5 ಕೇಸ್‌ ಪತ್ತೆಯಾದ್ರೆ ಹಳ್ಳಿ ಸೀಲ್‌ಡೌನ್‌: ಸಚಿವ ಸುಧಾಕರ್‌

By Kannadaprabha NewsFirst Published Jun 12, 2021, 7:11 AM IST
Highlights

* ಅನ್‌ಲಾಕ್‌ ಮಾಡ್ತಿದ್ದೇವೆ, ಸೋಂಕು ಹೆಚ್ಚಾದರೆ ಮತ್ತೆ ಕ್ರಮ
* ಮೂರ್ನಾಲ್ಕು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ
* ಡೋಸ್‌ ಪಡೆದ ಜನರೂ ಎಚ್ಚರಿಕೆಯಿಂದ ಇರಬೇಕು

ಬೆಂಗಳೂರು(ಜೂ.12): ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕೆಲವೆಡೆ ಅನ್‌ಲಾಕ್‌ ಮಾಡಲಾಗಿದೆ. ಹೀಗೆಂದು ಜನರು ನಿಯಮಗಳನ್ನು ಉಲ್ಲಂಘಿಸಿ ಸೋಂಕು ಹೆಚ್ಚಳವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮವೊಂದರಲ್ಲಿ ಐದು ಪ್ರಕರಣ ಬೆಳಕಿಗೆ ಬಂದರೆ ಆ ಗ್ರಾಮವನ್ನೇ ಸೀಲ್‌ಡೌನ್‌ ಮಾಡಬೇಕು. ಸೋಂಕು ತಗುಲಿದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸಬೇಕು. ಹೆಚ್ಚು ಟೆಸ್ಟ್‌ಗಳನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು. ಎರಡು ಡೋಸ್‌ ಪಡೆದ ಜನರೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಅನ್ ಲಾಕ್  ಸಂಪೂರ್ಣ ಮಾರ್ಗಸೂಚಿ.. ಏನಿದೆ? ಏನಿಲ್ಲ?

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಆರ್ಥಿಕ ನಷ್ಟ ಉಂಟಾಗಿತ್ತು. ಜನ ಜೀವನದ ಮೇಲೂ ಬಹಳ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಕೆಲ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಇದು ದುರುಪಯೋಗವಾದರೆ ಮುಂದೆ ಕಠಿಣ ಕ್ರಮ ಅನಿವಾರ್ಯ ಎಂದು ಪುನರುಚ್ಚರಿಸಿದರು.

3-4 ತಿಂಗಳಲ್ಲಿ ಎಲ್ಲರಿಗೂ ಲಸಿಕೆ: 

ಮೂರ್ನಾಲ್ಕು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ. ಅಲ್ಲಿಯವರೆಗೂ ಎಚ್ಚರಿಕೆಯಿಂದ ಇರಬೇಕು. ಕೊರೋನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸಬೇಡಿ ಎಂದರು.

ಬೆಂಗಳೂರು ನೋಡಿದ್ರೆ ಭಯ

ಬೆಂಗಳೂರು ನಗರದಲ್ಲಿ ಅನ್‌ಲಾಕ್‌ಗೂ ಮೊದಲೇ ಜನರೇ ಅನಗತ್ಯವಾಗಿ ಓಡಾಡುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ. ಸೋಂಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಜನರು ಅನಗತ್ಯವಾಗಿ ಓಡಾಡಬಾರದು. ಸ್ಪಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ. ಜನರು ಎಚ್ಚರಿಕೆಯಿಂದ ಇರಬೇಕು​ ಎಂದು ಸಲಹೆ ನೀಡಿದರು.
 

click me!