ರಾಜ್ಯದಲ್ಲಿ ಜೀವ ತೆಗೆಯುತ್ತಿದೆ ಕೋವಿಡ್‌ ಖಿನ್ನತೆ, ಸಂಕಷ್ಟ!

By Kannadaprabha NewsFirst Published Oct 4, 2021, 8:13 AM IST
Highlights

* ಕರ್ನಾಟಕದಲ್ಲಿ ಈವರೆಗೆ ಕೋರೋನಾ ಸಂಕಷ್ಟದಿಂದಾಗಿ 36ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣು

* ಉಡುಪಿಯಲ್ಲಿ ಗರಿಷ್ಠ 11 ಮಂದಿ, ಬೆಂಗಳೂರಿನಲ್ಲಿ 9 ಮಂದಿ ಆತ್ಮಹತ್ಯೆ

* ರಾಜ್ಯದಲ್ಲಿ ಜೀವ ತೆಗೆಯುತ್ತಿದೆ ಕೋವಿಡ್‌ ಖಿನ್ನತೆ, ಸಂಕಷ್ಟ!

ಬೆಂಗಳೂರು(ಅ.04): ಕೊರೋನಾ ಸೋಂಕು(Cvid 19) ತಗುಲಿ ಸಾವಿರಾರು ಮಂದಿ ಜೀವ ಕಳೆದುಕೊಂಡದ್ದು ಒಂದು ಕಡೆಯಾದರೆ, ಈ ಮಹಾಮಾರಿ ತಂದಿಟ್ಟ ಆರ್ಥಿಕ ಸಂಕಷ್ಟ(Economic Crisis) ಮತ್ತು ಮಾನಸಿಕ ಖಿನ್ನತೆಯಿಂದಾಗಿ(Mental Stress) ರಾಜ್ಯದಲ್ಲಿ ಅನೇಕರು ತಮ್ಮ ಜೀವವನ್ನೇ ಬಲಿಕೊಡುತ್ತಿದ್ದಾರೆ.

ಸೋಂಕಿನ ಭೀತಿ, ತಮ್ಮವರನ್ನು ಕಳೆದುಕೊಂಡ ನೋವು, ಕೃಷಿ-ಉದ್ಯಮದಲ್ಲಿ(Agriculture) ಆದ ನಷ್ಟ, ಕೆಲಸ ಕಳೆದುಕೊಂಡು ಬದುಕು ನಡೆಸುವುದು ಹೇಗೆನ್ನುವ ಚಿಂತೆ, ಖಿನ್ನತೆಯಿಂದಾಗಿ ರಾಜ್ಯದಲ್ಲಿ ಈಗಾಗಲೇ ಕನಿಷ್ಠ 36 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲೂ ಅತ್ಯಂತ ಕಳವಳಕಾರಿ ವಿಷಯ ಎಂದರೆ, ಸಾಮಾಜಿಕ ಹೀಯಾಳಿಕೆ, ದುಡಿಯುವ ಸದಸ್ಯರನ್ನು ಕಳೆದುಕೊಂಡ ಇಡೀ ಕುಟುಂಬಗಳೇ ಇತ್ತೀಚೆಗೆ ಸಾವಿನತ್ತ ಮುಖ ಮಾಡುತ್ತಿವೆ.

ಕೋವಿಡ್‌ನಿಂದಾಗಿ ಗಂಡನನ್ನು ಕಳೆದುಕೊಂಡ ಗದಗದ ಮಹಿಳೆಯೊಬ್ಬಳು ಕೆಲದಿನಗಳ ಹಿಂದೆ ತಮ್ಮ ಮೂವರು ಮಕ್ಕಳ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ನೆನಪು ಮಾಸುವ ಮುನ್ನವೇ ಇದೀಗ ಬೆಂಗಳೂರಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕರೊಬ್ಬರ ಪತ್ನಿ ತನ್ನಿಬ್ಬರು ಮಕ್ಕಳ ಜತೆ ಸಾವಿಗೆ ಶರಣಾಗಿದ್ದಾರೆ. ಇದೇ ರೀತಿ ಕೋವಿಡ್‌ ಸೃಷ್ಟಿಸಿದ ಆತಂಕ, ಸಂಕಷ್ಟ, ಮಾನಸಿಕ ಖಿನ್ನತೆಯಿಂದಾಗಿ ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರದಲ್ಲೂ ಇಡೀ ಕುಟುಂಬಗಳೇ ಆತ್ಮಹತ್ಯೆಯ ದಾರಿ ತುಳಿದಿವೆ. ಒಟ್ಟಾರೆ ನೋಡಿದರೆ ಉಡುಪಿಯಲ್ಲಿ 11, ಬೆಂಗಳೂರು 9, ಚಾಮರಾಜನಗರ, ದಕ್ಷಿಣ ಕನ್ನಡ ತಲಾ 4, ಧಾರವಾಡ, ದಾವಣಗೆರೆ ತಲಾ 3 ಹಾಗೂ ಮಂಡ್ಯ ಮತ್ತು ಹಾಸನದಲ್ಲಿ ತಲಾ ಒಬ್ಬರು ಸೇರಿ 36 ಮಂದಿ ಕೊರೋನಾ ಕಾರಣದಿಂದಾಗಿ ಬದುಕಿಗೆ ಕೊನೆ ಹಾಡಿದ್ದಾರೆ.

ಹೆದರಿ ದಂಪತಿ ಆತ್ಮಹತ್ಯೆ:

ದಕ್ಷಿಣ ಕನ್ನಡದ ಆರ‍್ಯ, ಗುಣ ಸುವರ್ಣ ದಂಪತಿ ಕತೆಯಂತೂ ನಿಜಕ್ಕೂ ಹೃದಯವಿದ್ರಾವಕ. ಸುರತ್ಕಲ್‌ನ ಚಿತ್ರಾಪುರದ ರಹೇಜಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಈ ದಂಪತಿ 2021 ಆ.17ರಂದು ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ದಂಪತಿಗೆ ಅನೇಕ ವರ್ಷವಾದರೂ ಮಕ್ಕಳಾಗಿರಲಿಲ್ಲ, ಆರೋಗ್ಯ ಸಮಸ್ಯೆಯೂ ಇತ್ತು. ಇದರ ನಡುವೆ ಕಾಡಿದ ಕೋವಿಡ್‌ ಬಗ್ಗೆ ಚಿಂತೆಗೀಡಾಗಿದ್ದರು. ನಸುಕಿನ ಜಾವ ಸ್ನೇಹಿತರಿಗೆ ಹಾಗೂ ಪೊಲೀಸ್‌ ಕಮಿಷನರ್‌ಗೆ ಕರೆ ಮಾಡಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಬಳಿಕ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿದಾಗ ಕೋವಿಡ್‌ ನೆಗೆಟಿವ್‌ ವರದಿ ಬಂದಿತ್ತು.

ಕೆಲಸ ಹೋಗಿದ್ದಕ್ಕೆ ಆತ್ಮಹತ್ಯೆ:

ಕೊರೋನಾದಿಂದಾಗಿ ಲಾರಿ ಚಾಲನೆ ವೃತ್ತಿ ಕಳೆದುಕೊಂಡಿದ್ದ ದಾವಣಗೆರೆಯ ಭಾರತ್‌ ಕಾಲನಿಯ ಕೃಷ್ಣ ನಾಯ್ಕ (35 ವರ್ಷ) ಅವರು ತಮ್ಮ ಪತ್ನಿ ಸುಮಾ (30) ಹಾಗೂ ಪುತ್ರ ಧ್ರುವ(6 ವರ್ಷ)ನಿಗೆ ವಿಷವುಣಿಸಿ ನಂತರ ತಾನು ನೇಣುಬಿಗಿದುಕೊಂಡು ಸೆ.19ರಂದು ಆತ್ಮಹತ್ಯೆಮಾಡಿಕೊಂಡಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ ಚಿಂತೆಯ ಜತೆಗೆ ಪತ್ನಿ ಅನಾರೋಗ್ಯದಿಂದಲೂ ಕೃಷ್ಣನಾಯ್ಕ ತೀವ್ರ ನೊಂದಿದ್ದರು.

ಆಸ್ಪತ್ರೆಯಲ್ಲಿ ಆತ್ಮಹತ್ಯೆ:

1ನೇ ಅಲೆ ವೇಳೆ ಕೋವಿಡ್‌ ಸೋಂಕು ಬಂದವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುವ ಸನ್ನಿವೇಶ ಇದ್ದಾಗ ಬೆಂಗಳೂರಿನ ಮೂರು ಪ್ರತ್ಯೇಕ ಆಸ್ಪತ್ರೆಗಳಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. 2ನೇ ಅಲೆ ಉತ್ತುಂಗದ ಅವಧಿಯಲ್ಲಿದ್ದಾಗ ಹುಬ್ಬಳ್ಳಿಯಲ್ಲಿ 78 ವರ್ಷದ ವೃದ್ಧೆ ಹಾಗೂ ಕ್ಯಾನ್ಸರ್‌ ಪೀಡಿತ ಮಹಿಳೆಯೊಬ್ಬರು ಸೋಂಕಿಗೆ ಹೆದರಿ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ರೀತಿ, ಕಳೆದ ವರ್ಷ ಹಾಸನದಲ್ಲಿ ವಯಸ್ಸಾದ ತಾಯಿಗೆ ಕೊರೋನಾ ಆಯಿತಲ್ವಾ ಎಂಬ ಚಿಂತೆಯಿಂದ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆಕೆಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಕಟ್ಟಡದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.

ಸಂಕಷ್ಟಕ್ಕೆ ಕುಟುಂಬ ಬಲಿ:

ಕೊರೋನಾ ತಂದಿಟ್ಟನೋವಿನ ಕತೆ ಇಲ್ಲಿಗೇ ಮುಗಿಯಲ್ಲ. ಮಹಾಮಾರಿಯಿಂದ ಸಾಕಷ್ಟುಸಂಕಷ್ಟಅನುಭವಿಸಿದ್ದ ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಪಂ ವ್ಯಾಪ್ತಿಯ ಎಚ್‌.ಮೂಕಳ್ಳಿಯ ಮಹದೇವಪ್ಪ ಮತ್ತು ಪತ್ನಿ ಮಂಗಳಮ್ಮ ಅವರು ತಮ್ಮಿಬ್ಬರು ಪುತ್ರಿಯರು ಜೂ.2ರಂದು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಯಿ ಪಾರು-ಮಗು ಸಾವು:

ಬೆಂಗಳೂರಿನ ರಾಜಾನುಕುಂಟೆ ಸಮೀಪದ ದಿಬ್ಬೂರಿನಲ್ಲಿ ಖಿನ್ನತೆಗೊಳಗಾಗಿದ್ದ ವರಲಕ್ಷ್ಮೇ ಎನ್ನುವ ಮಹಿಳೆಯೊಬ್ಬರು ತಮ್ಮಿಬ್ಬರು ಮಕ್ಕಳ ಜತೆಗೆ ಸೆ.22ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಆ ವೇಳೆ ವರಲಕ್ಷ್ಮೇ ಅವರ 8 ವರ್ಷದ ಮತ್ತೊಂದು ಮಗು ಜೋರಾಗಿ ಚೀರಾಡಿದಾಗ ನೆರೆಮನೆಯವರು ರಕ್ಷಣೆಗೆ ಬಂದಿದ್ದು, ಈ ವೇಳೆ ತಾಯಿ ಬದುಕುಳಿದರೆ ಮಗಳು ಕೊನೆಯುರಿಸಿರೆಳೆದಳು.

ಸಾವಿಗೆ ಕಾರಣಗಳು?

-ಬಂಧುಗಳನ್ನು ಹಠಾತ್‌ ಕಳೆದುಕೊಂಡ ನೋವು

-ಕೋವಿಡ್‌ನಿಂದ ನೌಕರಿ ಖೋತಾ

-ವ್ಯಾಪಾರದಲ್ಲಿ ನಷ್ಟ, ಸಾಲದ ಹೊರೆ

-ಈ ಹೊಡೆತದಿಂದ ಮುಂದೆ ಬದುಕುವುದು ಹೇಗೆಂಬ ಚಿಂತೆ

click me!