
ಬೆಂಗಳೂರು[ಜ.06]: ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಹೊಸದಾಗಿ ಹುದ್ದೆಗಳ ಸೃಜನೆ ಹಾಗೂ ಹುದ್ದೆಗಳ ಸಂಖ್ಯೆ ಹೆಚ್ಚಳ ಮಾಡಬೇಕಿದ್ದರೆ ಕಡ್ಡಾಯವಾಗಿ ಆರ್ಥಿಕ ಇಲಾಖೆ ಅನುಮೋದನೆ ಪಡೆಯಬೇಕು. ಇಲಾಖೆ ಅನುಮೋದನೆ ಪಡೆಯದೆ ಸೃಜಿಸುವ ಯಾವುದೇ ಹುದ್ದೆಗಳಿಗೂ ಆರ್ಥಿಕ ಇಲಾಖೆ ಅನುದಾನ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಆರ್ಥಿಕ ಇಲಾಖೆಯು, ಇನ್ನು ಮುಂದೆ ಯಾವುದೇ ಇಲಾಖೆ, ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆ, ಪ್ರಾಧಿಕಾರಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹುದ್ದೆಗಳ ಸೃಜನೆ ಬಗ್ಗೆ ತಮ್ಮ ಹಂತದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬಾರದು. ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಿ ಇಲಾಖೆಯ ಅನುಮತಿ ಪಡೆದ ನಂತರವೇ ಯೋಜನೆ ಅನುಷ್ಠಾನದ ಕುರಿತು ಆದೇಶ ಹೊರಡಿಸಬೇಕು. ಒಂದು ವೇಳೆ ಈ ಸೂಚನೆಗಳನ್ನು ಉಲ್ಲಂಘಿಸಿ ಹೊರಡಿಸುವ ಯಾವುದೇ ಆದೇಶಗಳನ್ನು ಆರ್ಥಿಕ ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಸಂಬಂಧ ಅನುದಾನವನ್ನೂ ನೀಡುವುದಿಲ್ಲ ಎಂದು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕೆಲವು ಇಲಾಖೆಗಳಲ್ಲಿ ಹುದ್ದೆಗಳ ಸೃಜನೆ ಅಗತ್ಯವಿರುವ ಯೋಜನೆಗಳನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಆಯಾ ಇಲಾಖೆಗಳಲ್ಲೇ ಜಾರಿಗೆ ಆದೇಶ ಮಾಡಲಾಗಿದೆ. ಉದಾ: ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಅವಕಾಶ ಹೆಚ್ಚಿಸುವಂತಹ ಯೋಜನೆಗಳಿಗೆ ಹೆಚ್ಚುವರಿ ಹುದ್ದೆಗಳ ಸೃಜನೆ ಅಗತ್ಯವಿರುತ್ತದೆ. ಇಂತಹ ಯೋಜನೆಗಳನ್ನು ಆಡಳಿತ ಇಲಾಖೆಯ ಹಂತದಲ್ಲೇ ತೀರ್ಮಾನಿಸಿ ಆದೇಶಗಳನ್ನು ಹೊರಡಿಸಲಾಗಿದೆ. ಬಳಿಕ ಹುದ್ದೆಗಳ ಸೃಜನೆಗೆ ಆರ್ಥಿಕ ಇಲಾಖೆಯನ್ನು ಸಂಪರ್ಕಿಸುತ್ತಿರುವುದು ಗಮನಕ್ಕೆ ಬಂದಿದೆ.
ಈ ರೀತಿಯ ನಡೆ ನಿಯಮಗಳ ಸ್ಪಷ್ಟ ಉಲ್ಲಂಘನೆ. ಇಂತಹ ಕ್ರಮದಿಂದ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುವುದಲ್ಲದೆ ಆರ್ಥಿಕ ಶಿಸ್ತು ಹಾಳಾಗುತ್ತಿದೆ. ಅನಾವಶ್ಯಕ ಆಡಳಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇನ್ನು ಮುಂದೆ ಯಾವುದೇ ಇಲಾಖೆಗಳು ಹುದ್ದೆಗಳ ಸೃಜನೆ ಬಗ್ಗೆ ತಮ್ಮ ಹಂತದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ