Omicron: ಒಮಿಕ್ರಾನ್‌ ಆತಂಕ, ಸಿನಿಮಾ, ಹೋಟೆಲ್, ಮಾಲ್ ಬಂದ್ ಬಗ್ಗೆ ಸ್ಪಷ್ಟನೆ ಕೊಟ್ಟ ಅಶ್ವತ್ಥನಾರಾಯಣ

By Suvarna NewsFirst Published Dec 2, 2021, 7:57 PM IST
Highlights

* ಕರ್ನಾಟಕದಲ್ಲಿ ಒಮಿಕ್ರಾನ್‌ ಆತಂಕ
* ಒಮಿಕ್ರಾನ್‌ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ 
* ಸಿನಿಮಾ, ಹೋಟೆಲ್, ಮಾಲ್ ಬಂದ್ ಬಗ್ಗೆ ಸ್ಪಷ್ಟನೆ ಕೊಟ್ಟ ಅಶ್ವತ್ಥನಾರಾಯಣ

ಬೆಂಗಳೂರು, (ಡಿ.02): ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಬಂಧ ಇಬ್ಬರಲ್ಲಿ ಒಮಿಕ್ರಾನ್ (Omicron) ಪತ್ತೆಯಾಗಿದೆ. ಈ ಬಗ್ಗೆ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. 

ವಿದೇಶದಿಂದ ಆಗಮಿಸಿದ ಕರ್ನಾಟಕದ ಇಬ್ಬರು ಪುರುಷರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಇದು ಭಾರತದಲ್ಲಿ ದೃಢಪಟ್ಟ ಮೊದಲ ಎರಡು ಪ್ರಕರಣಗಳು" ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದರಿಂದ ಕರ್ನಾಟಕದಲ್ಲಿ ಆತಂಕ ಮನೆ ಮಾಡಿದೆ.

Omicron Cases In Karnataka: ಕರುನಾಡಿನ ಮೂಲಕ ಭಾರತಕ್ಕೆ ಕಾಲಿಟ್ಟ ಒಮಿಕ್ರಾನ್, ಇಬ್ಬರಲ್ಲಿ ಪತ್ತೆ!

ಇನ್ನು ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ(Dr CN Ashwath Narayan) ಪ್ರತಿಕ್ರಿಯಿಸಿದ್ದು,ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಒಮಿಕ್ರಾನ್‌(Omicron) ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರ ಮಂದಿರ, ಹೋಟೆಲ್ ಮತ್ತು ಮಾಲ್ ಗಳನ್ನು ಮುಚ್ಚುವುದಿಲ್ಲ. ಆದರೆ, ಇಂತಹ ಸ್ಥಳಗಳಿಗೆ ಹೋಗುವವರಿಗೆ ಸದ್ಯದಲ್ಲೇ ಲಸಿಕೆ ಕಡ್ಡಾಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ವೈದ್ಯರನ್ನು ಕುರಿತು ನಿರ್ಮಿಸಿ, ಬಿಡುಗಡೆ ಮಾಡಿರುವ `ಪ್ರೇಮಂ ಪೂಜ್ಯಂ’ ಚಿತ್ರದ ನಾಯಕ ನಟ ಪ್ರೇಮ್ ಅವರು ಗುರುವಾರ ತಮ್ಮನ್ನು ಇಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ವಲಯದ ಚಟುವಟಿಕೆಗಳನ್ನು ನಿರ್ಬಂಧಿಸುವ ಚಿಂತನೆ ಸರಕಾರಕ್ಕಿಲ್ಲ ಎಂದರು.

Covid Vaccine ಪಡೆಯದಿದ್ರೆ ಪಾರ್ಕ್‌, ಮಾಲ್‌ಗೆ ನೋ ಎಂಟ್ರಿ..? 

ಒಮಿಕ್ರಾನ್‌ ವೈರಾಣುವಿನಿಂದ ಜೀವಕ್ಕೇನೂ ಅಪಾಯವಿಲ್ಲ. ಆದರೆ ಮುಂಜಾಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದುವರೆಗೂ ಒಂದೂ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸರಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ, ಅನಗತ್ಯ ಭಯ-ಭೀತಿಗಳು ಬೇಡ ಎಂದು ಅವರು ಹೇಳಿದರು. 

ಚಿತ್ರಮಂದಿರ, ಹೋಟೆಲ್, ಮಾಲ್ ಗಳಂತಹ ಜನಸಂದಣಿ ಸ್ಥಳಗಳು ಸೇರಿದಂತೆ ಎಲ್ಲೆಡೆಗಳಿಗೂ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗಬೇಕು. ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿರುವ 11 ದೇಶಗಳ ಪರಿಸ್ಥಿತಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಇವರ ಪರೀಕ್ಷಾ ವರದಿಗಳನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳಿಸಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳನ್ನು ಪ್ರತ್ಯೇಕ ವಾಸದಲ್ಲಿಡಲಾಗಿದೆ. ಅಂತಿಮ ಫಲಿತಾಂಶ ನೆಗೆಟೀವ್ ಆಗಿ ಬಂದರೆ ಮಾತ್ರ ಇವರನ್ನು ಮನೆಗೆ ಕಳಿಸಿ ಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. 

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ನೆಗೆಟೀವ್ ಬಂದವರಿಗೆ ಮಾತ್ರ ರಾಜ್ಯದೊಳಕ್ಕೆ ಪ್ರವೇಶಾನುಮತಿ ನೀಡಲಾಗುವುದು. ಈ ಆತಂಕದ ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವ ಮತ್ತು ಜೀವನ ಉಳಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಸಚಿವರು ನುಡಿದರು. 

ಒಮೈಕ್ರಾನ್ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಅಧಿವೇಶನವನ್ನು ಕೂಡ ರದ್ದುಪಡಿಸಬೇಕೆಂದು ವಿಧಾನಸೌಧ ಸಚಿವಾಲಯ ಸಲಹೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭಾಪತಿಯೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. 

*ಪ್ರೇಮ್ ಚಿತ್ರಕ್ಕೆ ಅಭಿನಂದನೆ 
ನಟ ಪ್ರೇಮ್ ವೈದ್ಯರಾಗಿ ಅಭಿನಯಿಸಿರುವ `ಪ್ರೇಮಂ ಪೂಜ್ಯಂ’ ಸಿನಿಮಾ ಜನಪರ ಕಳಕಳಿ ಹೊಂದಿದೆ. ಇವರು ನಮ್ಮೆಲ್ಲರ ಲವ್ಲಿ ಸ್ಟಾರ್ ಆಗಿದ್ದಾರೆ. ಇದರಲ್ಲಿ ಕರೋನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾತ್ರದಲ್ಲಿ ಇವರು ಜನರ ಜೀವವನ್ನು ರಕ್ಷಿಸುವ ಕೆಲಸ ಮಾಡುತ್ತಿರುವ ಕತೆ ಇದೆ. ಇದರಲ್ಲಿರುವ ಹಾಡುಗಳು ಕೂಡ ಚೆನ್ನಾಗಿದ್ದು, ಸರಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

click me!