
ಬೆಂಗಳೂರು (ಏ.15): "ಜನರ ರಕ್ಷಣೆ ಮಾಡಬೇಕಾದ ಜನನಾಯಕರೇ ಭಕ್ಷಕರಾದರೆ ಕಾಯುವವರು ಯಾರು?" – ಇದು ಸದ್ಯ ಕರ್ನಾಟಕದ ಜನತೆ ಕೇಳುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ರಾಜ್ಯದ ಪ್ರಮುಖ ಮೂರೂ ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರು ಒಂದಲ್ಲ ಒಂದು ಅಪರಾಧ ಕೃತ್ಯಗಳಲ್ಲಿ ಸಿಲುಕಿ, ಈಗ ವಿಧಾನಸೌಧದ ಬದಲಿಗೆ 'ಪರಪ್ಪನ ಅಗ್ರಹಾರ' ಜೈಲನ್ನು ದರ್ಶಿಸುವಂತಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ನಾವೇನು ಕಡಿಮೆ ಇಲ್ಲ ಎಂಬಂತೆ ಪೈಪೋಟಿಗೆ ಬಿದ್ದಿರುವ ನಾಯಕರಿಂದಾಗಿ ರಾಜ್ಯ ರಾಜಕಾರಣ ಇಂದು ಕಳಂಕಿತವಾಗಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅ*ತ್ಯಾಚಾ*ರದಂಥ ಗಂಭೀರ ಆರೋಪ ಹೊತ್ತಿರುವ ಇವರು ಈಗಾಗಲೇ ಜೈಲು ಪಾಲಾಗಿದ್ದು, ಜೆಡಿಎಸ್ ಪಕ್ಷಕ್ಕೆ ದೊಡ್ಡ ಮಟ್ಟದ ಮುಜುಗರ ತಂದಿಟ್ಟಿದ್ದಾರೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಬೇಕಿದ್ದ ನಾಯಕ, ಕಂಬಿಯ ಹಿಂದೆ ನಿಂತು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕ ವಿನಯ್ ಕುಲಕರ್ಣಿ ಅವರ ಪರಿಸ್ಥಿತಿ ಭಿನ್ನವಾಗಿಲ್ಲ. ಧಾರವಾಡದ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ 'ಒಳಸಂಚು' ರೂಪಿಸಿದ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಮಂಗಳವಾರ ಅವರೂ ಕೂಡ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದ್ದು, ಅತಿ ದೊಡ್ಡ ರಾಜಕೀಯ ಹಿನ್ನಡೆ ಅನುಭವಿಸಿದ್ದಾರೆ. ಅದರೊಂದಿಗೆ ಕಾರವಾರ ಶಾಸಕ ಸತೀಶ್ ಸೈಲ್ ಕೂಡ ಬೇಲಕೇರಿ ಪ್ರಕರಣದಲ್ಲಿ ಜೈಲು ಸೇರಿ, ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
ಇವರಿಬ್ಬರ ನಡುವೆ ಈಗ ಬಿಜೆಪಿಯ ಪ್ರಭಾವಿ ಶಾಸಕ ಬೈರತಿ ಬಸವರಾಜ್ ಅವರ ಸರದಿ ಬಂದಂತಿದೆ. ರೌಡಿ ಶೀಟರ್ ಬಿಕ್ಲುಶಿವ ಹತ್ಯೆ ಪ್ರಕರಣದಲ್ಲಿ ಬಸವರಾಜ್ ಅವರ ಪಾತ್ರದ ಕುರಿತು ತನಿಖೆ ತೀವ್ರಗೊಂಡಿದೆ. ಮಂಗಳವಾರವಷ್ಟೇ ಕರ್ನಾಟಕ ಹೈಕೋರ್ಟ್ ಇವರ ಜಾಮೀನು ರದ್ದು ಮಾಡುವ ಸಂಬಂಧ ನೋಟಿಸ್ ಜಾರಿ ಮಾಡಿದ್ದು, ಇವರೂ ಕೂಡ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ.
ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಕುಳಿತು ನಾಡಿನ ರಕ್ಷಣೆ ಮಾಡಬೇಕಾದವರು ಕೊಲೆ, ಅ*ತ್ಯಾಚಾ*ರ ಮತ್ತು ದ್ವೇಷ ರಾಜಕಾರಣದಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ದುರಂತ. ರಾಜಕೀಯ ಬಲ, ಹಣದ ಅಹಂನಿಂದ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಈ ನಾಯಕರಿಗೆ ಈಗ ಕಾಲವೇ ಸರಿಯಾದ ಪಾಠ ಕಲಿಸುತ್ತಿದೆ. ಅಧಿಕಾರದ ಮದದಲ್ಲಿ ಮೆರೆದವರು ಇಂದು ಕಂಬಿಯ ಹಿಂದೆ ತಲೆತಗ್ಗಿಸಿ ನಿಲ್ಲುವಂತಾಗಿದೆ. ಜನನಾಯಕರ ಈ ನಡೆಯಿಂದ ವ್ಯವಸ್ಥೆಯ ಮೇಲಿರುವ ಜನರ ವಿಶ್ವಾಸ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ