
Namma Metro Phase III: ಬೆಂಗಳೂರು ಮೆಟ್ರೋ ವ್ಯವಸ್ಥೆಯು 45 ಕಿಮೀ ಉದ್ದದ ಮೂರನೇ ಹಂತದ ವಿಸ್ತರಣೆಗೆ ಸಜ್ಜಾಗುತ್ತಿದೆ. ವಿಳಂಬವಾಗುವುದು ತಪ್ಪಿಸಲು ಕೇಂದ್ರದ ಒಪ್ಪಿಗೆ ಬಾಕಿ ಇರುವಾಗಲೇ ಮೂರನೇ ಹಂತದ ಯೋಜನೆ ಕಾಮಗಾರಿ ಆರಂಭಿಸಲು ಎಲ್ಲ ಪ್ರಕ್ರಿಯೆಗಳನ್ನ ಆರಂಭಿಸಿದೆ.
ಕೇಂದ್ರವು 2024ರ ಆಗಸ್ಟ್ನಲ್ಲಿ ಅನುಮೋದನೆ ನೀಡಿದ್ದರೂ,. 2025ರ ಆಗಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರೂ ಈ ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ..
ನಮ್ಮ ಮೆಟ್ರೋ ಹಂತ-3 ಯೋಜನೆಯಲ್ಲಿ ಎರಡು ಮಾರ್ಗಗಳಿವೆ. ಮೊದಲ ಮಾರ್ಗವು ಕೆಂಪಾಪುರದಿಂದ ಜೆ.ಪಿ. ನಗರವರೆಗೆ ಹೊರ ವರ್ತುಲ ರಸ್ತೆಯ (ORR) ಮೂಲಕ ಸಾಗಲಿದೆ. ಎರಡನೇ ಮಾರ್ಗವು ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾಗಡಿ ರಸ್ತೆಯಲ್ಲಿ ನಿರ್ಮಾಣವಾಗಲಿದೆ. 45 ಕಿ.ಮೀ ಉದ್ದದ ಮೆಟ್ರೋ ಮೂರನೇ ಹಂತದ ಯೋಜನೆ ಹಂತ-3 ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ಸಿಕ್ಕರೆ ಕಾಮಗಾರಿ ಆರಂಭವಾಗಿಲ್ಲ, ವಿಳಂಬಕ್ಕೆ ಕಾರಣವೇನು?
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಆರೆಂಜ್ ಲೈನ್ನಲ್ಲಿ 37 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮಾದರಿಯ ನಿರ್ಮಾಣ ಮಾಡುವ ಪ್ರಸ್ತಾವನೆ ಹೊಂದಿತ್ತು. ಈ ಯೋಜನೆಯಲ್ಲಿ ಕೆಳ ಹಂತದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಅದರ ಮೇಲ್ಭಾಗದಲ್ಲಿ ಮೆಟ್ರೋ ಮಾರ್ಗ ನಿರ್ಮಿಸುವ ಉದ್ದೇಶವಿತ್ತು. ಈ ಡಬಲ್ ಡೆಕ್ಕರ್ ಯೋಜನೆಗೆ ಅಂದಾಜು ₹19,700 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಲಾಗಿತ್ತು. ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲು ಒಪ್ಪಿಕೊಂಡಿತ್ತು. ಆದರೆ ಎಂಜಿನಿಯರಿಂಗ್ ಸಲಹಾ ಸಂಸ್ಥೆ RITES ನೀಡಿರುವ ಸಲಹೆಗಳ ಹಿನ್ನೆಲೆಯಲ್ಲಿ, BMRCL ಡಬಲ್ ಡೆಕ್ಕರ್ ಮಾರ್ಗದ ಉದ್ದವನ್ನು 37 ಕಿ.ಮೀನಿಂದ ಸುಮಾರು 11 ಕಿ.ಮೀಗೆ ಇಳಿಸುವ ಬಗ್ಗೆ ಪರಿಶೀಲಿಸುತ್ತಿದೆ. ಇಡೀ ಮಾರ್ಗದಲ್ಲಿ ಡಬಲ್ ಡೆಕ್ಕರ್ ನಿರ್ಮಿಸುವ ಬದಲು, ಹೆಚ್ಚು ವಾಹನ ದಟ್ಟಣೆ ಇರುವ ಪ್ರಮುಖ ಜಂಕ್ಷನ್ಗಳು ಮತ್ತು ಟ್ರಾಫಿಕ್ ಸಮಸ್ಯೆ ಇರುವ ಸ್ಥಳಗಳಲ್ಲಿ ಮಾತ್ರ ಚಿಕ್ಕ ಚಿಕ್ಕ ಭಾಗಗಳಲ್ಲಿ ಇದನ್ನು ನಿರ್ಮಿಸುವ ಸಾಧ್ಯತೆಯಿದೆ.
ರಸ್ತೆಯ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುವುದರಿಂದ ಖಾಸಗಿ ವಾಹನಗಳ ಬಳಕೆ ಮತ್ತಷ್ಟು ಹೆಚ್ಚಾಗಬಹುದು ಎಂದು RITES ಆತಂಕ ವ್ಯಕ್ತಪಡಿಸಿದೆ. ಇದರಿಂದ ಖಾಸಗಿ ವಾಹನಗಳಿಂದ ಸಾರ್ವಜನಿಕ ಸಾರಿಗೆಗೆ, ವಿಶೇಷವಾಗಿ ಮೆಟ್ರೋಗೆ ಜನರನ್ನು ಸ್ಥಳಾಂತರಿಸುವ ಯೋಜನೆಯ ಉದ್ದೇಶಕ್ಕೆ ಧಕ್ಕೆಯಾಗಬಹುದು ಎಂದು ಸಲಹಾ ಸಂಸ್ಥೆ ಹೇಳಿದೆ. ಇದರ ಜೊತೆಗೆ, ರಸ್ತೆ ಮತ್ತು ಮೆಟ್ರೋವನ್ನು ಒಂದೇ ರಚನೆಯಲ್ಲಿ ನಿರ್ಮಿಸುವುದರಿಂದ ಎದುರಾಗಬಹುದಾದ ಎಂಜಿನಿಯರಿಂಗ್ ಸವಾಲುಗಳ ಬಗ್ಗೆಯೂ RITES ಗಮನ ಸೆಳೆದಿದೆ.
ಕೆಲವು ಪ್ರಮುಖ ಜಂಕ್ಷನ್ಗಳಲ್ಲಿ ಈಗಾಗಲೇ ಇರುವ ಫ್ಲೈಓವರ್ಗಳು ಮತ್ತು ಮೆಟ್ರೋ ಮಾರ್ಗಗಳನ್ನು ದಾಟಲು ರಸ್ತೆ ಹಾಗೂ ಮೆಟ್ರೋ ಒಳಗೊಂಡ ಡಬಲ್ ಡೆಕ್ಕರ್ ರಚನೆಯು ಸುಮಾರು 35 ಮೀಟರ್ ಎತ್ತರಕ್ಕೆ ಏರಬೇಕಾಗಬಹುದು. ಇದರಿಂದ ನಿರ್ಮಾಣ ಕಾಮಗಾರಿ ಹಾಗೂ ನಂತರದ ನಿರ್ವಹಣೆ ಮತ್ತು ಕಾರ್ಯಾಚರಣೆ ಇನ್ನಷ್ಟು ಸಮಸ್ಯೆಯಾಗೆ ಕಾರಣವಾಗಬಹುದು ಎಂದು RITES ತಿಳಿಸಿದೆ.
ವರದಿಯ ಪ್ರಕಾರ, ಮೆಟ್ರೋ ಮಾತ್ರ ಇರುವ ಯೋಜನೆಯ EIRR ಸುಮಾರು ಶೇ.17ರಷ್ಟಿದೆ. ಆದರೆ ಡಬಲ್ ಡೆಕ್ಕರ್ ಭಾಗವನ್ನು ಸೇರಿಸಿದಾಗ ಇದು ಶೇ.14ರ ಮಾನದಂಡಕ್ಕಿಂತ ಕಡಿಮೆಯಾಗುತ್ತದೆ. ಬೆಂಗಳೂರಿನ ಈ ORR ಜಂಕ್ಷನ್ಗಳು ಡಬಲ್ ಡೆಕ್ಕರ್ ಯೋಜನೆಗೆ ಕಾರಣವಾಗಬಹುದು. ಬೆಂಗಳೂರಿನ ಪಶ್ಚಿಮ ಭಾಗದ ಹೊರ ವರ್ತುಲ ರಸ್ತೆಯಲ್ಲಿ ಹಲವು ಪ್ರಮುಖ ಟ್ರಾಫಿಕ್ ಸಮಸ್ಯೆಯ ಸ್ಥಳಗಳಿವೆ. ಮುಂದಿನ ದಿನಗಳಲ್ಲಿ ಚಿಕ್ಕ ಡಬಲ್ ಡೆಕ್ಕರ್ ಮಾರ್ಗಗಳನ್ನು ಎಲ್ಲಿ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸುವಾಗ ಈ ಸ್ಥಳಗಳು ಪ್ರಮುಖವಾಗಬಹುದು. ಅವುಗಳಲ್ಲಿ ಹೆಬ್ಬಾಳ, ಬಿಇಎಲ್ ಸರ್ಕಲ್, ಗೊರಗುಂಟೆಪಾಳ್ಯ, ಸುಮನಹಳ್ಳಿ ಕ್ರಾಸ್, ನಾಗರಭಾವಿ, ನಾಯಂಡಹಳ್ಳಿ ಮತ್ತು ಕಾಮಾಕ್ಯ ಜಂಕ್ಷನ್ ಸೇರಿವೆ. ಇದರ ಜೊತೆಗೆ ಸರಕ್ಕಿ ಜಂಕ್ಷನ್, ಡೆಲ್ಮಿಯಾ ಫ್ಲೈಓವರ್ ಪ್ರದೇಶ ಮತ್ತು ವೇಗಾ ಸಿಟಿ ಮಾಲ್ ಸುತ್ತಮುತ್ತಲಿನ ಪ್ರದೇಶಗಳನ್ನೂ ಪ್ರಮುಖ ಟ್ರಾಫಿಕ್ ಸಮಸ್ಯೆಯ ಸ್ಥಳಗಳೆಂದು ಗುರುತಿಸಲಾಗಿದೆ.
ಕಂಠೀರವ ಸ್ಟುಡಿಯೋದಿಂದ ಬಿಇಎಲ್ ಸರ್ಕಲ್ವರೆಗೆ 6 ಪಥದ ಸುರಂಗ ಯೋಜನೆ
ಡಬಲ್ ಡೆಕ್ಕರ್ ಯೋಜನೆ ಮಾತ್ರ ಬೆಂಗಳೂರಿನ ಈ ಭಾಗದ ಸಂಚಾರ ಸಮಸ್ಯೆ ಪರಿಹಾರಕ್ಕೆ ಸಾಕಾಗಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಂಠೀರವ ಸ್ಟುಡಿಯೋದಿಂದ ಗೊರಗುಂಟೆಪಾಳ್ಯ ಮಾರ್ಗವಾಗಿ ಬಿಇಎಲ್ ಸರ್ಕಲ್ವರೆಗೆ 6 ಪಥದ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಈ ಸುರಂಗ ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು BDA ಟೆಂಡರ್ಗಳನ್ನೂ ಆಹ್ವಾನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ