೌಕರಿ, ವ್ಯಾಪಾರ, ಉದ್ಯೋಗ ಹಾಗೂ ವಿರಾಮ ಕಾಲದ ಚಟುವಟಿಕೆಗಳಲ್ಲಿ ತೊಡಗಿಲ್ಲವೆಂದು ಘೋಷಣೆ ಪತ್ರ ಸಹಿ ಮಾಡಿ ಕೊಟ್ಟಾಗ ಮಾತ್ರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಸದರಿಯವರು ಶಿಸ್ತುಪಾಲನಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯದೇ ಕಾರ್ಯಕ್ಷೇತ್ರವನ್ನು ತೊರೆದು ಹೊರಗೆ ಹೋಗಬಾರದು.
ಜೊತೆಗೆ, ಮುಲ್ಲಾ ಅವರು ತಮ್ಮ ಸರಿಯಾದ ಅಂಚೆ ವಿಳಾಸವನ್ನು ತಿಳಿಸಬೇಕು. ಇಲ್ಲದೇ ಹೋದಲ್ಲಿ ಈ ಕಛೇರಿಯ ದಾಖಲಾತಿಯಲ್ಲಿ ಇರುವ ವಿಳಾಸಕ್ಕೆ ತಿಳುವಳಿಕೆ ಪತ್ರ ಹಾಗೂ ಇತರ ಕಾಗದ ಪತ್ರವನ್ನು ಕಳಿಸಲಾಗುವುದು. ಅಂತಹ ಅಂಚೆಗಳು ಬಟವಡೆಯಾಗದಿದ್ದಲ್ಲಿ ಅಂತಹ ವಿಳಾಸದಾರರು ಇಲ್ಲ ಅಥವಾ ಬಟವಾಡೆ ವೇಳೆಯಲ್ಲಿ ಸಿಗುವುದಿಲ್ಲ ಎಂಬ ಅಂಚೆ ಶರಾಗಳೊಂದಿಗೆ ಪತ್ರ ಬಂದರೂ ಸಹ ಸದರಿಯವರಿಗೆ ಸಕಲ ಉದ್ದೇಶಗಳಿಗಾಗಿ ಆ ಪತ್ರಗಳು ಮುಟ್ಟಿರುತ್ತವೆ ಎಂದು ಪರಿಗಣಿಸಲಾಗುವುದು. ಈ ರೀತಿ ಜಾರಿಯಾಗದೇ ಇರುವ ಪತ್ರಗಳು ಜಾರಿಯಾದ ಪತ್ರಗಳೆಂದೇ ಪರಿಗಣಿಸಲ್ಪಡುವುದರಿಂದ ವಿಚಾರಣೆಯನ್ನು ಮುಂದುವರೆಸಲು ಹಾಗೂ ಶಿಸ್ತಿನ ಕ್ರಮವನ್ನು ಜರುಗಿಸಲು ಅವು ಪ್ರತಿಬಂಧಕವಾಗಲಾರವು ಎಂದು ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ