
ಹುಬ್ಬಳ್ಳಿ, (ಡಿ.25): ಮೂರುಸಾವಿರ ಮಠ ಹಾಗೂ ಮಠದ ಆಸ್ತಿ ರಕ್ಷಣೆಗೆ ಮುಂದಾಗಿರುವುದಕ್ಕೆ ಜೀವ ಬೆದರಿಕೆ ಹಾಗೂ ತೇಜೋವಧೆ ಮಾಡಲಾಗುತ್ತಿದ್ದು, ಪ್ರಾಣ ಹೋದರೂ ಈ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ ಎಂದು ಬಾಲೆಹೊಸೂರು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿ (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ನಗದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೊರಟಾಗ ನಗರದ ಹೊರ ವಲಯದಲ್ಲಿ ಅಪರಿಚತರು ಕಾರು ನಿಲ್ಲಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕೆಲ ಸ್ವಾಮೀಜಿ ಹಾಗು ಗಣ್ಯರೊಂದಿಗೆ ಫೋನ್ ಮೂಲಕ ಕರೆ ಮಾಡಿ ಮತನಾಡಿಸಿ ಆಸ್ತಿ ದಾನ ಮಾಡಿರುವ ವಿಚಾರದಿಂದ ಹಿಂದೆ ಸರಿಯುವಂತೆ ಮಾತನಾಡಿಸಿದ್ದಾರೆ. ನನ್ನ ದೂರಿಗೆ ಬೆಲೆ ಸಿಗದ ಕಾರಣ ದೂರು ದಾಖಲು ಮಾಡಿಲ್ಲ. ಸರಕಾರದ ರಕ್ಷಣೆ ಸಿಗುವುದಿಲ್ಲ ಎನ್ನುವುದು ಮನವರಿಕೆಯಾಗಿದೆ ಎಂದು ಹೇಳಿದರು.
ಮೂರು ಸಾವಿರ ಮಠದ ಆಸ್ತಿ ವಿವಾದ: ದಿಂಗಾಲೇಶ್ವರ ಸ್ವಾಮೀಜಿ ಖಡಕ್ ಮಾತು
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಠ 25 ಎಕರೆ ದಾನ ಮಾಡುವುದು ಎಷ್ಟು ಸರಿ. ಈ ಹಿಂದೆ ಕೇವಲ 10 ಲಕ್ಷ ರೂ. ಆರ್ಥಿಕ ಸಮಸ್ಯೆಯಿಂದ ಕೇಶ್ವಾಪುರದಲ್ಲಿನ 2 ಎಕರೆ ಭೂಮಿ ಮಾರಾಟ ಮಾಡಿದ್ದಾರೆ. ಹೀಗಿರುವಾಗ 25 ಎಕರೆ ಮಠದ ಭೂಮಿಯನ್ನು ದಾನ ಮಾಡಿರುವುದರಲ್ಲಿ ಯಾವ ಅರ್ಥವಿದೆ. ಇಂದು ಯಾವ ಸಂಸ್ಥೆ ಉಚಿತ ಸೇವೆ ನೀಡುತ್ತಿವೆ ಎನ್ನುವ ಪ್ರಶ್ನೆ ಮೂಡುತ್ತದೆ. ಸೇವೆ ಅರ್ಥ ಕಳೆದುಕೊಂಡಿದೆ. ದಾನ ಪಡೆದಿರುವ ಸಂಸ್ಥೆ ಆರ್ಥಿಕವಾಗಿ ಸಾಕಷ್ಟು ಸದೃಢವಾಗಿದೆ ಎಂದರು.
2009 ರಲ್ಲಿ ಕೋಲ್ಕತ್ತದಲ್ಲಿ ನ್ಯಾಯ ನಿರ್ಣಯ ಸಂದರ್ಭದಲ್ಲಿ ಮಠದ ಆಸ್ತಿ ಪರಭಾರೆ ಮಾಡಬಾರದು ಎನ್ನುವ ದಾಖಲೆಯಿದೆ. ಸುಪ್ರೀಂ ಕೋರ್ಟ್ ನೇಮಿಸಿದ ಅರ್ಬಿಟೇಟರ್ ಮಾಡಿದ ಆದೇಶವನ್ನು ಧಾರವಾಡದಲ್ಲಿ ಪರಿವರ್ತಿಸಿ ದಾನ ಮಾಡಲಾಗಿದೆ. ಹೀಗಾಗಿ ಈ ದಾನ ಕಾನೂನು, ಧರ್ಮ ಹಾಗೂ ಸಿದ್ದಾಂತಗಳಿಗೆ ವಿರೋಧವಾಗಿದೆ. ಮಠ ಆರ್ಥಿಕ ಸಂಕಷ್ಟದಲ್ಲಿರುವಾಗ ಸುಮಾರು 500 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಸದೃಢ ಸಂಸ್ಥೆಗೆ ದಾನ ಮಾಡಿರುವುದಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.
ಮಠದ ಆಸ್ತಿ ದಾನ ಮಾಡಿಸುವಲ್ಲಿ ಮಠದ ಉನ್ನತ ಮಟ್ಟದ ಸಮಿತಿ ಕೈವಾಡವಿದೆ. ಶ್ರೀಗಳ ಮನಸ್ಸು ಕೆಡಿಸಿದ್ದಾರೆ. ಈ ಉನ್ನತ ಮಟ್ಟದ ಸಮಿತಿ ರಚನೆ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳ ಕುತಂತ್ರವಾಗಿದೆ. ಮಠದ ಆಸ್ತಿ ನಾಶಕ್ಕೆ ಅವರೇ ಕಾರಣರಾಗಿದ್ದಾರೆ. ನನ್ನನ್ನು ಉತ್ತರಾಧಿಕಾರಿ ಸ್ಥಾನದಿಂದ ಹೊರ ಹಾಕುವಲ್ಲಿ ಅವರ ಪಾತ್ರವಿದೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ