ಸರ್ಕಾರಿ ನೌಕರರ ವರ್ಗಾವಣೆಗೆ 'ಸಿಎಂ ಹಸ್ತಕ್ಷೇಪ' ಸಲ್ಲದು, ಮಾಡಲು ಇದಕ್ಕಿಂತ ದೊಡ್ಡ ಕೆಲಸಗಳಿವೆ - ಹೈಕೋರ್ಟ್ ತರಾಟೆ!

Published : Mar 19, 2026, 08:48 PM IST
Karnataka High Court

ಸಾರಾಂಶ

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ನೇರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವರ್ಗಾವಣೆ ವಿಚಾರಗಳನ್ನು ಆಯಾ ಇಲಾಖೆಗಳಿಗೆ ಬಿಡಬೇಕು ಮತ್ತು ಸಿಎಂ ಇಂತಹ ಸಣ್ಣ ವಿಚಾರಗಳಲ್ಲಿ ಸಮಯ ವ್ಯಯಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರು (ಮಾ.19): ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳ ಕಚೇರಿ (CMO) ನೇರವಾಗಿ ಹಸ್ತಕ್ಷೇಪ ಮಾಡುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 'ಮುಖ್ಯಮಂತ್ರಿಗಳಿಗೆ ವರ್ಗಾವಣೆಗಿಂತಲೂ ಮಾಡಬೇಕಾದ ಉತ್ತಮ ಕೆಲಸಗಳು ಬಹಳಷ್ಟಿವೆ. ಇಂತಹ ಸಣ್ಣ ವಿಚಾರಗಳಿಗೆ ಅವರು ತಮ್ಮ ಸಮಯವನ್ನು ವಿನಿಯೋಗಿಸಬಾರದು' ಎಂದು ನ್ಯಾಯಪೀಠ ಮಾರ್ಮಿಕವಾಗಿ ಹೇಳಿದೆ.

ಘಟನೆಯ ಹಿನ್ನೆಲೆ:

ಬೆಸ್ಕಾಂನ (BESCOM) ವೈಟ್‌ಫೀಲ್ಡ್ ವಿಭಾಗದ ಸಹಾಯಕ ಇಂಜಿನಿಯರ್ (AE) ತಮ್ಮ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿಯ (WA No. 2 of 2025) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಆದೇಶ ನೀಡಿದೆ. ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಏಕಸದಸ್ಯ ಪೀಠವು ಈ ಹಿಂದೆ ನೀಡಿದ್ದ ಅಭಿಪ್ರಾಯಗಳನ್ನು ಎತ್ತಿಹಿಡಿದ ನ್ಯಾಯಪೀಠ, ಮುಖ್ಯಮಂತ್ರಿಗಳ ಕಚೇರಿಯಿಂದ ಬಿ ಹಾಗೂ ಸಿ ವರ್ಗದ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ನೂರಾರು ಶಿಫಾರಸು ಪತ್ರಗಳು ಹೊರಬರುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತು.

ಹೈಕೋರ್ಟ್ ಆಕ್ಷೇಪದ ಸಾರಾಂಶ:

'ವರ್ಗಾವಣೆ ಮತ್ತು ಪೋಸ್ಟಿಂಗ್ ವಿಚಾರಗಳನ್ನು ಆಯಾ ಆಡಳಿತ ಇಲಾಖೆಗಳಿಗೆ ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ಬಿಡಬೇಕು. ರಾಜ್ಯದ ಅತ್ಯುನ್ನತ ಅಧಿಕಾರಿಯಾದ ಮುಖ್ಯಮಂತ್ರಿಗಳು ಇಂತಹ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ತಮ್ಮ ಅಮೂಲ್ಯ ಸಮಯವನ್ನು ಇದಕ್ಕೆ ವ್ಯಯಿಸಬಾರದು' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಇನ್ನು ಮುಂದೆ ಮುಖ್ಯಮಂತ್ರಿಗಳ ಕಚೇರಿಯು ವರ್ಗಾವಣೆ ಕೋರಿ ಬರುವ ಯಾವುದೇ ನೇರ ಮನವಿಗಳನ್ನು ಸ್ವೀಕರಿಸಬಾರದು ಎಂದು ಸ್ಪಷ್ಟಪಡಿಸಿದೆ.

ಮುಖ್ಯ ಕಾರ್ಯದರ್ಶಿಯವರ ಸ್ಪಷ್ಟನೆ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಂದ (CS) ಸ್ಪಷ್ಟನೆ ಕೇಳಿತ್ತು. ಇದಕ್ಕೆ ಅಫಿಡವಿಟ್ ಸಲ್ಲಿಸಿರುವ ಮುಖ್ಯ ಕಾರ್ಯದರ್ಶಿಯವರು, 'ಮುಖ್ಯಮಂತ್ರಿಗಳ ಕಚೇರಿಯಿಂದ ಬರುವ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ ಹೊರತು ಅವು ಅಂತಿಮ ವರ್ಗಾವಣೆ ಆದೇಶಗಳಲ್ಲ. ಪ್ರತಿಯೊಂದು ವರ್ಗಾವಣೆಯನ್ನು ಆಯಾ ಇಲಾಖೆಗಳು ವರ್ಗಾವಣೆ ಮಾರ್ಗಸೂಚಿ ಮತ್ತು ಕೆಸಿಎಸ್ (KCS) ನಿಯಮಗಳ ಅಡಿಯಲ್ಲೇ ಪರಿಶೀಲಿಸಿ ಆದೇಶ ಹೊರಡಿಸುತ್ತವೆ' ಎಂದು ಉತ್ತರಿಸಿದ್ದಾರೆ. ಸಿಎಂ ಕಚೇರಿಯ ಸಿಬ್ಬಂದಿಗೂ ಈ ಬಗ್ಗೆ ಸೂಕ್ತ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ ವರೆಗೆ ಯಥಾಸ್ಥಿತಿ:

ಪ್ರಸ್ತುತ ಪ್ರಕರಣದ ಅರ್ಜಿದಾರ ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಚ್ ಅಂತ್ಯದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿದೆ. ಏಪ್ರಿಲ್‌ನಿಂದ ಹೊಸ ವರ್ಗಾವಣೆ ಪ್ರಕ್ರಿಯೆ ಆರಂಭವಾಗುವುದರಿಂದ, ಅಲ್ಲಿಯವರೆಗೆ ಅವರನ್ನು ಹಾಲಿ ಇರುವ ಸ್ಥಳದಿಂದ ಬದಲಾಯಿಸಬಾರದು ಎಂದು ಪೀಠವು ನಿರ್ದೇಶಿಸಿದೆ. ಇರದಲ್ಲಿ ಮತ್ತೊಂದು ವಿಶೇಷವೆಂದರೆ, ಹೈಕೋರ್ಟ್ ನೀಡಿದ ಈ ಆದೇಶದ ಪ್ರತಿಯನ್ನು ನೇರವಾಗಿ ಮುಖ್ಯಮಂತ್ರಿಗಳಿಗೆ ತಲುಪಿಸಲು ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠವು ಸೂಚಿಸಿದೆ. ಇದರಿಂದ ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿ ನಡೆಯುತ್ತಿರುವ ವರ್ಗಾವಣೆ ಶಿಫಾರಸುಗಳ ಬಗ್ಗೆ ಸ್ವತಃ ಗಮನಹರಿಸಿ, ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂಬುದು ಕೋರ್ಟ್‌ನ ಆಶಯವಾಗಿದೆ.

ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ಮತ್ತು ಸರ್ಕಾರಿ ನೌಕರರ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದುವರೆಗೆ ವರ್ಗಾವಣೆಗಾಗಿ ರಾಜಕಾರಣಿಗಳ ಮತ್ತು ಸಿಎಂ ಕಚೇರಿಯ ಪ್ರಭಾವ ಬಳಸುತ್ತಿದ್ದವರಿಗೆ ಈ ಆದೇಶ ಒಂದು ಎಚ್ಚರಿಕೆಯ ಗಂಟೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ!
ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ: ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ಈದ್ ಆಚರಣೆಗೆ ಖಾಝಿಗಳ ಘೋಷಣೆ