
ಬೆಂಗಳೂರು (ಮೇ 21): ರಾಜ್ಯ ರಾಜಕಾರಣದಲ್ಲಿ ಪರಿಶಿಷ್ಟ ಪಂಗಡದ (ST) ಮೀಸಲಾತಿ ಕಿಚ್ಚು ಮತ್ತೊಮ್ಮೆ ಜೋರಾಗಿದೆ. ಬಿಜೆಪಿಯಲ್ಲಿನ ಸಮುದಾಯದ ಪ್ರಭಾವಿ ನಾಯಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗ ತಮ್ಮದೇ ಸಮುದಾಯದ ಹಿತರಕ್ಷಣೆಗಾಗಿ ಕಣಕ್ಕಿಳಿದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶನಿವಾರ ನಡೆದ ಪರಿಶಿಷ್ಟ ಪಂಗಡದ ನಾಯಕರ ಮಹತ್ವದ ಸಭೆಯಲ್ಲಿ ಜಾರಕಿಹೊಳಿ ಅವರು ಸಮುದಾಯದ ಪರವಾಗಿ 'ಬ್ಯಾಟಿಂಗ್' ಆರಂಭಿಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ಸಭೆಯ ಪ್ರಮುಖ ಉದ್ದೇಶ ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡದ ನಾಯಕರನ್ನು ಕೇವಲ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದನ್ನು ತಡೆಯುವುದಾಗಿದೆ. "ಸಮುದಾಯದ ನಾಯಕರನ್ನು ಕೇವಲ ಚುನಾವಣಾ ದಾಳವಾಗಿ ಬಳಸಲಾಗುತ್ತಿದೆ, ಅವರಿಗೆ ಸೂಕ್ತ ಆದ್ಯತೆ ಮತ್ತು ಮೀಸಲಾತಿಯ ಹಕ್ಕನ್ನು ಕೊಡಿಸುವಲ್ಲಿ ವಿಫಲರಾಗುತ್ತಿದ್ದೇವೆ" ಎಂಬ ಆತಂಕವನ್ನು ರಮೇಶ್ ಜಾರಕಿಹೊಳಿ ಸಭೆಯಲ್ಲಿ ವ್ಯಕ್ತಪಡಿಸಿದರು. ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳುವ ತಂತ್ರಗಳಿಗೆ ಬ್ರೇಕ್ ಹಾಕಲು ಜಾರಕಿಹೊಳಿ ಅವರು ಈ ಸಭೆಯ ಮೂಲಕ ರಣತಂತ್ರ ರೂಪಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಈ ಸಭೆಯಲ್ಲಿ ಬಿಜೆಪಿಯ ಪ್ರಮುಖ ಎಸ್ಟಿ ನಾಯಕರು ಉಪಸ್ಥಿತರಿದ್ದರು. ಮಾಜಿ ಸಚಿವ ಬಿ. ಶ್ರೀರಾಮುಲು, ರಾಜುಗೌಡ, ಶ್ರೀನಿವಾಸ ದಾಸ ಕರಿಯಪ್ಪ, ಬಿ.ವಿ. ನಾಯಕ, ಬಂಗಾರು ಹನುಮಂತು, ಸಿದ್ಧರಾಜು ಹಾಗೂ ಪ್ರತಾಪಗೌಡ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿ, ಸಮುದಾಯದ ಮುಂದಿನ ಹಾದಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇಕಡಾ 3 ರಿಂದ 7ಕ್ಕೆ ಹೆಚ್ಚಿಸುವ ಹೋರಾಟವು ಸದ್ಯ ಹಾದಿ ತಪ್ಪಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕೇವಲ ರಾಜಕೀಯ ಭಾಷಣಗಳಿಗೆ ಸೀಮಿತವಾಗದೆ, ಮೀಸಲಾತಿ ಹೆಚ್ಚಳವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ ರಾಜ್ಯಾದ್ಯಂತ ವಿಭಾಗಾವಾರು ಸಭೆಗಳನ್ನು ನಡೆಸಿ, ಸಮುದಾಯವನ್ನು ಸಂಘಟಿಸಿ ಬೃಹತ್ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ನಡೆದಿದ್ದ ಬಿಜೆಪಿ ನಾಯಕರ ಸಭೆಯ ಬಗ್ಗೆ ರಮೇಶ್ ಜಾರಕಿಹೊಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆ ಸಭೆಯು ಕೇವಲ ರಾಜಕೀಯ ಪ್ರೇರಿತವಾಗಿತ್ತು ಮತ್ತು ಸಮುದಾಯದ ನೈಜ ಸಮಸ್ಯೆಗಳಿಗೆ ಅಲ್ಲಿ ಪರಿಹಾರವಿರಲಿಲ್ಲ. ಎಸ್ಟಿ ಸಮುದಾಯವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಆತಂಕವಿದೆ ಎಂದು ಅವರು ಎಚ್ಚರಿಸಿದ್ದಾರೆ. ಯಾವುದೇ ನಿರ್ದಿಷ್ಟ ಗುರಿ ಇಲ್ಲದ ಹೋರಾಟದಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ, ಆದ್ದರಿಂದ ಇನ್ನು ಮುಂದೆ ನೇರ ಮತ್ತು ಸ್ಪಷ್ಟ ಗುರಿಯೊಂದಿಗೆ ಹೋರಾಟ ನಡೆಸಬೇಕು ಎಂದು ಜಾರಕಿಹೊಳಿ ನಾಯಕರಿಗೆ ಸೂಚನೆ ನೀಡಿದ್ದಾರೆ.
ಈ ಸಭೆಯು ರಾಜ್ಯ ಬಿಜೆಪಿಯ ಆಂತರಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದ್ದು, ರಮೇಶ್ ಜಾರಕಿಹೊಳಿ ಅವರ ಈ ಮುಂದಾಳತ್ವವು ಮುಂಬರುವ ದಿನಗಳಲ್ಲಿ ಯಾವ ರೀತಿಯ ರಾಜಕೀಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ