
ಬೆಳಗಾವಿ (ಫೆ.21): ರಾಜ್ಯದ ಗಡಿಜಿಲ್ಲೆ ಬೆಳಗಾವಿಯಲ್ಲಿ ಬಸ್ನಲ್ಲಿ ಶಕ್ತಿ ಯೋಜನೆಯಡಿ ಪ್ರಯಾಣ ಮಾಡುತ್ತಿದ್ದ ಯುವತಿಗೆ ಆಧಾರ್ ಕಾರ್ಡ್ ತೋರಿಸುವಂತೆ ಕನ್ನಡದಲ್ಲಿ ಕೇಳಿದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡ ಹಲ್ಲೆ ಮಾಡಿದ್ದಾರೆ. ನೀವು ಮರಾಠಿಯಲ್ಲಿ ಮಾತನಾಡಬೇಕು ಎಂದು ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದು, ಕಂಡಕ್ಟರ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಬೆಳಗಾವಿ- ಸುಳೇಭಾವಿ ಮಾರ್ಗ ಮಧ್ಯೆ ಸಂಚರಿಸುವ ಬಸ್ನಲ್ಲಿ ಕರ್ತವ್ಯ ಮಾಡುತ್ತಿದ್ದ ನಿರ್ವಾಹಕ (ಕಂಡಕ್ಟರ್) ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ (51) ಮೇಲೆ ಸ್ಥಳೀಯ ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದ ಯುವತಿಗೆ ಆಧಾರ್ ಕಾರ್ಡ್ ತೋರಿಸುವಂತೆ ಕಂಡಕ್ಟರ್ ಕನ್ನಡದಲ್ಲಿಯೇ ಕೇಳಿದ್ದಾರೆ. ಆದರೆ, ನೀನು ಬೆಳಗಾವಿಯಲ್ಲಿ ಮರಾಠಿ ಮಾತನಾಡದೇ ಕನ್ನಡ ಮಾತನಾಡುತ್ತೀಯಾ? ಎಂದು ಕೆಲವರು ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ.
ನಾವಿರುವುದು ಕರ್ನಾಟಕ ರಾಜ್ಯದಲ್ಲಿ. ಕರ್ನಾಟಕ ಸರ್ಕಾರದಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯಡಿ ಪ್ರಯಾಣ ಮಾಡುವ ನೀವು ಈ ರಾಜ್ಯದ ಅಧಿಕೃತ ಭಾಷೆ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಾರೆ. ಇದಕ್ಕೆ ವಾಗ್ದಾದ ಮಾಡುತ್ತಾ ಗುಂಪು ಸೇರಿದ ಕೆಲವು ಜನರು ಕಂಡಕ್ಟರ್ಗೆ ಮರಾಠಿಯಲ್ಲಿ ಮಾತನಾಡುವಂತೆ ಆಗ್ರಹ ಮಾಡಿದ್ದಾರೆ. ಆಗ ಬಸ್ ಕಂಡಕ್ಟರ್, ಡ್ರೈವರ್ ಹಾಗೂ ಮರಾಠಿ ಪುಂಡರ ನಡುವೆ ವಾಗ್ವಾದ ನಡೆದು ನಿರ್ವಾಹಕನ ಮೇಲೆ ಮಾಡಿದ್ದಾರೆ. ಇದೀಗ ಹಲ್ಲೆಗೊಳಗಾದ ಬಸ್ ನಿರ್ವಾಹಕ ಬಿಮ್ಸ್ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕನಕಪುರ ಬಂಡೆಗೆ ಡಿಚ್ಚಿ ಹೊಡೆದ ಉದ್ಯಮಿ ಮೋಹನ್ದಾಸ್ ಪೈ!
ಮರಾಠಿ ಮಾತನಾಡದಿದ್ದಕ್ಕೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಕಂಡಕ್ಟರ್ ಮಹಾದೇವಪ್ಪ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯಲು ಬೆಳಗಾವಿಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಬಿಮ್ಸ್ ಆಸ್ಪತ್ರೆ ಬಂದಿದ್ದಾರೆ. ಗಾಯಾಳು ಕಂಡಕ್ಟರ್ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಸುಳೇಭಾವಿ ಬಳಿ ಬಸ್ ಕಂಡಕ್ಟರ್ ಜೊತೆ ಬಸ್ನಲ್ಲಿ ಕುಳಿತ ಹುಡುಗಿ, ಹುಡುಗನ ಜೊತೆ ಮಾತಿನ ಚಕಮಕಿ ನಡೆದಿದೆ. ಮರಾಠಿ ಭಾಷೆ ಬರದ ಕಾರಣ ಕಂಡಕ್ಟರ್ ಕನ್ನಡದಲ್ಲಿ ಮಾತನಾಡುತ್ತಾರೆ.
ಇದನ್ನೂ ಓದಿ: ಏನ್ ಐಡಿಯಾ ಗುರು! ಮೈಸೂರಿನ ಈ ರೈತ 4 ಎಕರೆ ಜಮೀನು ಸುತ್ತಲೂ ಮಾಡೆಲ್ಗಳ ಫೋಟೋ ಹಾಕಿದ್ದಾನೆ ಏಕೆ ಗೊತ್ತಾ?
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ರೀಹನ್ ಜಗದೀಶ್ ಅವರು, ಕಂಡಕ್ಟರ್ಗೆ ಮರಾಠಿ ಬರುವುದಿಲ್ಲ ಎಂದಿದ್ದಕ್ಕೆ ಅಲ್ಲಿದ್ದ ಯುವಕ ನೀವು ಮರಾಠಿ ಕಲಿಯಬೇಕು ಎಂದು ಹೇಳಿದ್ದಾನೆ. ಇದು ಕರ್ನಾಟಕ ಮರಾಠಿ ಏಕೆ ಕಲಿಯಬೇಕು ಎಂದು ಕೇಳಿದ ಕಂಡಕ್ಟರ್ ಜೊತೆಗೆ ಯುವಕ ಜಗಳ ಮಾಡಿದ್ದಾನೆ. ನಂತರ ಸ್ನೇಹಿತರನ್ನು ಕರೆಸಿ ಹಲ್ಲೆ ಮಾಡಿದ್ದಾರೆ. ಎರಡು ಬೈಕ್ಗಳಲ್ಲಿ ಬಂದ ನಾಲ್ಕೈದು ಜನ ಯುವಕರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಕಂಡಕ್ಟರ್ಗೆ ಒಳಪೆಟ್ಟು ಬಿದ್ದಿದೆ. ಮಾರಿಹಾಳ ಪ್ರಕರಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಕಾನೂನು ಪ್ರಕಾರ ಆರೋಪಿಗಳನ್ನು ವಶಕ್ಕೆ ಪಡೆಯುತ್ತೇವೆ. ಮರಾಠಿ ಬರಲ್ಲ ಅಂತಾ ಹೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಕಂಡಕ್ಟರ್ ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡಲು ಹೋದಾಗ ಕಾಂಪ್ರಮೈಸ್ ಮಾಡಿಕೊಳ್ಳುವಂತೆ ಕಂಡಕ್ಟರ್ಗೆ ಹೇಳಿದ್ದಾರೆ ಎಂಬ ಆರೋಪದ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ