ಐಎಎಸ್ vs ಐಎಎಸ್: ಶಿಲ್ಪಾ ನಾಗ್ ಆರೋಪಗಳಿಗೆ ರೋಹಿಣಿ ಸಿಂಧೂರಿ ಪ್ರತ್ಯುತ್ತರ

By Suvarna NewsFirst Published Jun 3, 2021, 10:13 PM IST
Highlights

* ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಐಎಎಸ್ vs ಐಎಎಸ್ ವಾರ್
* ಶಿಲ್ಪಾ ನಾಗ್ ಆರೋಪಕ್ಕೆ ರೋಹಿಣಿ ಸಿಂಧೂರಿ ಪ್ರತ್ಯುತ್ತರ
* ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳನ್ನಮಾಡಿ ರಾಜೀನಾಮೆ ನೀಡಿದ್ದ ಶಿಲ್ಪಾ ನಾಗ್ 

ಮೈಸೂರು, (ಜೂನ್.03): ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸ್ಥಾನಕ್ಕೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆಲ ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಇದೀಗ  ಶಿಲ್ಪಾ ನಾಗ್  ಆರೋಪಿಗಳಿಗೆ ಸ್ವತಃ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನ ತಳ್ಳಿಹಾಕಿದ್ದಾರೆ. 

ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆ, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ

ರೋಹಿಣಿ ಸಿಂಧೂರಿ ಹೇಳಿದ್ದಿಷ್ಟು
ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ನನ್ನ ಮೇಲಿನ ಆರೋಪ ಆಧಾರ ರಹಿತವಾಗಿದೆ. ನನ್ನಿಂದ ಕಿರುಕುಳ ನಡೆದಿದೆ ಅನ್ನೋದು ಸುಳ್ಳು. ಜಿಲ್ಲಾಧಿಕಾರಿಯಾದ ನನಗೆ ಕೊರೋನಾ ನಿಯಂತ್ರಣದ ಜವಾಬ್ದಾರಿ ಇದೆ.

ವಾಸ್ತವದಲ್ಲಿ ಶಿಲ್ಪಾ ನಾಗ್​ ಅವರು ಕೊರೋನಾ ವಿಮರ್ಶೆ ಸಭೆಗಳಿಗೆ ಹಾಜರಾಗೋದನ್ನು ನಿಲ್ಲಿಸಿದ್ದರು. ಮೈಸೂರು ಸಿಟಿ ಕಾರ್ಪೋರೇಷನ್ ಹೊಸ ಕೊರೊನಾ ಪ್ರಕರಣಗಳು, ಸಾವುಗಳು ಹಾಗೂ ಸಕ್ರಿಯ ಪ್ರಕರಣಗಳ ದಾಖಲಾತಿಗೆ ಸಹಿ ಮಾಡುತ್ತಿರಲಿಲ್ಲ. ಮುಂದೆ ಹೀಗೆ ಮಾಡಬಾರದು ಎಂದಿ ನಾನು ಆದೇಶ ನೀಡಿದ್ದೆ.ಜೊತೆಗೆ ಅವರಿಗೆ ಕೋವಿಡ್ ಕೇರ್​ ಸೆಂಟರ್​ ತೆರೆಯಲು ಆದೇಶ ನೀಡಿದ್ದೆ. 

ಆದರೆ, ಅವರು ಮೈಸೂರು ನಗರದಲ್ಲಿ ಒಂದೇ ಒಂದು ಸರ್ಕಾರಿ ಕೊರೋನಾ ಕೇರ್​ ಸೆಂಟರ್​​ ತೆರೆಯುವಲ್ಲಿ ವಿಫಲಾರಾಗಿದ್ದರು. ನಾನು ಕೊವಿಡ್ ಕೇರ್ ಸೆಂಟರ್ ಆರಂಭಿಸಿಲ್ಲವೆಂಬ ಆರೋಪಕ್ಕೂ ಯಾವುದೇ ಸಾಕ್ಷಿ ಇಲ್ಲ. ಯಾಕಂದ್ರೆ ಕೇವಲ 20 ದಿನಗಳಲ್ಲಿ ಹಳ್ಳಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಒಟ್ಟು 18 ಕೊವಿಡ್ ಕೇರ್ ಸೆಂಟರ್ ಆರಂಭಿಸಿದ್ದೇವೆ. ಇತ್ತೀಚೆಗೆ ನನ್ನ ನೇತೃತ್ವದಲ್ಲೇ ನಗರದಲ್ಲಿ ಮೂರು ಕೊರೋನಾ ಕೇರ್​ ಸೆಂಟರ್​ ತೆರೆಯಲಾಗಿದೆ.

ಶಿಲ್ಪಾ ನಾಗ್ ಅವರಿಗೆ ಜಿಲ್ಲೆಯ ಖಾಸಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳಿಂದ ಬರುವ ಸಿಎಸ್‌ಆರ್ ಉಸ್ತುವಾರಿ ವಹಿಸಲಾಯಿತು. ಆದರೆ ಅವರು ಹೆಚ್ಚಿನ ಸಮಯವನ್ನ ನಗರದಲ್ಲೇ ಕಳೆದಿದ್ದಾರೆ ಅನ್ನೋದು ನನಗೆ ತಿಳಿಯಿತು. ಇದಕ್ಕೆ ಸಂಬಂಧಿಸಿಂದತೆ ನಾನು ಅವರಿಂದ ಉತ್ತರ ಕೇಳಿದ್ದೆ. ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ರೋಹಿಣಿ ಸಿಂಧೂರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನೂ ಸಹ ಬಿಡುಗಡೆ ಮಾಡಿದ್ದಾರೆ.

click me!