
ಬೆಂಗಳೂರು(ಆ.08): ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಬುಧವಾರ 8 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಗುವೊಂದು ಸೇರಿ ನಾಲ್ವರು ಕೊನೆಯುಸಿರೆಳೆದಿದ್ದು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಇಬ್ಬರು ಸೇರಿದಂತೆ ಒಟ್ಟು 8 ಮಂದಿ ಬಲಿಯಾಗಿದ್ದಾರೆ.
ಹೃದಯಾಘಾತದಿಂದ ಯುವತಿ ಸಾವು:
ಘಟಪ್ರಭಾ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಗ್ರಾಮದಲ್ಲಿ ಮನೆಗೆ ಏಕಾಏಕಿ ನೀರು ನುಗ್ಗಿದ್ದನ್ನು ಕಂಡು ಹೃದಯಾಘಾತವಾಗಿ ಮಾನಸಿಕ ಅಸ್ವಸ್ಥಳಾದ ಪದ್ಮಾವತಿ ಮಹಾದೇವ ಪಾಟೀಲ(19) ಎಂಬ ಯುವತಿ ಮೃತಪಟ್ಟಿದ್ದಾಳೆ.
ಮೈದುಂಬಿ ಧುಮ್ಮಿಕ್ಕುತ್ತಿದೆ ಜೋಗ ಜಲಪಾತ: ಕಣ್ಮನ ಸೆಳೆಯುತ್ತಿದೆ ದೃಶ್ಯ
ಬೆಳಗಾವಿ ತಾಲೂಕಿನ ಚಂದನಹೊಸೂರ ಗ್ರಾಮದಲ್ಲಿ ಮನೆ ಕುಸಿದು ಯಲ್ಲೇಶ ಗಂಗಾರಾಮ ಬಣ್ಣವರ (38) ಮೃತಪಟ್ಟರೆ, ಅಥಣಿ ತಾಲೂಕಿನಲ್ಲಿ ಮನೆ ಜಲಾವೃತವಾಗಿ ಮಗುವೊಂದು ನೀರಲ್ಲಿ ಮುಳುಗಿ ಮೃತಪಟ್ಟಿದೆ. ಅಥಣಿ ತಾಲೂಕಿನ ಸಪ್ತಸಾಗರದ ಬಳಿ ಕೃಷ್ಣಾ ನದಿಯಲ್ಲಿ ಬಸವರಾಜ ಕಾಂಬಳೆ (16) ಎಂಬುವರು ಕೊಚ್ಚಿ ಹೋಗಿದ್ದಾನೆ.
ವಿದ್ಯುತ್ ಶಾಕ್ಗೆ ರೈತ ಬಲಿ:
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿಯಲ್ಲಿ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಮೇಲೆ ಕಾಲಿಟ್ಟಪರಿಣಾಮ ಕರೆಂಟ್ ಹೊಡೆದು ಲೇಕಪ್ಪ (45) ಎಂಬ ರೈತ ಮೃತಪಟ್ಟರೆ, ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ವ್ಯಕ್ತಿಯೊಬ್ಬರು ಶಿವಮೊಗ್ಗದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಹೇಮಾವತಿ ಪಾಲು:
ಚಿಕ್ಕಮಗಳೂರು ಜಿಲ್ಲೆಯ ದಿಣ್ಣೆ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕುಮಾರ್ (45) ಎಂಬುವರು ಮೃತಪಟ್ಟಿದ್ದರೆ, ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದ ಶ್ರೀವತ್ಸ (21) ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ