
ಬೆಂಗಳೂರು(ಮೇ.28): ಹೊರ ರಾಜ್ಯಗಳಿಂದ ಹಂಚಿಕೆಯಾಗಿರುವ ಆಮ್ಲಜನಕ ತರಿಸಿಕೊಳ್ಳಲು ಅಡಚಣೆಗಳೇನಾದರೂ ಇದ್ದರೆ ತಕ್ಷಣ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯಪೀಠ ಗುರುವಾರ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ ನರಗುಂದ, ಕೇಂದ್ರ ಸರ್ಕಾರ ರಾಜ್ಯದ ಅಕ್ಸಿಜನ್ ಕೋಟಾವನ್ನು 1,200 ಮೆ.ಟನ್ಗೆ ಹೆಚ್ಚಿಸಿದೆ. ಇದರಲ್ಲಿ 370 ಮೆ.ಟನ್ ಅಕ್ಸಿಜನ್ ಹೊರ ರಾಜ್ಯಗಳಿಂದ ತರಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು. ಹೊರ ರಾಜ್ಯಗಳಿಂದ ಆಮ್ಲಜನಕ ತರಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಏನಾದರೂ ಸಮಸ್ಯೆ ಅಥವಾ ಅಡಚಣೆಗಳಿದ್ದರೆ ಅದನ್ನು ತಕ್ಷಣ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಈ ಕುರಿತು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಮರಣ ಪತ್ರವಿಲ್ಲದೆ ಅಂತ್ಯಕ್ರಿಯೆ: ವಿವರಣೆ ಕೇಳಿದ ಹೈಕೋರ್ಟ್
ಹೊರ ರಾಜ್ಯಗಳಿಂದ ಅಕ್ಸಿಜನ್ ತರಿಸಿಕೊಂಡ ರಾಜ್ಯ ಸರ್ಕಾರದ ಆಂಕಿ-ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಮೇ 10ರಿಂದ 24ರವರೆಗೆ ಬಹುತೇಕ ದಿನಗಳಲ್ಲಿ ಹೊರ ರಾಜ್ಯಗಳಿಂದ ಹಂಚಿಕೆಯಾಗಿದ್ದ ಆಮ್ಲಜನಕವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರ ತರಿಸಿಕೊಂಡಿಲ್ಲ. ಈವರೆಗೆ ಕೇವಲ 297 ಮೆ.ಟನ್ ಆಮ್ಲಜನಕ ಮಾತ್ರ ಹೊರ ರಾಜ್ಯಗಳಿಂದ ತರಿಸಿಕೊಳ್ಳಲಾಗಿದೆ. ಆದ್ದರಿಂದ ಹೊರ ರಾಜ್ಯಗಳಿಂದ ಆಮ್ಲಜನಕ ತರಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಏನಾದರೂ ಸಮಸ್ಯೆ ಅಥವಾ ಅಡಚಣೆಗಳಿದ್ದರೆ ಅದನ್ನು ತಕ್ಷಣ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಈ ಕುರಿತು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ, ರಾಜ್ಯ ಸರ್ಕಾರ ಮುಂದಿಡುವ ಸಮಸ್ಯೆ, ಅಡಚಣೆಗಳನ್ನು ಅದ್ಯತೆಯ ಮೇಲೆ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಬಫರ್ ದಾಸ್ತಾನು ವ್ಯವಸ್ಥೆ ಮಾಡುವುದು, ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಆಮ್ಲಜನಕ ಉತ್ಪಾದನೆ ಇಲ್ಲದ ಕಂದಾಯ ವಿಭಾಗಗಳಿಗೆ ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರು ಬೇರೆ ಕಂದಾಯ ವಿಭಾಗಗಳಿಂದ ಆಮ್ಲಜನಕ ತರಿಸಿಕೊಳ್ಳುವ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ