ಖಾದಿ ಮಂಡಳಿ ಆರ್ಥಿಕ ಹೊರೆ ಇಳಿಸಲು ಮಸೂದೆ

By Kannadaprabha NewsFirst Published Sep 15, 2021, 9:33 AM IST
Highlights
  • ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಸಭೆಯಲ್ಲಿ ಪರಿಣಾಮಕಾರಿಯಾಗಿ ಚರ್ಚೆ
  • ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕ ಮಂಡನೆ

ವಿಧಾನಸಭೆ (ಸೆ.15):  ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಸಭೆಯಲ್ಲಿ ಪರಿಣಾಮಕಾರಿಯಾಗಿ ಚರ್ಚೆ ನಡೆಸುವ ಸಂಬಂಧ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗಿದೆ.

ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜು ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಗಳವಾರ ವಿಧೇಯಕವನ್ನು ಮಂಡಿಸಿದರು. ನಿರ್ದೇಶಕರ ಮಂಡಳಿಯಲ್ಲಿ ಸರ್ಕಾರೇತರ ಸದಸ್ಯರ ಸಂಖ್ಯೆಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಒಬ್ಬ ವ್ಯಕ್ತಿಯ ಬದಲಾಗಿ ಪ್ರತಿಯೊಂದು ಕಂದಾಯ ವಲಯದಿಂದ ಮೂವರು ವ್ಯಕ್ತಿಗಳಂತೆ, ಆದರೆ, ಒಂದೇ ಜಿಲ್ಲೆಯಿಂದ ಒಂದಕ್ಕಿಂತ ಹೆಚ್ಚಿರದಂತೆ 12 ಸರ್ಕಾರೇತರ ಸದಸ್ಯರಿಗೆ ಕಡಿತಗೊಳಿಸಲು ತಿದ್ದುಪಡಿ ಮಾಡಬೇಕಾಗಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಲಾಕ್‌ಡೌನ್‌ ಎಫೆಕ್ಟ್‌: ಆರ್ಥಿಕ ಸಂಕಷ್ಟದಲ್ಲಿ ಖಾದಿ ಉತ್ಪಾದನಾ ಕೇಂದ್ರಗಳು

ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ನಿಯಮಗಳ ಪಾಲನೆಯ ಮೇಲ್ವಿಚಾರಣೆಯನ್ನು ಮಾಡಲು ಮತ್ತು ನಿಯತಕಾಲಿಕವಾಗಿ ಪುನರ್‌ ಪರಿಶೀಲನಾ ವರದಿಗಳನ್ನು ಸಲ್ಲಿಸುವ ಕಾರ್ಯ ವ್ಯವಸ್ಥೆಯನ್ನು ಅಧಿಸೂಚಿಸಲು ಪ್ರಸ್ತುತ ರಾಜ್ಯ ಲೆಕ್ಕಪತ್ರಗಳ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಇದರ ಬದಲಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯನ್ನು ಸಕ್ಷಮ ಪ್ರಾಧಿಕಾರವನ್ನಾಗಿ ಮಾಡುವುದಕ್ಕೆ ತಿದ್ದಪಡಿ ತರಲಾಗುತ್ತಿದೆ.

ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ ಮಂಡಿಸಿದ್ದು, ತೆರಿಗೆ ಎಂದ ಪದದ ಬದಲಿಗೆ ಶುಲ್ಕ ಎಂಬ ಪದವನ್ನು ಸೇರಿಸಲಾಗುತ್ತದೆ.

ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ ಮಂಡಿಸಿದ್ದು, ಇದರ ಅನ್ವಯ ಕೆಲ ನಿಯಮಗಳ ಉಲ್ಲಂಘನೆಗಾಗಿ ದಂಡವನ್ನು 50 ರು.ನಿಂದ ಐದು ಸಾವಿರ ರು.ಗೆ ಮತ್ತು 500 ರು.ನಿಂದ 25 ಸಾವಿರ ರು.ಗೆ ಹೆಚ್ಚಿಸಲು ತಿದ್ದಪಡಿ ಮಾಡುವುದು ಅವಶ್ಯಕ ಇದೆ ಎಂದು ವಿಧೇಯಕದಲ್ಲಿ ಹೇಳಲಾಗಿದೆ.

click me!