ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ತಪ್ಪಿಸಲು ಮುಂದಾದ ಕೆಎಎಸ್‌ ಅಧಿಕಾರಿಯದ್ದೇ ತಪ್ಪು: ಸಿಎಂ ಸಿದ್ದರಾಮಯ್ಯ!

By Sathish Kumar KHFirst Published Jan 24, 2024, 11:41 AM IST
Highlights

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿದ್ದ ಆರ್ಥಿಕ ನಷ್ಟವನ್ನು ಉಳಿಸಲು ಮುಂದಾದ ತಹಶೀಲ್ದಾರ್ ಅವರದ್ದೇ ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಹೇಳಿದ್ದಾರೆ.

ಬೆಂಗಳೂರು (ಜ.24): ರಾಜ್ಯ ಸರ್ಕಾರದಿಂದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೆ ನೀಡಲಾಗುವ ತಸ್ತೀಕ್‌ ಹಣವನ್ನು ಹೆಚ್ಚಾಗಿ ಪಡೆದಿರುವುದರಲ್ಲಿ ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ತಪ್ಪಿಲ್ಲ. ಆದರೂ, ಹಣ ವಾಪಸ್ ನೀಡುವಂತೆ ನೋಟಿಸ್ ನೀಡಿದ ತಹಸೀಲ್ದಾರ್ ಅವರ ತಪ್ಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಅಂದರೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ತಪ್ಪಿಸಲು ಮುಂದಾದ ಕೆಎಎಸ್ ಅಧಿಕಾರಿಯದ್ದೇ ತಪ್ಪು ಎಂದು ಮಾಹಿತಿ ನೀಡಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ಕಳೆದ 10 ವರ್ಷಗಳಿಂದ ನೀಡಲಾದ 4,74,000 ರೂ. ತಸ್ತೀಕ್ ಹಣವನ್ನು ವಾಪಸ್ ನೀಡುವಂತೆ ಚಿಕ್ಕಮಗಳೂರು ತಾಲೂಕು ಆಡಳಿತದಿಂದ ನೋಟಿಸ್‌ ನೀಡಲಾಗಿತ್ತು. ಆದರೆ, ಈ ವಿಚಾರ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿದ ಬೆನ್ನಲ್ಲಿಯೇ ಸ್ವತಃ ಮುತುವರ್ಜಿ ವಹಿಸಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಇಡೀ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದರು. ಈ ವೇಳೆ ವಾರ್ಷಿಕ 24,000 ರೂ. ನೀಡಬೇಕಾದ ಹಣದ ಬದಲಾಗಿ 90,000 ರೂ. ತಸ್ತೀಕ್ ಹಣ ನೀಡಲಾಗಿದೆ. ಆದ್ದರಿಂದ ಹಣ ವಾಪಸ್ ನೀಡುವಂತೆ ನೋಟಿಸ್ ನೀಡಲಾಗಿದ್ದು, ಅದನ್ನು ವಾಪಸ್ ನೀಡುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು. ಜೊತೆಗೆ, ಕಣ್ಣನ್ ಅವರಿಗೆ ಹೆಚ್ಚುವರಿ ಹಣವನ್ನು ಕೊಟ್ಟ ತಹಶೀಲ್ದಾರ್ ಅವರಿಂದಲೇ ಸರ್ಕಾರಕ್ಕೆ ನಷ್ಟವಾದ ಹಣವನ್ನು ವಸೂಲಿ ಮಾಡುವುದಾಗಿ ತಿಳಿಸಿದ್ದರು.

ಅರ್ಚಕರಿಂದ 10 ವರ್ಷದ ಸಂಬಳ ವಾಪಸ್ ಕೇಳಿದ ಸರ್ಕಾರ: ಎಲ್ಲರಿಗೂ ನೋಟಿಸ್ ಜಾರಿ

ಮುಜರಾಯಿ ಇಲಾಖೆಯ ನಿಯಮಾನುಸಾರ ದೇವಸ್ಥಾನಗಳನ್ನು ಆದಾಯಕ್ಕೆ ಅನುಗುಣವಾಗಿ ಎ, ಬಿ ಮತ್ತು ಸಿ ಕೆಟಗರಿಯನ್ನಾಗಿ ಮಾಡಲಾಗಿದೆ. ಆಯಾ ಕೆಟಗರಿ ಆಧಾರದಲ್ಲಿ ಅಲ್ಲಿನ ಅರ್ಚಕರಿಗೂ ತಸ್ತೀಕ್ ಹಣ (ಗೌರವಧನ ಎಂದು ಹೇಳಬಹುದು) ನೀಡಲಾಗುತ್ತದೆ. ಆದರೆ, ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರು ದೇವಾಲಯದ ಆದಾಯ ಕಡಿಮೆಯಿದ್ದರೂ ಅಲ್ಲಿನ ಅರ್ಚಕರಿಗೆ ಹೆಚ್ಚಿನ ತಸ್ತೀಕ್ ಹಣ ನೀಡಲಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದನ್ನು ಹಾಲಿ ತಹಶೀಲ್ದಾರರು ಪತ್ತೆ ಮಾಡಿದ್ದಾರೆ. ನಂತರ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡುತ್ತಿದ್ದ ತಸ್ತೀಕ್ ಹಣವನ್ನು ತಡೆಹಿಡಿದು, ಯಾವುದೇ ವಿಚಾರಣೆಯನ್ನೂ ಮಾಡದೇ 10 ವರ್ಷದಲ್ಲಿ ನೀಡಲಾದ ಹೆಚ್ಚುವರಿ ಹಣವನ್ನು (ಮಾಸಿಕ ಹೆಚ್ಚುವರಿ ನೀಡಲಾದ 4,500 ರೂ.ನಂತೆ 10 ವರ್ಷಕ್ಕೆ 4,74,000 ರೂ.) ಸರ್ಕಾರಕ್ಕೆ ಮರಳಿಸುವಂಯೆ ನೀಡಿದ್ದಾರೆ. ಈಗ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿದ್ದ ನಷ್ಟವನ್ನು ತಪ್ಪಿಸಲು ಮುಂದಾದ ತಹಶೀಲ್ದಾರ್ ಅವರದ್ದೇ ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹಿರೇಮಗಳೂರು ಅರ್ಚಕ ಕಣ್ಣನ್‌ಗೆ ನೀಡಿದ್ದ ನೋಟಿಸ್ ವಾಪಸಾತಿಗೆ ಆದೇಶಿಸಿದ ಸಚಿವ ರಾಮಲಿಂಗಾರೆಡ್ಡಿ!

ಹಿರೇಮಗಳೂರು ಕಣ್ಣನ್ ಅವರಿಗೆ ನೀಡಲಾಗಿದ್ದ ನೋಟಿಸ್ ಕುರಿತಾಗಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ ಅವರು 'ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

click me!